ಶಿವಮೊಗ್ಗ: ಚಂಪಕ ಸರಸು ಕಲ್ಯಾಣಿಯಲ್ಲಿ ಈಜಲು ಹೋಗಿ ಬೆಂಗಳೂರಿನ ಕುಶಾಲ್(22) ಎಂಬವರು ಮೃತಪಟ್ಟಿದ್ದಾರೆ.
ಕುಶಾಲ್ ತನ್ನ ಇಬ್ಬರು ಸ್ನೇಹಿತರಾದ ಸಾಯಿರಾಂ ಹಾಗೂ ಯಶವಂತ್ ಎಂಬುವರ ಜೊತೆ ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದರು. ಮೂವರು ಕೂಡಾ ಇಂಜಿನಿಯರ್ಗಳು. ನಿನ್ನೆ ಬೆಂಗಳೂರಿನಿಂದ ಹೊರಟಿದ್ದರು. ಮೊದಲು ಕುವೆಂಪು ಜನ್ಮಸ್ಥಳ ಕುಪ್ಪಳ್ಳಿಗೆ ಭೇಟಿ ನೀಡಬೇಕಿದ್ದ ಸ್ನೇಹಿತರಿಗೆ ಕುಶಾಲ್, ಚಂಪಕ ಸರಸು ಕಲ್ಯಾಣಿ ನೋಡಿಕೊಂಡು ಹೋಗಬಹುದೆಂದು ಹೇಳಿ ಕರೆದುಕೊಂಡು ಬಂದಿದ್ದರು. ಚಂಪಕ ಸರಸು ಬಳಿ ಬಂದಾಗ, ಸ್ಥಳೀಯರು ಈಜುವುದನ್ನು ನೋಡಿ ತಾನೂ ಸಹ ಈಜಲು ನೀರಿಗಿಳಿದಿದ್ದರು.
ಈಜುತ್ತಲೇ ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ. ನಂತರ ಸ್ನೇಹಿತರಿಬ್ಬರು ಜೋರಾಗಿ ಕೂಗಿದ್ದಾರೆ. ಸ್ಥಳೀಯರು ನೀರಿಗಿಳಿದು ನೋಡಿದಾಗ ಕುಶಾಲ್ ಮೃತಪಟ್ಟಿದ್ದರು. ಆನಂದಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಗರ ತಾಲೂಕು ಆನಂದಪುರಂ ಬಳಿಯ ಚಂಪಕ ಸರಸು ಕಲ್ಯಾಣಿ ತನ್ನ ಆಕಾರದಿಂದಲೇ ಪ್ರಸಿದ್ಧಿ ಪಡೆದಿದೆ.