ದಾವಣಗೆರೆ : ಜಿಲ್ಲೆಯ ಹರಿಹರದ ಹರಿಹರೇಶ್ವರ ಸ್ವಾಮಿಯ ಅದ್ಧೂರಿ ಬ್ರಹ್ಮರಥೋತ್ಸವ ಜರುಗಿತು. ತೇರಿನಲ್ಲಿ ವಿರಾಜಮಾನ ಆಗಿದ್ದ ಹರಿಹರೇಶ್ವರನ ಬ್ರಹ್ಮರಥವನ್ನು ಭಕ್ತರು ಎಳೆದು ಪುನೀತರಾದರು.
ಕಳಸಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು, ತೇರಿನ ಚಕ್ರಕ್ಕೆ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು. ಐತಿಹಾಸಿಕ ತೇರಿಗೆ 1,600 ವರ್ಷಗಳ ಇತಿಹಾಸ ಇದೆ. ದೇಶ ವಿದೇಶಗಳಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದು ಧನ್ಯರಾದರು.
ಹರಿಹರೇಶ್ವರ ಸ್ವಾಮಿ ಇಲ್ಲಿ ಅವತಾರ ತಾಳಿದ್ದರು ಎಂಬ ಪ್ರತೀತಿ ಇದೆ. ಪ್ರತಿ ವರ್ಷ ಭರತ ಹುಣ್ಣಿಮೆಯಂದು ಇಲ್ಲಿ ರಥೋತ್ಸವ ಜರುಗುತ್ತದೆ. ಮೊನ್ನೆ ರಥೋತ್ಸವಕ್ಕೂ ಮುನ್ನ ಪುರಾಣ ಪ್ರಸಿದ್ಧ ಹರಿಹರೇಶ್ವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ರಥಬೀದಿಯಲ್ಲಿ ಮೆರವಣಿಗೆ ನಡೆಸಿ ನಂತರ ರಥದೊಳಗೆ ಅಲಂಕರಿಸಲಾಗಿತ್ತು. ಪೂರ್ಣಾಹುತಿ ನಂತರ ದೇವಸ್ಥಾನದ ಸುತ್ತ ಬಲಿಹರಣ, ಗಣಪತಿ ಪೂಜೆ, ರುದ್ರಾಭಿಷೇಕ, ಅಲಂಕಾರ, ನವಗ್ರಹ ಪೂಜೆ, ಜಪ ಹೋಮವನ್ನು ನಡೆಸಲಾಯಿತು.
ಬ್ರಹ್ಮರಥೋತ್ಸವಕ್ಕೆ ಹರಿದು ಬಂದಿದ್ದ ಭಕ್ತ ಸಾಗರ : ಹರಿಹರೇಶ್ವರ ಸ್ವಾಮಿ ಮೂರ್ತಿಯ ಒಂದೇ ಶಿಲೆಯಲ್ಲಿ ಅರ್ಧ ಭಾಗ ಹರ ಹಾಗು ಅರ್ಧ ಭಾಗ ಹರಿಯನ್ನು ಭಕ್ತರು ಕಾಣಬಹುದು. ವರ್ಷಕ್ಕೊಮ್ಮೆ ಜರುಗುವ ಹರಿಹರೇಶ್ವರನ ಐತಿಹಾಸಿಕ ರಥೋತ್ಸವಕ್ಕೆ ರಾಜ್ಯಾದ್ಯಂತ ಭಕ್ತಸಾಗರವೇ ಹರಿದು ಬಂದಿತ್ತು. ರಥೋತ್ಸವವನ್ನು ಒಂದು ನಿಮಿಷವೂ ಬದಲಾವಣೆ ಆಗದಂತೆ ಸಮಯ ಪಾಲನೆ ಮಾಡುವುದು ವಿಶೇಷ.
![THE GRAND BRAHMARATHOTSAVA OF LORD HARIHARESHWARA SWAMY IN DAVANAGERE](https://etvbharatimages.akamaized.net/etvbharat/prod-images/13-02-2025/23532363_thvshs.jpg)
ಶಿವ ಮತ್ತು ವಿಷ್ಣುವಿಗೆ ನಡೆಯುತ್ತೆ ಒಂದೇ ಕಡೆ ಪೂಜೆ : ಹರಿಹರೇಶ್ವರ ದೇವಾಲಯ ಸಾಕಷ್ಟು ವಿಶೇಷಗಳಿಗೆ ಸಾಕ್ಷಿಯಾಗಿದೆ. ಶಿವ ಮತ್ತು ವಿಷ್ಣುವಿಗೆ ಒಂದೇ ಕಡೆ ಪೂಜೆ ಸಲ್ಲಿಸುವ ಏಕೈಕ ಪುಣ್ಯಕ್ಷೇತ್ರ ಎಂಬ ಹೆಗ್ಗಳಿಕೆ ಈ ದೇವಾಲಯಕ್ಕಿದೆ. ಭರತ ಹುಣ್ಣಿಮೆಯ ಹಿಂದೆ ಮುಂದೆ ಮೇಷ ಲಗ್ನದಲ್ಲಿ ಬ್ರಹ್ಮರಥೋತ್ಸವ ನಡೆಯಿತು. ಇದಕ್ಕೂ ಮೊದಲು ಸಪ್ತ ರಾತ್ರೋತ್ಸವ ಎಂಬ ಆಚರಣೆ ಇಲ್ಲಿ ನಡೆಯುತ್ತದೆ. ಸತತ ಏಳು ದಿನಗಳ ಕಾಲ ಹೋಮ ಹವನ, ಮಹಾರುದ್ರಾಭಿಷೇಕ ಜೊತೆಗೆ ಪೂರ್ಣಾಹುತಿ ನಡೆಯುತ್ತದೆ. ಇದರಲ್ಲಿ ಬರುವ ಆರನೇ ದಿನಕ್ಕೆ ರಥೋತ್ಸವ ಜರುಗಿತು. ಇಲ್ಲಿ ಹರಕೆ ತೀರಿಸಿದರೆ ಜೀವನ ಪಾವನವೆಂಬ ಎಂಬ ನಂಬಿಕೆ ಭಕ್ತರದ್ದು.
![THE GRAND BRAHMARATHOTSAVA OF LORD HARIHARESHWARA SWAMY IN DAVANAGERE](https://etvbharatimages.akamaized.net/etvbharat/prod-images/13-02-2025/23532363_terasw.jpg)
ನವ ವಿವಾಹಿತೆಯರು ರಥೋತ್ಸವಕ್ಕೆ ಹಾಜರಾಗುವುದು ಕಡ್ಡಾಯ : ಈ ಹರಿಹರೇಶ್ವರನ ರಥೋತ್ಸವದಲ್ಲಿ ನವವಿವಾಹಿತೆಯರು ಭೇಟಿ ನೀಡಿ ಸ್ವಾಮಿ ದರ್ಶನ ಮಾಡುವುದು ಕಡ್ಡಾಯ. ಇದು ಸ್ಥಳೀಯರ ವಾಡಿಕೆ.
ದೇವಸ್ಥಾನದ ಅರ್ಚಕರ ಪುತ್ರ ರಾಘವ ಅವರು ಪ್ರತಿಕ್ರಿಯಿಸಿ "ಶಿವ ಮತ್ತು ವಿಷ್ಣುವಿನ ಅಂಶವೇ ಹರಿಹರೇಶ್ವರ. ಈ ದೇವರು ಅವತಾರ ಮಾಡಲು ಗುಹಾಸುರ ಎಂಬ ರಾಕ್ಷಸ ಕಾರಣವಂತೆ. ಪ್ರತಿಯೊಬ್ಬರಿಗೂ ಅ ರಾಕ್ಷಸ ತೊಂದರೆ ಕೊಡುತ್ತಿದ್ದನು. ಆಗ ತುಂಗಭದ್ರಾ ನದಿಯಲ್ಲಿ ಹರಿಹರೇಶ್ವರ ಅವತಾರ ತಾಳುತ್ತಾರೆ. ಇದಕ್ಕೆ ಪ್ರಮುಖ ಸಾಕ್ಷಿ ತುಂಗಭದ್ರಾ ನದಿಯಲ್ಲಿ ಇರುವ ಪಾದದ ಗುರುತು. ಈ ದೇವಾಲಯವನ್ನು ಕದಂಬರು, ಕಲ್ಯಾಣ ಚಾಲುಕ್ಯರು, ಹೊಯ್ಸಳ ಮೂರು ರಾಜ ಮನೆತನಗಳಿಂದ ಹಂತ ಹಂತವಾಗಿ ನಿರ್ಮಿಸಲಾಗಿದೆ. ಹರಿಹರೇಶ್ವರ ಮೂರ್ತಿಯನ್ನು ಯಾರು ಕೆತ್ತಿಲ್ಲ ಸ್ವಾಮಿನೆ ಕಲ್ಲಾಗಿರುವುದು. ಇನ್ನು ದೇವಾಲಯಕ್ಕೆ 1,600 ವರ್ಷಗಳ ಇತಿಹಾಸ ಇದೆ. ಅಲ್ಲದೆ ಸ್ಕಂದ ಪುರಾಣದಲ್ಲಿ ಇದರ ಉಲ್ಲೇಖ ಇದೆ" ಎಂದು ಮಾಹಿತಿ ನೀಡಿದ್ದಾರೆ.
![THE GRAND BRAHMARATHOTSAVA OF LORD HARIHARESHWARA SWAMY IN DAVANAGERE](https://etvbharatimages.akamaized.net/etvbharat/prod-images/13-02-2025/23532363_tvsns.jpg)
ವಜ್ರ ಖಚಿತ ಬಂಗಾರ ಕಿರೀಟ, ಚಿನ್ನಾಭರಣದಿಂದ ಅಲಂಕಾರ : ರಥೋತ್ಸವದಂದು ಹರಿಹರೇಶ್ವರ ವಜ್ರ ಖಚಿತ ಬಂಗಾರ ಕಿರೀಟ ತೊಡಿಸಲಾಗಿತ್ತು.
ಪವಾಡ ಪುರುಷ ಹರಿಹರೇಶ್ವರ, ಹರಕೆ ಈಡೇರಿಸುವ ಕರುಣಾಮಯಿ : ಬೇಡಿಕೊಂಡಿದ್ದನ್ನು ಕೊಟ್ಟು ಹರಿಹರೇಶ್ವರ ಈ ಭಾಗದ ಜನರನ್ನು ಕಾಯುತ್ತಿದ್ದಾನೆ. ಏನೇ ಸಮಸ್ಯೆ, ಏಳಿಗೆ, ಮಕ್ಕಳಾಗದೆ ಇರುವುದಕ್ಕೆ ಪರಿಹಾರ, ಶಿಕ್ಷಣದಲ್ಲಿ ಅಭಿವೃದ್ಧಿ, ಕೆಲಸ ಹೀಗೆ ಸಾವಿರಾರು ಭಕ್ತರ ಬೇಡಿಕೆಗಳನ್ನು ಈ ಸ್ವಾಮಿ ಈಡೇರಿಸಿರುವ ಇತಿಹಾಸ ಇದೆ.
ಪೊಲೀಸ್ ಇಲಾಖೆಯ ಭದ್ರತಾ ಸಿಬ್ಬಂದಿ ಲಲಿತಾಂಬಿಕೆ ಅವರು ಮಾತನಾಡಿ "ರಥೋತ್ಸವವನ್ನು 35 ವರ್ಷಗಳಿಂದ ನೋಡುತ್ತಿದ್ದೇವೆ. 10 ವರ್ಷಗಳಿಂದ ಇಲ್ಲೇ ಕೆಲಸ ಮಾಡುತ್ತಿದ್ದೇವೆ. ಇದು ದಕ್ಷಿಣ ಕಾಶಿ ಎಂದು ಹೆಸರುವಾಸಿಯಾಗಿದೆ. ಇದು 12-13ನೇ ಶತಮಾನದ ದೇವಾಲಯ ಆಗಿದೆ. ಸ್ವಾಮಿಯಿಂದ ಭಕ್ತರಿಗೆ ಅನುಕೂಲ ಆಗಿದೆ. ಭರತ ಹುಣ್ಣಿಮೆಯಂದೇ ತೇರು ಎಳೆಯಲ್ಪಡುತ್ತದೆ. ನಮಗೂ ಒಳ್ಳೆಯದಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ತುಳುನಾಡಿನ ದೈವ ನೇಮದಲ್ಲಿ ಭಾಗಿ