ಹಾಡಹಗಲೇ ಕಾರಿನ ಗಾಜು ಒಡೆದು ಲಕ್ಷಾಂತರ ರೂಪಾಯಿ ಕಳ್ಳತನ: ಸಿಸಿಟಿವಿ ವಿಡಿಯೋ - Money Theft
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg?imwidth=128)
Published : Jul 11, 2024, 12:15 PM IST
![ETV Thumbnail thumbnail](https://etvbharatimages.akamaized.net/etvbharat/prod-images/11-07-2024/640-480-21921073-thumbnail-16x9-man.jpg)
ಚಿಕ್ಕಮಗಳೂರು: ಕಾರಿನ ಕಿಟಕಿ ಗಾಜು ಒಡೆದು ಲಕ್ಷಾಂತರ ರೂಪಾಯಿ ಎಗರಿಸಿರುವ ಘಟನೆ ತರೀಕೆರೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಯರೇಹಳ್ಳಿ ಗ್ರಾಮದ ಚಂದ್ರ ನಾಯಕ ಎಂಬವರು ತರೀಕೆರೆ ಪಟ್ಟಣದ ಕೆನರಾ ಬ್ಯಾಂಕ್ನಲ್ಲಿ ಚಿನ್ನಾಭರಣ ಅಡವಿಟ್ಟು 2.50 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಹಣವನ್ನು ಕಾರಿನೊಳಗಿಟ್ಟು ಉಪಹಾರ ಸೇವಿಸಲು ತೆರಳಿದ್ದಾರೆ.
ಇವರನ್ನೇ ಬ್ಯಾಂಕ್ನಿಂದ ಹಿಂಬಾಲಿಸಿಕೊಂಡು ಬಂದಿದ್ದ ಖದೀಮರು, ಹೊಂಚು ಹಾಕಿ ಕಾರಿನ ಗಾಜು ಒಡೆದಿದ್ದಾರೆ. ಒಬ್ಬ ಕಳ್ಳ ಬೈಕ್ನಲ್ಲಿ ಕುಳಿತು ಮಾಲೀಕನತ್ತ ಗಮನಿಸುತ್ತಿದ್ದರೆ, ಇನ್ನೊಬ್ಬ ಗಾಜು ಒಡೆದಿದ್ದಾನೆ. ತಕ್ಷಣ ಮತ್ತೊಬ್ಬ ಸ್ಥಳಕ್ಕಾಗಮಿಸಿ ಆಚೀಚೆ ನೋಡಿ ಕಾರಿನೊಳಗೆ ಕೈ ಹಾಕಿ ಹಣ ಎಗರಿಸಿದ್ದು, ಇಬ್ಬರೂ ಬೈಕ್ನಲ್ಲಿ ಪರಾರಿಯಾಗುತ್ತಾರೆ.
ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.