ಮೂಡುಬಿದಿರೆ: ದ.ಕ.ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಕಾಲೇಜೊಂದರ ತರಗತಿಗೆ ಅಕ್ರಮವಾಗಿ ಪ್ರವೇಶಿಸಿರುವ ಯುವಕನೊಬ್ಬ, ವಿದ್ಯಾರ್ಥಿನಿಯೊಬ್ಬಳ ಮುಖಕ್ಕೆ ಕತ್ತರಿಯಿಂದ ಚುಚ್ಚಿ ಹಲ್ಲೆಗೈದ ಘಟನೆ ಸೋಮವಾರ ನಡೆದಿದೆ. ಆರೋಪಿ ತುಮಕೂರು ಮೂಲದ ಮಂಜುನಾಥ ಎಂಬಾತನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಕತ್ತರಿಯಿಂದ ಇರಿತಕ್ಕೊಳಗಾದ ವಿದ್ಯಾರ್ಥಿನಿಯೂ ತುಮಕೂರಿನವಳಾಗಿದ್ದು, ಇತ್ತೀಚೆಗೆ ಆರೋಪಿ ಮಂಜುನಾಥನ ಮೊಬೈಲ್ ಕರೆಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದಳು. ಇದರಿಂದ ಹತಾಶೆಗೊಂಡ ಆರೋಪಿ ವಿದ್ಯಾರ್ಥಿನಿಯನ್ನು ಹುಡುಕಿಕೊಂಡು ಬಂದಿದ್ದನು.
ಅದರಂತೆ, ಸೋಮವಾರ ಕಾಲೇಜಿಗೆ ಬಂದಿದ್ದ ಆತ, ತರಗತಿಯೊಳಗೆ ಪ್ರವೇಶಿಸಿ ಆಕೆಗೆ ಕತ್ತರಿಯಿಂದ ಚುಚ್ಚಿದ್ದಾನೆ. ಮೂಡುಬಿದಿರೆ ಠಾಣೆಯಲ್ಲಿ ಮಂಜುನಾಥನ ವಿರುದ್ಧ ಪ್ರಕರಣ ದಾಖಲಾಗಿದ್ದು, ಇನ್ಸ್ಪೆಕ್ಟರ್ ಸಂದೇಶ್ ತನಿಖೆ ನಡೆಸುತ್ತಿದ್ದಾರೆ.