ಬಳ್ಳಾರಿ: ಜಿಲ್ಲೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ, ಅಪಘಾತ ನಿಯಂತ್ರಣ ಮತ್ತು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಮೇಲೆ ಕ್ರಮ ಜರುಗಿಸಲು ಜಿಲ್ಲಾ ಪೊಲೀಸ್ ಇಲಾಖೆಯು ಆಧುನಿಕ ತಂತ್ರಜ್ಞಾನ ಸಾಧನಗಳನ್ನು ಬಳಸಿ ನಿಗಾವಹಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು ಹೇಳಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತಕ ವರ್ಷದಲ್ಲಿ ಇಲ್ಲಿಯವರೆಗೆ ಸುಮಾರು 300 ರಸ್ತೆ ಅಪಘಾತಗಳು ಸಂಭವಿಸಿದ್ದು, 118 ಜನ ಮೃತಪಟ್ಟಿದ್ದಾರೆ. 436 ಗಂಭೀರ ಸ್ವರೂಪದ ಗಾಯಗಳಾಗಿವೆ. ಹಾಗಾಗಿ ಜಿಲ್ಲೆಯಲ್ಲಿ ರಸ್ತೆ ಅಪಘಾತ ನಿಯಂತ್ರಿಸಲು, ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಈ ತಂತ್ರಜ್ಞಾನ ಬಳಕೆ ಮಾಡಲಾಗುವುದು ಎಂದು ತಿಳಿಸಿದರು.
![TRAFFIC VIOLATION ACCIDENT PREVENTION SP RANJITH KUMAR BALLARI](https://etvbharatimages.akamaized.net/etvbharat/prod-images/25-06-2024/21793856_lsdkfdfdsd.png)
ಸಂಚಾರಿ ನಿಯಮ ಉಲ್ಲಂಘನೆಗೆ ಸ್ಪೀಡ್ ಲೇಸರ್ ಗನ್ ಮತ್ತು ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಬ್ರೀಥ್ ಅಲ್ಕೋಹಾಲ್ ಅನಲೈಜರ್ ಸಾಧನಗಳು ಸಿಟಿಆರ್ಎಸ್ ಕಚೇರಿಯಿಂದ ಸರಬರಾಜು ಆಗಿವೆ. ಇವುಗಳ ಬಗ್ಗೆ ಈಗಾಗಲೇ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಸ್ಪೀಡ್ ಲೇಸರ್ ಗನ್: ಸ್ಪೀಡ್ ಲೇಸರ್ ಗನ್ ಉಪಕರಣವು ಸಂಪೂರ್ಣ ಡಿಜಿಟಲ್ ಆಗಿದ್ದು, ಇದರಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಸಂಚಾರಿ ನಿಯಮ ಉಲ್ಲಂಘನೆಯಾದಲ್ಲಿ ಅಂದಿನ ದಿನಾಂಕ, ಪ್ರಿಂಟ್ ದಿನಾಂಕ, ಸೌಂಡ್ ಡೆಸಿಬಲ್ ಮಾಹಿತಿ, ಸ್ಥಳ ಹಾಗೂ ವಾಹನದ ನೋಂದಣಿ ಸಂಖ್ಯೆ ಸೇರಿ ಸ್ವಯಂಚಾಲಿತವಾಗಿ ಈ ಉಪಕರಣವು ರೆಕಾರ್ಡ್ ಮಾಡಿಕೊಳ್ಳುತ್ತದೆ ಎಂದು ಎಸ್ಪಿ ಮಾಹಿತಿ ನೀಡಿದರು.
![TRAFFIC VIOLATION ACCIDENT PREVENTION SP RANJITH KUMAR BALLARI](https://etvbharatimages.akamaized.net/etvbharat/prod-images/25-06-2024/21793856_sdfjsdlfsd.png)
ಈ ಉಪಕರಣವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯಬಹುದಾದ ಸಾಧನವಾಗಿದ್ದು, ಅಪಾಯಕಾರಿ ಚಾಲನೆ, ಅತಿ ವೇಗ, ಚಾಲನೆ ಮಾಡುವಾಗ ಮೊಬೈಲ್ ಬಳಕೆ, ವ್ಹೀಲಿಂಗ್ ಮತ್ತು ರೇಸಿಂಗ್, ಹೆಲ್ಮೆಟ್ ಧರಿಸದೇ ವಾಹನ ಚಾಲನೆ, ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚು ಸವಾರರ ಸಂಚಾರ, ಸಿಗ್ನಲ್ ಜಂಪಿಂಗ್ ಮತ್ತು ಮಾದಕ ದ್ರವ್ಯದ ಅಮಲಿನಲ್ಲಿ ವಾಹನ ಚಾಲನೆ ಸೇರಿದಂತೆ ಇನ್ನು ಮುಂತಾದ ಸಂಚಾರ ನಿಯಮ ಉಲ್ಲಂಘನೆ ಗುರುತಿಸಿ ಪ್ರಕರಣ ದಾಖಲಿಸಬಹುದಾಗಿದೆ ಎಂದು ಅವರು ವಿವರಿಸಿದರು.
ವಾಹನ ಸವಾರರು ಅನಾವಶ್ಯಕವಾಗಿ ಪೊಲೀಸರೊಂದಿಗೆ ವಾಗ್ವಾದ ಮಾಡುವುದನ್ನು ತಪ್ಪಿಸಲು ಹಾಗೂ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತದೆ. ಜಿಲ್ಲಾ ಪೊಲೀಸ್ ಇಲಾಖೆಯು ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಬೇಕು. ವಾಹನ ಚಾಲನೆ ಮಾಡುವಾಗ ಸುರಕ್ಷತೆಗಾಗಿ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ತಪ್ಪದೇ ಧರಿಸಬೇಕು ಎಂದು ತಿಳಿಸಿದರು.
![TRAFFIC VIOLATION ACCIDENT PREVENTION SP RANJITH KUMAR BALLARI](https://etvbharatimages.akamaized.net/etvbharat/prod-images/25-06-2024/21793856_sdkfsdl.png)
ಬ್ರೀಥ್ ಅಲ್ಕೋಹಾಲ್ ಅನಲೈಜರ್: ಜಿಲ್ಲೆಯಲ್ಲಿ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಪ್ರಕರಣ ದಾಖಲಿಸಲು ಬ್ರೀಥ್ ಅಲ್ಕೋಹಾಲ್ ಅನಲೈಜರ್ ಡಿಜಿಟಲ್ ಉಪಕರಣವನ್ನು ಬಳಸಲಾಗುತ್ತಿದ್ದು, ಮದ್ಯ ಸೇವನೆ ಮಾಡಿದ ವ್ಯಕ್ತಿಯ ಭಾವಚಿತ್ರದ ಸಮೇತ ಮಾಹಿತಿ ದಾಖಲಾಗುತ್ತದೆ. ಈ ಉಪಕರಣವನ್ನು ಊದಿಸುವುದರ ಮೂಲಕ, ವಾಸನೆ ಮೂಲಕ ಮತ್ತು ನಿರಾಕರಿಸಿದಾಗ ಈ ಮೂರು ರೀತಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು ತಿಳಿಸಿದರು.
![TRAFFIC VIOLATION ACCIDENT PREVENTION SP RANJITH KUMAR BALLARI](https://etvbharatimages.akamaized.net/etvbharat/prod-images/25-06-2024/21793856_lsdkfsd.png)
ತುರ್ತು ಸೇವೆಗಳಿಗೆ 112 ಗೆ ಕರೆಮಾಡಿ: ಸಾರ್ವಜನಿಕರು ಯಾವುದೇ ದೌರ್ಜನ್ಯ, ಗಲಾಟೆ, ಹಲ್ಲೆ, ದೊಂಬಿ, ಕಳ್ಳತನ, ರಸ್ತೆ ಅಪಘಾತ ಹಾಗೂ ಇತರೆ ತುರ್ತು ಸೇವೆಗಳಿಗೆ 112 (ಇಆರ್ಎಸ್ಎಸ್) ಸಂಖ್ಯೆಗೆ ಕರೆ ಮಾಡಿದರೆ ಪೊಲೀಸ್ ಸೇವೆ ಪಡೆಯಬಹುದಾಗಿದೆ. 24x7 ತುರ್ತು ಪ್ರತಿಕ್ರಿಯೆ ಸೇವೆ ಲಭ್ಯವಿದ್ದು, ದೂರುದಾರರು ಕರೆ ಮಾಡಿದ 15 ನಿಮಿಷಗಳೊಳಗಾಗಿ ಘಟನಾ ಸ್ಥಳಕ್ಕೆ ಆಗಮಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ. ಇದರಿಂದ ಸಾರ್ವಜನಿಕರು ಪೊಲೀಸ್ ಠಾಣೆಗಳಿಗೆ ಬರುವ ಅವಶ್ಯಕತೆ ಇರುವುದಿಲ್ಲ ಎಂದು ಎಸ್ಪಿ ಅವರು ಹೇಳಿದರು.
ಸಂಚಾರಿ ಪೊಲೀಸ್ ಠಾಣೆಯ ಪಿಐ ಅಯ್ಯನಗೌಡ ಪಾಟೀಲ್ ಅವರು ಸ್ಪೀಡ್ ಲೇಸರ್ ಗನ್, ಬ್ರೀಥ್ ಅಲ್ಕೋಹಾಲ್ ಅನಲೈಜರ್ ಉಪಕರಣಗಳ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಿದರು. ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಡಿಎಆರ್ನ ಡಿಎಸ್ಪಿ ಬಿ.ತಿಪ್ಪೇಸ್ವಾಮಿ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.