ಬೆಂಗಳೂರು: ಅವಕಾಶ ವಂಚಿತರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ವಿವಿಧ ಸಂಸ್ಥೆಗಳು ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಕೌಶಲ್ಯಾಭಿವೃದ್ಧಿ ಹಾಗೂ ಇನ್ನಿತರ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
ಬುಧವಾರ ನಗರದ ಖಾಸಗಿ ಹೋಟೆಲ್ನಲ್ಲಿ ಉನ್ನತ ಶಿಕ್ಷಣ ಪರಿಷತ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ "ನಾಳೆಗಳ ಸಬಲೀಕರಣ ಉತ್ಕೃಷ್ಟತೆಯ ಕಡೆಗೆ ಪಯಣ" ಶೀರ್ಷಿಕೆಯಡಿ ಹಮ್ಮಿಕೊಳ್ಳಲಾದ "ಸಹಭಾಗಿಗಳ ಸಮಾವೇಶ- 2024" ಉದ್ಘಾಟಿಸಿ ಅವರು ಮಾತನಾಡಿದರು.
"ಸಾವಿರಾರು ವಿದ್ಯಾರ್ಥಿಗಳು ಪದವೀಧರರಾಗಿ ಹೊರಬರುತ್ತಿದ್ದಾರೆ. ಎಲ್ಲರಿಗೂ ಉದ್ಯೋಗ ದೊರಕುವುದು ಕಷ್ಟವಾಗಿದೆ. ಶಿಕ್ಷಣಕ್ಕೆ ಪೂರಕವಾದ ಕೌಶಲ್ಯ ತರಬೇತಿ ಅವರಿಗೆ ಅವಶ್ಯಕ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಇಲಾಖೆಯು ಇನ್ಫೋಸಿಸ್ ಸ್ಟ್ರಿಂಗ್ ಬೋರ್ಡ್, ಉನ್ನತ ಫೌಂಡೇಶನ್, ಬ್ರಿಟಿಷ್ ಕೌನ್ಸಿಲ್, ವಾದ್ವಾನಿ ಫೌಂಡೇಶನ್, ಟಯೋಟಾ ಕಿರ್ಲೋಸ್ಕರ್, ಕೆಟೆಕ್ ಮೆಟಾ, ಸಿಕ್ಕೋ ಮುಂತಾದ ಖಾಸಗಿ ಕೈಗಾರಿಕೆಗಳು ಮತ್ತು ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ" ಎಂದರು.
"ಕಂಪನಿಗಳ ಸಹಭಾಗಿತ್ವದಲ್ಲಿ ಸರ್ಕಾರಿ ಕಾಲೇಜುಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಉದ್ಯೋಗಾರ್ಹತೆ ಕೌಶಲ್ಯ, ಜೀವನ ಕೌಶಲ್ಯ, ಆಂಗ್ಲ ಭಾಷೆ ಪ್ರಾವೀಣ್ಯತೆ, ಡಿಜಿಟಲ್, ಸೈಬರ್ ಜಾಗೃತಿ, ಮಹಿಳೆಯರು ಮತ್ತು ಕೃತಕ ಬುದ್ಧಿಮತ್ತೆ ಮುಂತಾದ ವಿಷಯಗಳ ಕುರಿತು ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಈ ಕೌಶಲ್ಯ ತರಬೇತಿ ಉತ್ಕೃಷ್ಟವಾಗಿದ್ದು, ಅವರು ಮಾಡುವ ಉದ್ಯೋಗಕ್ಕೆ ಪೂರಕವಾಗಿದೆ, ಉದ್ಯೋಗವೂ ಸಿಗುವಂತಾಗುತ್ತದೆ. ಗ್ರಾಮೀಣ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಅರಸಿ ಪಟ್ಟಣಕ್ಕೆ ಬಂದರೆ ಅವರಿಗೆ ಹೊರಗಿನ ಜಗತ್ತು ತೆರೆದುಕೊಳ್ಳುತ್ತದೆ. ಬ್ರಿಟಿಷ್ ಕೌನ್ಸಿಲ್ ಸಹಕಾರದೊಂದಿಗೆ 6 ವಿಶ್ವವಿದ್ಯಾಲಯಗಳ ಸುಮಾರು 30 ವಿದ್ಯಾರ್ಥಿಗಳು ಹಾಗೂ 6 ಅಧ್ಯಾಪಕರು ಲಂಡನ್ಗೆ ಅಧ್ಯಯನ ಪ್ರವಾಸ ಬೆಳೆಸಿ ಜೀವನ ಕೌಶಲ್ಯ, ತರಬೇತಿ ಪಡೆದುಕೊಂಡಿದ್ದಾರೆ" ಎಂದು ಹೇಳಿದರು.
![Skill training for unemployed in partnership with government and private organizations: Minister MC Sudhakar](https://etvbharatimages.akamaized.net/etvbharat/prod-images/04-12-2024/kn-bng-03-mou-partners-conclave-7210969_04122024175433_0412f_1733315073_282.jpg)
ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಶ್ರೀಕರ್ ಮಾತನಾಡಿ, "ರಾಜ್ಯದ ಶೇ 30ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಲಿಕೆಯ ಜೊತೆಗೆ ಕೌಶಲ್ಯ ಕಾರ್ಯಕ್ರಮವನ್ನು ಸರ್ಕಾರ ನೀಡುತ್ತಿದ್ದು, 2023-24 ಸಾಲಿನಲ್ಲಿ 28,909 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಇದರಲ್ಲಿ ಅನಿಮೇಷನ್, ಗ್ರಾಫಿಕ್ ಡಿಸೈನ್, ಡಿಜಿಟಲ್ ಮಾರುಕಟ್ಟೆ, ಸಂವಹನ ಮಾಧ್ಯಮ ಮತ್ತು ಸಿನಿಮಾ ತಯಾರಿಕೆ ಮುಂತಾದ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತದೆ" ಎಂದರು.
"ಪ್ರೇರಣಾ ಕಾರ್ಯಕ್ರಮದಡಿ ಸರ್ಕಾರಿ ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ಕಾರ್ಯಾಗಾರ, ಸಂಶೋಧನಾ ಪೀಠಿಕೆ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಆವಿಷ್ಕಾರ ಕಾರ್ಯಕ್ರಮದಡಿ ಬೌದ್ಧಿಕ ಅಸ್ತಿ ಮತ್ತು ನಾವೀನ್ಯತೆ ವಿಷಯ ಕುರಿತಂತೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ತಾಂತ್ರಿಕ ತರಬೇತಿ ಹಾಗೂ ಧನಸಹಾಯ ನೀಡಲಾಗುತ್ತಿದೆ. ಅಜೀಂ ಪ್ರೇಮ್ಜಿ ಫೌಂಡೇಷನ್ ಸೇರಿದಂತೆ ಇತರ ಸಂಸ್ಥೆಗಳು, ಕಂಪನಿಗಳು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ, ಔದ್ಯೋಗಿಕ ಅಭಿವೃದ್ದಿ ಸಾಧ್ಯವಾಗುತ್ತದೆ" ಎಂದು ಸಚಿವ ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಡಾ.ಜಿ.ಶೋಭಾ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಸೆಂಟ್ರಲ್ ಸಿಲ್ಕ್ ಬೋರ್ಡ್: ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ