ಮೈಸೂರು: "ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯನ್ನು ರದ್ದುಗೊಳಿಸಿ, ಮತ್ತೆ ಅಧಿಸೂಚನೆ ಹೊರಡಿಸಿ, ಹೊಸದಾಗಿ ಚುನಾವಣೆ ನಡೆಸಲು ಚುನಾವಣೆ ಆಯೋಗ ಮುಂದಾಗಬೇಕು" ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದರು.
ಮೈಸೂರಿನ ಹಾರ್ಡಿಂಗ್ ವೃತ್ತದ ಬಳಿ ಇಂದು ಪ್ರತಿಭಟನೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಚನ್ನಪಟ್ಟಣದಲ್ಲಿ ನಡೆಯುತ್ತಿರುವುದು ಉಪಚುನಾವಣೆಯಲ್ಲ. ಅದು ದರೋಡೆ. ಎರಡು ಪಕ್ಷದವರು ದರೋಡೆಗೆ ನಿಂತಿದ್ದಾರೆ. ಸಿದ್ದರಾಮಯ್ಯ ಅವರಿಂದ ಹಿಡಿದು ಎಲ್ಲರಿಗೂ ಮರ್ಯಾದೆ ಅಷ್ಟೇ. ಚುನಾವಣಾ ಆಯೋಗದ ಆಯುಕ್ತರು ಚನ್ನಪಟ್ಟಣದಲ್ಲಿ ಕ್ಯಾಂಪ್ ಮಾಡಬೇಕು. ಒಬ್ಬೊಬ್ಬರ ಬಳಿಯೂ 500 ಕೋಟಿ ರೂ. ಇದ್ದು, ಒಂದು ವೋಟ್ಗೆ 2,500 ರಿಂದ ಲಕ್ಷ ರೂ. ವರೆಗೆ ತಲುಪಿದೆ. ಹಾಗಾಗಿ ಚುನಾವಣಾ ಆಯೋಗ ಅಲ್ಲಿಗೆ ತೆರಳಿ ಪ್ರಕರಣ ದಾಖಲಿಸಿ, ಚುನಾವಣೆ ರದ್ದುಗೊಳಿಸಬೇಕು. ಮತ್ತೆ ಮರು ಚುನಾವಣೆ ಮಾಡಬೇಕು" ಎಂದು ಆಗ್ರಹಿಸಿದರು.
"ರಾಜ್ಯದಲ್ಲಿ ಹಿಂದಿ ದಬ್ಬಾಳಿಕೆ ಹಾಗೂ ಪರ ಭಾಷಿಕರ ವಲಸೆ ತಪ್ಪಿಸಿ, ಕನ್ನಡಿಗರನ್ನು ಉಳಿಸಿ, ಕನ್ನಡ ಬೆಳೆಸಿ. ರಾಜ್ಯದಲ್ಲಿ ಕನ್ನಡಿಗರ ಪರಿಸ್ಥಿತಿ ಕಣ್ಣೀರಿನ ಕಥೆಯಾಗಿದ್ದು, ನವೆಂಬರ್ 1ರಂದು ಮಾತ್ರ ನಾವು ಕನ್ನಡಿಗರಾಗುತ್ತಿದ್ದೇವೆ. ಇದು ನಿರಂತರವಾಗಿರಬೇಕು. ಈ ಹಿನ್ನೆಲೆಯಲ್ಲಿ ನಾನು ಕನ್ನಡ ಉಳಿಸಿ ಎಂದು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಕನ್ನಡಕ್ಕಾಗಿ ನಾನು ಸದಾ ಹೋರಾಟ ಮಾಡುತ್ತೇನೆ" ಎಂದು ಹೇಳಿದರು.
ಮಂಡ್ಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನೇಮಕಗೊಳ್ಳುವ ಕುರಿತು ಪ್ರತಿಕ್ರಿಯಿಸಿದ ವಾಟಾಳ್, "ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ಆಹ್ವಾನ ಬಂದಿಲ್ಲ. ಸಾಹಿತ್ಯ ಪರಿಷತ್ ಅವರಿಗೆ ಧೈರ್ಯ, ಪ್ರಾಮಾಣಿಕತೆ ಹಾಗೂ ಪ್ರೀತಿ ಇದ್ದರೆ ಆಹ್ವಾನಿಸಲಿ. ಆದರೆ, ನಾನು ಹೋಗಿ ಮಾತನಾಡುವ ವಿಷಯಕ್ಕೂ ಅಜಗಜಾಂತರವಿದೆ. ಅದು ಮಡಿ, ನಾವು ಮೈಲಿಗೆ. ಆದ್ದರಿಂದ ನಮ್ಮನ್ನು ಮುಟ್ಟಿಕೊಳ್ಳುವುದಿಲ್ಲ" ಎಂದು ಟೀಕಿಸಿದರು.
ಇದನ್ನೂ ಓದಿ: ನಿಖಿಲ್ ಎರಡು ಬಾರಿ ಸೋತಿದ್ರು, ಆಗ ಅಭಿಮನ್ಯು ಆಗಿರಲಿಲ್ವಾ: ಹೆಚ್ಡಿಕೆಗೆ ಸಿಎಂ ತಿರುಗೇಟು