ಚಿಕ್ಕೋಡಿ (ಬೆಳಗಾವಿ): ಸಾಮಾನ್ಯವಾಗಿ ಸರ್ಕಾರಿ ನೌಕರರು ತಾವಾಯ್ತು ತಮ್ಮ ಕೆಲಸವಾಯ್ತು ಎಂದು ಸುಮ್ಮನಿರುವವರ ಮಧ್ಯೆದಲ್ಲಿ ಓರ್ವ ಪ್ರಾಥಮಿಕ ಶಿಕ್ಷಕ ತನ್ನ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ರಾಜ್ಯದಲ್ಲಿ ವಿನೂತನ ಪ್ರಯೋಗ ಮಾಡಿದ್ದಾರೆ. ಆ ಪ್ರಯೋಗದಿಂದ ಸದ್ಯ ಎಲ್ಲರ ಗಮನ ಸೆಳೆದಿದ್ದಾರೆ.
ಹೌದು ರಾಜ್ಯದಲ್ಲಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿ ಸಂಖ್ಯೆ ಹೆಚ್ಚಿಸಲು ಶಿಕ್ಷಣ ಇಲಾಖೆ ಮುಖಾಂತರ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಶಾಲೆಗಳತ್ತ ವಿದ್ಯಾರ್ಥಿಗಳು ಸೆಳೆಯಲು ಶೂ ಭಾಗ್ಯ, ಕ್ಷೀರ ಭಾಗ್ಯ, ಅನ್ನ ಭಾಗ್ಯ, ಮೊಟ್ಟೆ ಭಾಗ್ಯ ಸೇರಿದಂತೆ ಹಲವು ಯೋಜನೆಗಳು ನೀಡುತ್ತಾ ಬಂದರು. ಇದರ ಮದ್ಯೆ ಒಬ್ಬ ಶಿಕ್ಷಕ ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಒಂದನೇ ತರಗತಿ ಬರುವ ವಿದ್ಯಾರ್ಥಿಗಳ ಹೆಸರಿನಲ್ಲಿ ಒಂದು ಸಾವಿರ ರೂಪಾಯಿ ಠೇವಣಿ ಇಟ್ಟು ಸರ್ಕಾರಿ ಶಾಲೆಗಳ ಕಡೆ ಮಕ್ಕಳು ಬರುವಂತೆ ರಾಜ್ಯದಲ್ಲಿ ವಿನೂತನ ಪ್ರಯೋಗ ಮಾಡಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಡಹಳಟ್ಟಿ ಗ್ರಾಮದ ಹಿಪ್ಪರಗಿ ತೋಟದ ಶಾಲೆಯ ಶಿಕ್ಷಕ ಶಿದ್ದಮಲ್ಲ ಖೋತ ವಿಭಿನ್ನ ಕಾರ್ಯಕ್ಕೆ ಮುಂದಾಗಿದ್ದಾರೆ. ಒಂದನೇ ತರಗತಿ ಬರುವ ವಿದ್ಯಾರ್ಥಿಗಳ ಹೆಸರಿನಲ್ಲಿ ಈ ಶಾಲೆ ಶಿಕ್ಷಕ ಒಂದು ಸಾವಿರ ರೂಪಾಯಿ ಠೇವಣಿ ಇಟ್ಟು ಮಗುವಿನ ಭವಿಷ್ಯದಲ್ಲಿ ಉಪಯೋಗವಾಗಲಿ ಎಂದು ನಿರ್ಣಯ ಮಾಡಿದ್ದಾರೆ. ಗ್ರಾಮದಲ್ಲಿ ಈ ವಿಷಯ ತಿಳಿದು ಈಗಾಗಲೇ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದಾರೆ ಎಂದು ಶಿಕ್ಷಕರು ತಿಳಿಸಿದರು.
ಕರ್ನಾಟಕ - ಮಹಾರಾಷ್ಟ್ರ ಗಡಿಯಲ್ಲಿರುವ ಈ ಶಾಲೆ 2005 ರಲ್ಲಿ ಸ್ಥಾಪನೆಯಾಗಿದೆ. 2015ರವರೆಗೂ ಇಲ್ಲಿ ಒಂದರಿಂದ ಏಳನೇ ತರಗತಿಯಲ್ಲಿ 60 ರಿಂದ 70 ವಿದ್ಯಾರ್ಥಿಗಳು ಓದುತ್ತಿದ್ದರು. ಶಿಕ್ಷಕರು ಮತ್ತು ಮೂಲ ಸೌಕರ್ಯ ಕೊರತೆಯಿಂದಾಗಿ ಮಕ್ಕಳ ದಾಖಲಾತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಕುಸಿದಿದೆ. ಕಳೆದ ವರ್ಷ 18 ಮಕ್ಕಳಷ್ಟೇ ಇದ್ದರು.
2023ರ ಜುಲೈನಲ್ಲಿ ಈ ಶಾಲೆಗೆ ನಿಯೋಜನೆಗೊಂಡ ಶಿಕ್ಷಕ ಖೋತ ಅವರು ಮಕ್ಕಳನ್ನು ಸೆಳೆಯಲು ನಾನಾ ಶೈಕ್ಷಣಿಕ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಊರಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ತಿಂಗಳಿಗೊಮ್ಮೆ ರಸಪ್ರಶ್ನೆ ಸೇರಿದಂತೆ ಹಲವು ಕಾರ್ಯಕ್ರಮ ಆಯೋಜಿಸಿ ಗ್ರಾಮದ ಗಮನವನ್ನು ಸೆಳೆದಿದ್ದಾರೆ. ಜೊತೆಗೆ ಪಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಲೆಯಲ್ಲಿ ಹಾಜರಾತಿ ಹೆಚ್ಚಿಸಿ ಸದ್ಯಕ್ಕೆ ಐವತ್ತು ವಿದ್ಯಾರ್ಥಿಗಳನ್ನು ಶಾಲೆಗೆ ಮರಳಿ ಬರುವಂತೆ ಮಾಡಿದ್ದಾರೆ. ಇದರಿಂದ ಶಾಲೆಗೆ ಹೊಸ ಕಳೆ ಬಂದಂತಾಗಿದೆ. ಶಿಕ್ಷಕರ ಪ್ರಯತ್ನಕ್ಕೆ ಅಲ್ಲಿನ ಗ್ರಾಮಸ್ಥರು ಕೂಡ ಸಾಥ್ ನೀಡಿದ್ದಾರೆ.
ಒಟ್ಟಾರೆಯಾಗಿ ಶಿಕ್ಷಕ ಶಿದ್ದಮಲ್ಲ ಖೋತ ಯಾವುದೇ ಫಲಾಪೇಕ್ಷೆ ಇಲ್ಲದೇ ಸದ್ಯ ತಮ್ಮ ಊರಿನ ವಿದ್ಯಾರ್ಥಿಗಳು ಉತ್ತುಂಗಕ್ಕೆ ಹೋಗಲಿ ಹಾಗೂ ಸರ್ಕಾರಿ ಶಾಲೆಗಳ ಉಳಿವಿಗಾಗಿ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದ್ದಾರೆ. ಸರ್ಕಾರ ಇವರ ಪ್ರಯತ್ನಕ್ಕೆ ಕೈಜೋಡಿಸಿ ಇವರಿಗೆ ಬೆನ್ನೆಲುಬುವಾಗಿ ಗಡಿಯಲ್ಲಿ ಕನ್ನಡ ಶಾಲೆಗಳ ಉಳಿವಿಗಾಗಿ ವಿನೂತನ ಯೋಜನೆಗಳನ್ನು ರೂಪಿಸುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.
ಓದಿ: ಇದು ನನ್ನ ಗೆಲುವಲ್ಲ, ಆಂಧ್ರಪ್ರದೇಶದ ಜನತೆಯ ಅದ್ಧೂರಿ ವಿಜಯ: ಚಂದ್ರಬಾಬು ನಾಯ್ಡು - Andhra Pradesh Political