ಮೈಸೂರು: ಇತಿಹಾಸ ಪ್ರಸಿದ್ಧ ಮೈಸೂರು ಅರಮನೆಯಲ್ಲಿಂದು ರಾಜವಂಶಸ್ಥರ ಆಯುಧಗಳಿಗೆ ಸಂಪ್ರದಾಯದಂತೆ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ 12.20ರಿಂದ 12.40ರ ಶುಭ ಲಗ್ನದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಪೂರ್ವಜರು ಬಳಸುತ್ತಿದ್ದ ಆಯುಧಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಪಟ್ಟದ ಹಸು, ಪಟ್ಟದ ಕುದುರೆ, ಪಟ್ಟದ ಆನೆ ಹಾಗೂ ಪಲ್ಲಕ್ಕಿಯನ್ನು ಪೂಜಿಸಿದರು.
ಇದಕ್ಕೂ ಮೊದಲು ಆಯುಧಗಳನ್ನು ಕೋಡಿ ಸೋಮೇಶ್ವರ ದೇವಾಲಯದ ಬಳಿ ಸ್ವಚ್ಚಗೊಳಿಸಲಾಯಿತು. ಬಳಿಕ ರಾಜಪರಂಪರೆಯಂತೆ ಪಲ್ಲಕ್ಕಿಯಲ್ಲಿ ಆಯುಧಗಳನ್ನಿಟ್ಟು ಪಟ್ಟದ ಆನೆ, ಪಟ್ಟದ ಹಸುವಿನೊಂದಿಗೆ ಮಂಗಳವಾದ್ಯಗಳ ಮೂಲಕ ಅರಮನೆಯ ಕಲ್ಯಾಣ ಮಂಟಪಕ್ಕೆ ತೆಗೆದುಕೊಂಡು ಬರಲಾಯಿತು.
ಯದುವೀರ್ ಇಂದು ರಾತ್ರಿ ಖಾಸಗಿ ದರ್ಬಾರ್ ನಡೆಸಿ, ನಾಳೆ ವಿಜಯದಶಮಿ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಆಯುಧ ಪೂಜೆ ದಿನವೇ ಯದುವಂಶಕ್ಕೆ ಸಿಹಿ ಸುದ್ದಿ: ಯದುವೀರ್ - ತ್ರಿಷಿಕಾ ದಂಪತಿಗೆ 2ನೇ ಮಗು ಜನನ