ಹಾವೇರಿ: ಕಬ್ಬೂರು ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ 32ಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಚರ್ಮರೋಗ ಕಾಣಿಸಿಕೊಂಡಿದೆ. ಮಕ್ಕಳ ಕೈಸಂದು, ತೊಡೆಸಂದುಗಳಲ್ಲಿ ಗುಳ್ಳೆಗಳೆದ್ದು ತುರಿಕೆಯಿಂದ ಬಳಲುತ್ತಿದ್ದಾರೆ. ಸತತ ಮಳೆಯಿಂದ ಬಟ್ಟೆಗಳು ಒಣಗದ ಕಾರಣ ಹಸಿ ಬಟ್ಟೆಗಳನ್ನು ಹಾಕಿಕೊಂಡ ಕಾರಣ ಈ ರೀತಿಯಾಗಿದೆ ತುರಿಕೆಯಾಗಿದೆ ಎಂದು ತಿಳಿದುಬಂದಿದೆ.
ಸೂರ್ಯನ ಬೆಳಕು ಬೀಳದೆ ಚರ್ಮದಲ್ಲಿ ಫಂಗಸ್ ಕಾಣಿಸಿಕೊಂಡಿದ್ದು ತುರಿಕೆಯಿಂದಾಗಿ ಚರ್ಮದಲ್ಲಿ ರಕ್ತ ಬಂದಿದೆ. ಇದನ್ನರಿತ ವಸತಿ ನಿಲಯದ ವಾರ್ಡನ್ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಕಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಹಾವೇರಿ ಜಿಲ್ಲಾಸ್ಪತ್ರೆ ವೈದ್ಯರು ವಸತಿ ನಿಲಯಕ್ಕೆ ಭೇಟಿ ನೀಡಿ ಮಕ್ಕಳ ಪರೀಕ್ಷೆ ನಡೆಸಿದ್ದಾರೆ.
ವೈದ್ಯರು ಹೇಳಿದ್ದೇನು? ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವುದು ಮತ್ತು ಬಟ್ಟೆಗಳನ್ನು ಒಣಗದೆ ಹಾಕಿಕೊಂಡಿದ್ದು ಸೇರಿದಂತೆ ಸ್ವಲ್ಪಮಟ್ಟಿನ ಶುಚಿತ್ವದ ಕೊರತೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.
ತೀವ್ರ ಲಕ್ಷಣಗಳಿರುವ ಇಬ್ಬರು ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಮತ್ತು 30 ವಿದ್ಯಾರ್ಥಿಗಳಿಗೆ ಒಂದೇ ರೂಮಿನಲ್ಲಿ ಐಸೋಲೇಷನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಒಣಗಿಸಿದ ಬಟ್ಟೆ ಬಿಸಿ ನೀರಿನ ಸ್ನಾನ ಸೇರಿದಂತೆ ವಿವಿಧ ಶುಚಿತ್ವದ ಬಳಕೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದಾರೆ. ಚರ್ಮದ ಮೇಲಿನ ಗುಳ್ಳೆಗಳು ಒಣಗಲಾರಂಭಿಸಿದ್ದು, ಸ್ವಲ್ಪಮಟ್ಟಿನ ಚೇತರಿಕೆ ಕಾಣಿಸಿಕೊಳ್ಳಲಾರಂಭಿಸಿದೆ. ಹೆಚ್ಚು ತುರಿಕೆಗೆ ಒಳಗಾದ ವಿದ್ಯಾರ್ಥಿಗಳ ಆರೋಗ್ಯ ಸುಧಾರಿಸುತ್ತಿದೆ. ಈ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ. ಬದಲಿಗೆ ಶುಚಿಯಾಗಿ ಇರುವಂತೆ, ಬಿಸಿ ಬಿಸಿಯಾದ ಆಹಾರ ಪದಾರ್ಥಗಳನ್ನು ಸೇವಿಸುವಂತೆ ವೈದ್ಯರು ತಿಳಿಸಿದ್ದಾರೆ.
ವಿದ್ಯಾರ್ಥಿ ವಸತಿ ನಿಲಯದಲ್ಲಿ ಸುಮಾರು 130 ವಿದ್ಯಾರ್ಥಿಗಳಿದ್ದರೆ ಅದರಲ್ಲಿ 32 ವಿದ್ಯಾರ್ಥಿಗಳಿಗೆ ಈ ರೀತಿಯ ಚರ್ಮತುರಿಕೆಯ ಲಕ್ಷಣಗಳು ಕಾಣಿಸಿಕೊಂಡಿವೆ. ಈ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಬಿಸಿಲಿನ ಕಿರಣಗಳು ದೇಹದ ಮೇಲೆ ಬೀಳುವಂತೆ ಕೆಲಹೊತ್ತು ಹೊರಗಡೆ ಇರಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.
ಮನೆಗೆ ಹೋಗಿರುವ ಇಬ್ಬರು ವಿದ್ಯಾರ್ಥಿಗಳ ಆರೋಗ್ಯದಲ್ಲಿ ಸಹ ಸುಧಾರಣೆ ಕಂಡು ಬಂದಿದೆ. ಮಲಗಲು ಬಳಸುವ ಹೊದಿಕೆ, ರಗ್ ಮತ್ತು ಚಾದರ್ಗಳನ್ನು ಬಿಸಿ ನೀರನಲ್ಲಿ ಒಗೆದು ಒಣಗಿದ ನಂತರ ಉಪಯೋಗ ಮಾಡಲು ಸೂಚಿಸಲಾಗಿದೆ. ಮಳೆಗಾಲದಲ್ಲಿ ನಮ್ಮ ಹಸಿಬಟ್ಟೆಗಳನ್ನು ಒಣಗಲು ಹಾಕಲು ತಗಡಿನ ಶೆಡ್ ನಿರ್ಮಿಸಿದರೆ ಈ ರೀತಿಯಾಗುವುದಿಲ್ಲಾ ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ನಾವು ಯಾರಿಗೂ ಕಮ್ಮಿ ಇಲ್ಲ: ಈ ಅಕ್ಕ-ತಂಗಿ ಭಲೇ ಜೋಡಿ, ಪೋಷಕರ ಪಾಲಿಗೆ ಇವರೇ ದೇವರು! - National Sisters Day