ಬೆಳಗಾವಿ: ಕಿತ್ತೂರು ಉತ್ಸವದ ಎರಡನೇ ದಿನ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡುಗಳಿಗೆ ಜನ ಹುಚ್ಚೆದ್ದು ಕುಣಿದರು. ಒಂದಾದ ಮೇಲೆ ಒಂದು ಸೂಪರ್ ಹಿಟ್ ಹಾಡು ಹಾಡಿ ಧೂಳೆಬ್ಬಿಸಿದ ವಿಜಯ್ ಪ್ರಕಾಶ್, ಉತ್ಸವಕ್ಕೆ ಸಾಂಸ್ಕೃತಿಕ ಮೆರಗು ತಂದು ಕೊಟ್ಟರು.
ಹೌದು, ಬೊಂಬೆ ಹೇಳುತೈತೆ ಹಾಡಿನ ಮೂಲಕ ವೇದಿಕೆಗೆ ಬಂದ ವಿಜಯ್ ಪ್ರಕಾಶ ನೆರೆದಿದ್ದ ಜನರನ್ನು ಒಂದು ಕ್ಷಣ ಭಾವ ಪರವಶರನ್ನಾಗಿ ಮಾಡಿದರು. ಅತ್ತ ವೇದಿಕೆ ಥ್ರೀಡಿ ಪರದೆ ಮೇಲೆ ಕರ್ನಾಟಕ ರತ್ನ ದಿ. ಡಾ. ಪುನೀತ್ರಾಜಕುಮಾರ್ ಭಾವಚಿತ್ರ ಪ್ರದರ್ಶನವಾಗುತ್ತಿದ್ದಂತೆ, ಇತ್ತ ಪ್ರೇಕ್ಷಕರು ತಮ್ಮ ಮೊಬೈಲ್ ಟಾರ್ಚ್ ಹಚ್ಚುವ ಮೂಲಕ ಅಪ್ಪು ಅವರಿಗೆ ಗೌರವ ಸಮರ್ಪಿಸಿದರು.
ಇದಾದ ಬಳಿಕ ಮತ್ತೆ ಪುನೀತ್ರಾಜಕುಮಾರ್ ಸಿನಿಮಾದ 'ಕಾಣದಂತೆ ಮಾಯವಾದನು, ಕೈಲಾಸ ಸೇರಿಕೊಂಡನು', ಡಾ. ರಾಜಕುಮಾರ್ ಅಭಿನಯದ 'ಲವ್ ಮಿ ಆರ್ ಹೇಟ್ ಮಿ', ದರ್ಶನ ಅಭಿನಯದ 'ಯಾರೇ ಬಂದರೂ, ಎದುರು ಯಾರೇ ನಿಂತರೂ ಪ್ರೀತಿ ಹಂಚುವ ಯಜಮಾನ', ಕಿರಿಕ್ ಪಾರ್ಟಿಯ 'ಬೆಳಗೆದ್ದು ಯಾರ ಮುಖವ ನಾನು ನೋಡಿದೆ', 'ಇದು ಹೂವಿನ ಲೋಕವೇ', ಕಾಂತಾರ ಚಿತ್ರದ 'ಸಿಂಗಾರ ಸಿರಿಯೆ', 'ಕಣ್ಣು ಹೊಡೆಯಾಕ', 'ಓಪನ್ ಹೇರ್ ಬಿಟ್ಟಕೊಂಡು', 'ಖಾಲಿ ಕ್ವಾಟರ್ ಬಾಟಲಿಯಂಗೆ ಲೈಫು' ಸೇರಿ ಮತ್ತಿತರ ಗೀತೆಗಳನ್ನು ಹಾಡಿದ ವಿಜಯ್ ಪ್ರಕಾಶ ಪ್ರೇಕ್ಷಕರನ್ನು ಸಂಗೀತ ಲೋಕಕ್ಕೆ ಕೊಂಡೊಯ್ದರು.
ಕುಣಿದು ಕುಪ್ಪಳಿಸಿದ ಜನ: ವಿಜಯ್ ಪ್ರಕಾಶ್ ಹಾಡಿದ ಎಲ್ಲ ಹಾಡುಗಳಿಗೆ ಚಿಕ್ಕ ಮಕ್ಕಳು, ಯುವಕ-ಯುವತಿಯರು, ಮಹಿಳೆಯರು ತಾವಿದ್ದಲ್ಲಿಯೇ ಹೆಜ್ಜೆ ಹಾಕಿ ಸಂಭ್ರಮಿಸಿದರು. ಒಂದೂವರೇ ಗಂಟೆಗಳ ಕಾಲ ನಿರಂತರವಾಗಿ ವಿಜಯ್ ಪ್ರಕಾಶ್ ಅವರ ಕಂಠದಿಂದ ಕೇಳಿ ಬಂದ ಹಾಡುಗಳಿಗೆ ಅತ್ತಿತ್ತ ಕದಲದಂತೆ ಜನ ಕುಳಿತಿದ್ದರು.
ಇದಕ್ಕೂ ಮೊದಲು ಬಸವರಾಜ ಶಿಗ್ಗಾಂವ ಜನಪದ ಸಂಗೀತ, ಬಾಲಚಂದ್ರ ನಾಕೋಡ ಶಾಸ್ತ್ರೀಯ ಸಂಗೀತ, ಡಾ. ಆನಂದಪ್ಪ ಜೋಗಿನ ಕಿನ್ನರಿ ಪದಗಳು, ಯಲ್ಲನಗೌಡ ಬಂಡೆ ತತ್ವಪದಗಳು, ನಾಗರಾಜ ಜೋರಾಪುರ ಹಾಸ್ಯ ಕಾರ್ಯಕ್ರಮ, ಸತೀಶ ಹೆಮ್ಮಾಡಿ ತಂಡದಿಂದ ಜಾದೂ ಪ್ರದರ್ಶನ, ನೂಪೂರ ನೃತ್ಯಾರ್ಪಣ ಇನ್ಸಿಟಿಟ್ಯೂಟ್ನಿಂದ ಕುಚಿಪುಡಿ ನೃತ್ಯ, ಪತ್ರಕರ್ತ ಮಂಜುನಾಥ ಹುಡೇದ ಮತ್ತು ತಂಡದಿಂದ ಗಾಯನ, ಹಾಸ್ಯದ ಹೊನಲು, ಪ್ರವೀಣ ಗೋಡಕಿಂಡಿ ಅವರಿಂದ ನಡೆದ ಕೊಳಲು ವಾದನ ಸೇರಿ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯ ರಸದೌತಣ ನೀಡಿದವು.
ಇದನ್ನೂ ಓದಿ: ಕಿತ್ತೂರು ಉತ್ಸವದಲ್ಲಿ ಕ್ರೀಡೆಗಳ ಕಲರವ: ಹಗ್ಗಜಗ್ಗಾಟ, ವಾಲಿಬಾಲ್, ಕಬಡ್ಡಿಯಲ್ಲಿ ಗೆದ್ದು ಬೀಗಿದವರಾರು!