ಮೈಸೂರು : ಜೇನು ತುಪ್ಪದ ರುಚಿ ನನಗೆ ಗೊತ್ತು. ಆದರೆ ಪದ್ಮಶ್ರೀ ಪ್ರಶಸ್ತಿಯ ಬಗ್ಗೆ ನನಗೆ ಗೊತ್ತಿಲ್ಲ. ಆ ಮಟ್ಟಕ್ಕೆ ನಾನಿನ್ನೂ ಬೆಳೆದಿಲ್ಲ ಎಂದು ಪದ್ಮಶ್ರೀ ಪ್ರಶಸ್ತಿ ಪಡೆದ ಹೆಚ್ ಡಿ ಕೋಟೆ ಹಾಡಿಯ ಸೋಮಣ್ಣ ಮುಗ್ಧವಾಗಿ ಮಾತನಾಡಿದ್ದಾರೆ. ಗಿರಿಜನರ ಬದುಕಿನ ಹಕ್ಕಿಗಾಗಿ ನಾಲ್ಕು ದಶಕಗಳಿಂದ ನಿರಂತರ ಹೋರಾಟ ಮಾಡುತ್ತಿರುವ ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಮೊತ್ತೆ ಹಾಡಿಯ ಸೋಮಣ್ಣ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿದೆ. ಈ ಹಿನ್ನೆಲೆಯಲ್ಲಿ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಸೋಮಣ್ಣನ ಮಾತು : ಸುಮಾರು ನಾಲ್ಕು ದಶಕಗಳಿಂದ ಹೆಚ್ ಡಿ ಕೋಟೆ ಸೇರಿದಂತೆ ಸುತ್ತಮುತ್ತಲ ಹಾಡಿಯ ಜನರ ಹಕ್ಕಿಗಾಗಿ ಹೋರಾಟ ಮಾಡಿದ ಸೋಮಣ್ಣಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ದೊರಕಿದೆ. ಈ ಹಿನ್ನೆಲೆಯಲ್ಲಿ ತಮ್ಮ ಹಾಡಿಯ ಮನೆಯಲ್ಲೇ ಪ್ರತಿಕ್ರಿಯಿಸಿದ ಅವರು, ನಾನು ಆ ಮಟ್ಟಕ್ಕೆ ಬೆಳೆದಿಲ್ಲ. ನಾವುಗಳು ರೈತರು. ಅಣ್ಣೆಸೊಪ್ಪನ್ನ ತಂದು ಅದನ್ನು ಬೇಯಿಸಿಕೊಂಡು ತಿಂದು ಜೀವನ ಮಾಡುವವರು. ನಮಗೆ ಜೇನುತುಪ್ಪದ ರುಚಿ ಗೊತ್ತು. ಆದರೆ, ಪದ್ಮಶ್ರೀ ಪ್ರಶಸ್ತಿ ಎಂದರೆ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಅದರ ರುಚಿಯನ್ನು ನೀವೇ ಹೇಳಬೇಕು ಎಂದು ಮುಗ್ಧವಾಗಿ ಹೇಳುವ ಸೋಮಣ್ಣ, 1978 ರಿಂದ ಹಾಡಿ ಜನರ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ಅವರು, ಸರ್ಕಾರಕ್ಕೆ 35 ಸಲಹೆಗಳನ್ನು ನೀಡಿರುವ ವರದಿಯನ್ನು ಅನುಷ್ಠಾನಕ್ಕೆ ತರಬೇಕು, ಕಾಡಿನೊಳಗೆ ಇರುವ ಆದಿವಾಸಿ ಜನರ ಹಕ್ಕುಗಳನ್ನು ರಕ್ಷಿಸಬೇಕು, ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಬಾರದು. ಅಲ್ಲಿಯೇ ಜೀವನ ಮಾಡಲು ಅವರಿಗೆ ಭೂಮಿ ನೀಡಬೇಕು. ಇದರ ಜೊತೆಗೆ ಆದಿವಾಸಿ ಹಾಡಿಗಳಲ್ಲೇ ಅವರ ಹಕ್ಕುಗಳನ್ನು ಸ್ಥಾಪನೆ ಮಾಡಬೇಕು. ಜೊತೆಗೆ ಹಾಡಿಗಳಲ್ಲಿರುವ ಬಡತನ ಹಾಗೂ ಅನಕ್ಷರತೆ ಹೋಗಲಾಡಿಸಬೇಕು ಎನ್ನುತ್ತಾರೆ.