ಗಂಗಾವತಿ: ಜಾತ್ರೆಗೆಂದು ನಗರಕ್ಕೆ ಬಂದಿದ್ದ ಸಾರ್ವಜನಿಕರ ಜೇಬಿಗೆ ಖದೀಮರು ಕತ್ತರಿ ಹಾಕಿದ್ದಾರೆ. ನಗದು, ಚಿನ್ನದ ಸರ ಸೇರಿದಂತೆ ಲಕ್ಷಾಂತರ ಮೊತ್ತದ ಬೆಲೆಬಾಳುವ ವಸ್ತುಗಳು ಕಳುವಾಗಿವೆ. ನಗರದ ಗ್ರಾಮ ದೇವತೆ ದುರ್ಗಾದೇವಿ ಜಾತ್ರೆ ಹಾಗೂ ತಾತ ಜಾತ್ರೆಯಲ್ಲಿ ಘಟನೆ ನಡೆದಿದೆ.
ಜಾತ್ರೆಯ ಅಂಗವಾಗಿ ನಡೆಯುತ್ತಿದ್ದ ರಥೋತ್ಸವದ ಸಂದರ್ಭದಲ್ಲಿ ಉಂಟಾದ ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡ ಎರಡರಿಂದ ಮೂವರಿದ್ದ ಕಳ್ಳರ ತಂಡ ಜನರಿಂದ ಜೇಬಿನಿಂದ ಹಣ ಕಳ್ಳತನ ಮಾಡಿದೆ. ಮಹಿಳೆಯರ ಕತ್ತಿಗೆ ಕೈ ಹಾಕಿ ಚಿನ್ನದ ಸರ ದೋಚಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯ ವೆಂಕಟೇಶ ಎಂಬ ರೈತರೊಬ್ಬರ ಜೇಬಿಗೆ ಕೈ ಹಾಕಿದ ಖದೀಮರು 20 ಸಾವಿರ ನಗದು ಹಣ ದೋಚಿದ್ದಾರೆ. ಹೆರಿಗೆಗೆಂದು ವಿದ್ಯಾನಗರಕ್ಕೆ ಬಂದಿದ್ದ ಪತ್ನಿಗೆ ಚಿನ್ನದ ಸರ ಮಾಡಿಸುವ ಉದ್ದೇಶಕ್ಕೆ ವೆಂಕಟೇಶ ಹಣ ತಂದಿದ್ದರು.
ಇನ್ನೊಂದು ಪ್ರಕರಣದಲ್ಲಿ, ವಡ್ಡರಹಟ್ಟಿಯ ರತ್ನಮ್ಮ ತನ್ನ ಮಕ್ಕಳೊಂದಿಗೆ ಜಾತ್ರೆಗೆಂದು ಬಂದಿದ್ದರು. ರಥೋತ್ಸವದ ಎಳೆಯುತ್ತಿದ್ದ ಸಂದರ್ಭದಲ್ಲಿ ಉಂಟಾದ ಜನ ದಟ್ಟಣೆಯಲ್ಲಿ ಕೆಲ ಯುವಕರು ಮೈ ಮೇಲೆ ಬಿದ್ದರು. ಜನ ಸಂದಣಿಯಿಂದ ಹೀಗಾಗಿರಬೇಕು ಎಂದುಕೊಂಡು ಸುಮ್ಮನಾಗಿದ್ದರು.
ಕೆಲ ಸಮಯದ ಬಳಿಕ ಮಹಿಳೆ ತನ್ನ ಕೊರಳಲ್ಲಿ ಐದು ಗ್ರಾಂ ತೂಕದ ಚಿನ್ನದ ಸರ ನಾಪತ್ತೆಯಾಗಿರುವುದನ್ನು ಗಮನಿಸಿದ್ದಾರೆ. ಆದರೆ, ಅಷ್ಟೊತ್ತಿಗೆ ಯುವಕರು ಅಲ್ಲಿಂದ ಕಾಲ್ಕಿತ್ತಿದ್ದರು. ಮಹಿಳೆ ಕಣ್ಣೀರಿಡುತ್ತಲೇ ಮನೆಗೆ ತೆರಳಿದ್ದಾರೆ. ಮತ್ತೊಂದು ಪ್ರಕರಣದಲ್ಲಿ, ತಾತನ ಜಾತ್ರೆಗೆಂದು ಕಾರಟಗಿಯಿಂದ ಬಂದಿದ್ದ ಎಸ್.ಚನ್ನಬಸವ ಎಂಬವರು 13,800 ರೂ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಮದ್ಯ ಸೇವಿಸಿ ಡ್ರೈವಿಂಗ್: ಖಾಸಗಿ ಬಸ್ ಚಾಲಕರ ವಿರುದ್ಧ ಪ್ರಕರಣ ದಾಖಲು