ಮೈಸೂರು : "ನಿನ್ನೆ ಚಾಮುಂಡಿ ಬೆಟ್ಟದಲ್ಲಿ ಬಿದ್ದ ಬೆಂಕಿ ಮಾನವ ನಿರ್ಮಿತ. ಉದ್ದೇಶಪೂರ್ವಕವಾಗಿಯೇ ಕಾಡಿಗೆ ಬೆಂಕಿ ಹಚ್ಚಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಅದೃಷ್ಟಶಾತ್ ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಿಗಳಿಗೆ ಹಾನಿಯಾಗಿಲ್ಲ. ಅರಣ್ಯ ಇಲಾಖೆಯ ವಾಚರ್ ಕಣ್ಣಿಗೆ ಚಿರತೆ ಹಾಗೂ ಅದರ ಮರಿಗಳು ಬೆಂಕಿ ಬಿದ್ದ ತಕ್ಷಣ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತಿರುವುದು ಕಂಡಿದೆ" ಎಂದು ಡಿಸಿಎಫ್ ಬಸವರಾಜ್ ತಿಳಿಸಿದರು.
ನಗರದ ಅರಣ್ಯ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಿನ್ನೆ ಗಾಳಿಯ ವೇಗ ಹಾಗೂ ಬಿಸಿಲಿನ ವಾತಾವರಣ ಹೆಚ್ಚಾಗಿತ್ತು. ಹೀಗಾಗಿ ಬೆಂಕಿ ನಂದಿಸಲು ಕಷ್ಟವಾಗಿದೆ. ನಾವು ಎಷ್ಟೇ ಪ್ರಯತ್ನಪಟ್ಟರೂ ಆ ಸ್ಥಳಕ್ಕೆ ಹೋಗಲು ಕಷ್ಟವಾಯಿತು. ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಹಾಕಿದ್ದು, ಸಂಜೆ ವೇಳೆಗೆ ಬೆಂಕಿ ಹತೋಟಿಗೆ ಬಂತು" ಎಂದರು.
"ನಿನ್ನೆ ರಾತ್ರಿ ವಾಚರ್ಗಳ ಮೂರು ತಂಡಗಳು ರಾತ್ರಿಯಿಡೀ ಚಾಮುಂಡಿಬೆಟ್ಟ ಅರಣ್ಯ ಪ್ರದೇಶಕ್ಕೆ ಕಾವಲಾಗಿದ್ದವು. ಬೆಳಗ್ಗೆ ಎಲ್ಲಾ ಕಡೆ ಬೆಂಕಿ ಹತೋಟಿಗೆ ಬಂದಿದೆ. ಚಾಮುಂಡಿಬೆಟ್ಟದ ಒಟ್ಟು 1516 ಎಕರೆ ಮೀಸಲು ಅರಣ್ಯ ಪ್ರದೇಶದಲ್ಲಿ ನಾಲ್ಕು ಕಡೆ ಬೆಟ್ಟ ಪ್ರವೇಶಿಸಲು ರಸ್ತೆ ಇದೆ. ಬೆಂಕಿಯ ಕೆನ್ನಾಲಿಗೆಗೆ ದೇವಿಕೆರೆ, ಗೊಲ್ಲಹಳ್ಳ ಭಾಗದಲ್ಲಿ 35 ಎಕರೆ ಅರಣ್ಯ ಸಂಪೂರ್ಣ ಸುಟ್ಟು ಕರಕಲಾಗಿದೆ. ದಯವಿಟ್ಟು ಬೇಸಿಗೆ ಕಾಲದಲ್ಲಿ ಸಾರ್ವಜನಿಕರು ಚಾಮುಂಡಿಬೆಟ್ಟದ ಪ್ರದೇಶದಲ್ಲಿ ಬೆಂಕಿ ಕಿಡಿ ಹೊತ್ತಿಸಬೇಡಿ" ಎಂದು ಮನವಿ ಮಾಡಿದರು.
ಇಲ್ಲಿಯವರೆಗೆ ಎಷ್ಟು ಕಡೆ ಅನಾಹುತ : "ಇಲ್ಲಿಯವರೆಗೆ ಮೈಸೂರು ಜಿಲ್ಲೆಯಲ್ಲಿ 19 ಕಡೆ ಸಣ್ಣಪುಟ್ಟ ಕಾಡ್ಗಿಚ್ಚು ಘಟನೆಗಳು ಕಂಡು ಬಂದಿವೆ. ಟಿ.ನರಸೀಪುರದ ಉಕ್ಕಲಗೆರೆ ಬೆಟ್ಟ, ನಂಜನಗೂಡಿನ ಕವಲಂದೆ ಭಾಗ, ನಿನ್ನೆ ಚಾಮುಂಡಿ ಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿ ಅವಘಡವೇ ದೊಡ್ಡ ಬೆಂಕಿ ಅನಾಹುತವಾಗಿದೆ" ಎಂದು ಡಿಸಿಎಫ್ ಬಸವರಾಜ್ ಮಾಹಿತಿ ನೀಡಿದರು.
ಬೆಂಕಿ ಇಟ್ಟ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ : ಚಾಮುಂಡಿಬೆಟ್ಟದಲ್ಲಿ ಕಿಡಿಗೇಡಿಗಳ ದುಷ್ಕೃತ್ಯದಿಂದ 100 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ನಾಶವಾಗಿರುವುದನ್ನು ಖಂಡಿಸಿ ಮತ್ತು ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಡಳಿತ ಈ ಕೂಡಲೇ 100 ಎಕರೆ ಪ್ರದೇಶದಲ್ಲಿ ಎರಡು ಪಟ್ಟು ಗಿಡ, ಮರಗಳನ್ನು ನೆಡಬೇಕು. ಜೊತೆಗೆ ಇವುಗಳನ್ನು ಸಂರಕ್ಷಣೆ ಮಾಡಬೇಕು. ಹೆಚ್ಚು ಹೆಚ್ಚು ಅರಳಿ ಮರಗಳನ್ನು ನೆಡಬೇಕು. ಈ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಚಾಮುಂಡೇಶ್ವರಿ ಬೆಟ್ಟಕ್ಕೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಪ್ರತಿದಿನ ಪೊಲೀಸರು ಎರಡ್ಮೂರು ಬಾರಿ ಚಾಮುಂಡಿಬೆಟ್ಟಕ್ಕೆ ಗಸ್ತು ತಿರುಗುವ ವ್ಯವಸ್ಥೆ ಮಾಡಬೇಕು. ಈ ರೀತಿ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ತೇಜಸ್ ಲೋಕೇಶ್ ಗೌಡ , ಕೃಷ್ಣಪ್ಪ, ಪ್ರಭುಶಂಕರ್, ಪ್ರಜೀಶ್, ಶಿವಲಿಂಗಯ್ಯ, ನೇಹಾ, ವರಕೂಡು ಕೃಷ್ಣೇಗೌಡ, ಸಿಂಧುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಮೈಸೂರು ಚಾಮುಂಡಿಬೆಟ್ಟದಲ್ಲಿ ಭಾರೀ ಬೆಂಕಿ: ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ