ಬೆಂಗಳೂರು : ಬ್ಯಾಂಕ್ನಿಂದ ಹಣ, ಚಿನ್ನಾಭರಣ ಕೊಂಡೊಯ್ಯುವರ ಗಮನ ಬೇರೆಡೆ ಸೆಳೆದು ದೋಚುತ್ತಿದ್ದ ಇಬ್ಬರು ಆರೋಪಿಗಳನ್ನ ಕೆ.ಆರ್.ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗೋಪಿ ಹಾಗೂ ಅಖಿಲ್ ಬಂಧಿತರು.
ನವೆಂಬರ್ 29ರಂದು ಬ್ಯಾಂಕ್ವೊಂದರಿಂದ 4 ಲಕ್ಷ ರೂ. ಡ್ರಾ ಮಾಡಿಕೊಂಡು ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದ್ದ ಆರೋಪಿಗಳು, ಟಿ.ಸಿ ಪಾಳ್ಯ ಬಳಿ ''ಕಾರಿನ ವೀಲ್ ಪಂಚರ್ ಆಗಿದೆ" ಎಂದು ತಿಳಿಸಿರುತ್ತಾರೆ. ಕಾರು ಚಾಲಕ ಪಕ್ಕದಲ್ಲಿದ್ದ ಶಾಪ್ನಲ್ಲಿ ಪಂಚರ್ ಹಾಕಿಸಿ ಹಣ ಕೊಡಲು ಶಾಪ್ ಒಳಗಡೆ ಹೋದಾಗ ಕ್ಷಣ ಮಾತ್ರದಲ್ಲಿ ಕಾರಿನ ಡ್ಯಾಶ್ ಬೋರ್ಡ್ನಲ್ಲಿಟ್ಟಿದ್ದ 4 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿದ್ದರು. ಹಣ ಕಳೆದುಕೊಂಡ ಕಾರು ಚಾಲಕ ನೀಡಿದ ದೂರಿನ ಅನ್ವಯ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಆರೋಪಿಗಳನ್ನ ಬಂಧಿಸಿದ್ದಾರೆ. ಆರೋಪಿಗಳ ಮನೆಯಲ್ಲಿಟ್ಟಿದ್ದ 10 ಲಕ್ಷ ರೂ. ನಗದು, 2 ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ.
![Two accused arrested for stealing money and jewellery](https://etvbharatimages.akamaized.net/etvbharat/prod-images/15-01-2025/kn-bng-07-attention-divertion-7211560_15012025143816_1501f_1736932096_939.jpg)
ಇದೇ ಆರೋಪಿಗಳು ಕಳೆದ ಮೇ 16ರಂದು ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬ್ಯಾಂಕ್ನಿಂದ ಚಿನ್ನಾಭರಣ ಕೊಂಡೊಯ್ಯುತ್ತಿದ್ದ ವ್ಯಕ್ತಿಯಿಂದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು. ಕೆ.ಆರ್.ಪುರಂ ಪೊಲೀಸರಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನ ಬಾಡಿ ವಾರಂಟ್ ಆಧಾರದಲ್ಲಿ ವಶಕ್ಕೆ ಪಡೆದಿದ್ದ ಕೊತ್ತನೂರು ಠಾಣೆ ಪೊಲೀಸರು, ಆರೋಪಿತರು ಮನೆಗಳಲ್ಲಿಟ್ಟಿದ್ದ 324 ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿಯ ವಸ್ತುಗಳು ಹಾಗೂ 1.10 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಉಳಿದ ಐವರು ವ್ಯಕ್ತಿಗಳು ತಲೆಮರೆಸಿಕೊಂಡಿದ್ದು, ಅವರುಗಳ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
![Two accused arrested for stealing money and jewellery](https://etvbharatimages.akamaized.net/etvbharat/prod-images/15-01-2025/kn-bng-07-attention-divertion-7211560_15012025143816_1501f_1736932096_486.jpg)
30ಕ್ಕೂ ಅಧಿಕ ಮನೆಗಳ್ಳತನಗಳಲ್ಲಿ ಭಾಗಿಯಾಗಿದ್ದ ಮಹಿಳೆ ಬಂಧನ: ಮನೆಯ ಕೀ ಹಾಕಿದ ಬಳಿಕ ಅಕ್ಕಪಕ್ಕದಲ್ಲಿಟ್ಟು ತೆರಳುವವರ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನ ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಯಂತಿ ಬಂಧಿತ ಆರೋಪಿ. ಆರೋಪಿತಳ ವಿರುದ್ಧ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ 30ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
![Arrested accused Jayanthi](https://etvbharatimages.akamaized.net/etvbharat/prod-images/15-01-2025/kn-bng-05-hbt-7211560_15012025134849_1501f_1736929129_861.jpg)
ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ದಂಪತಿ, ಡಿಸೆಂಬರ್ 19ರಂದು ಮನೆಯ ಕೀಯನ್ನ ಕಿಟಕಿಯ ಪಕ್ಕದಲ್ಲಿಟ್ಟು ತೆರಳಿದ್ದರು. ಆ ಸಂದರ್ಭದಲ್ಲಿ ಮನೆಯೊಳಗೆ ನುಗ್ಗಿದ್ದ ಆರೋಪಿ, ಬೀರುವಿನಲ್ಲಿಟ್ಟಿದ್ದ 172 ಗ್ರಾಂ ಚಿನ್ನಾಭರಣ, 450 ಗ್ರಾಂ ಬೆಳ್ಳಿಯ ವಸ್ತುಗಳು ಮತ್ತು 13 ಸಾವಿರ ನಗದು ದೋಚಿ ಪರಾರಿಯಾಗಿದ್ದಳು. ದಂಪತಿ ಮನೆ ಬಳಿ ಬಂದು ನೋಡಿದಾಗ ಕಿಟಕಿಯ ಪಕ್ಕದಲ್ಲಿಟ್ಟಿದ್ದ ಕೀ ನಾಪತ್ತೆಯಾಗಿತ್ತು. ಬಳಿಕ ಮತ್ತೊಂದು ಕೀಯಿಂದ ಬಾಗಿಲನ್ನು ತೆರೆದು ಗಮನಿಸಿದಾಗ ಕಳ್ಳತನವಾಗಿರುವುದು ಬಯಲಾಗಿತ್ತು.
ಪತಿ ಹಾಗೂ 4 ಮಕ್ಕಳೊಂದಿಗೆ ವಾಸವಿದ್ದ ಜಯಂತಿ, ತನಗೆ ಖರ್ಚಿಗೆ ಹಣ ಬೇಕೆನಿಸಿದಾಗ ಮನೆಗಳ್ಳತನಕ್ಕಿಳಿಯುತ್ತಿದ್ದಳು. ಈ ಹಿಂದೆಯೂ ಸಹ ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಇದೇ ಮಾದರಿಯಲ್ಲಿ ಮನೆಗಳ್ಳತನ ಮಾಡಿರುವ ಆರೋಪಿಯ ವಿರುದ್ಧ 30ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದವು.
![Two accused arrested for stealing money and jewellery](https://etvbharatimages.akamaized.net/etvbharat/prod-images/15-01-2025/kn-bng-07-attention-divertion-7211560_15012025143816_1501f_1736932096_60.jpg)
ಬಂಧಿತಳು ಕಮ್ಮನಹಳ್ಳಿಯಲ್ಲಿರುವ ಜ್ಯೂವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದ 7.80 ಲಕ್ಷ ಮೌಲ್ಯದ 110 ಗ್ರಾಂ ಚಿನ್ನಾಭರಣಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.