ಮೈಸೂರು: ಮಾವಿನ ಹಣ್ಣು ಕೊಡುವುದಾಗಿ ಮನೆಗೆ ಕರೆದು ಐದೂವರೆ ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಅಪರಾಧಿಗೆ ಪೋಕ್ಸೋ ನ್ಯಾಯಾಲಯ 30 ವರ್ಷಗಳ ಕಠಿಣ ಸಜೆ ಹಾಗೂ 1ಲಕ್ಷ ರೂ. ದಂಡ ವಿಧಿಸಿದೆ.
ಟಿ.ನರಸೀಪುರ ತಾಲೂಕಿನ ಗ್ರಾಮವೊಂದರ ವ್ಯಕ್ತಿ ಶಿಕ್ಷೆ ಗುರಿಯಾದವ. 2023ರ ಜು.15ರಂದು ತನ್ನ ಗ್ರಾಮದ ಬಾಲಕಿಯ ತಂದೆ, ತಾಯಿ ಕೂಲಿ ಕೆಲಸಕ್ಕೆ ಹೋದಾಗ ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ನಡೆದ ಘಟನೆ ಬಗ್ಗೆ ಬಾಲಕಿ ತನ್ನ ತಾಯಿಗೆ ವಿವರಿಸಿದ್ದಳು. ಬಳಿಕ ಆರೋಪಿ ವಿರುದ್ಧ ಬನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಆನಂದ್ ಪಿ.ಹೊಗಾಡೆ, ಅಪರಾಧಿಗೆ 30 ವರ್ಷ ಕಠಿಣ ಸಜೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡದ ಹಣವನ್ನು ಪರಿಹಾರವಾಗಿ ಬಾಲಕಿಗೆ ನೀಡಬೇಕು. ಸರ್ಕಾರದಿಂದಲೂ ಸಂತ್ರಸ್ತೆಗೆ 6 ಲಕ್ಷ ರೂ. ಪರಿಹಾರ ಒದಗಿಸಬೇಕು ಎಂದು ಆದೇಶಿಸಿದ್ದಾರೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಬಿ.ಜಯಂತಿ ವಾದ ಮಂಡಿಸಿದರು.