ಚಿಕ್ಕಮಗಳೂರು: ಯಾರೋ ಬೇಕಂತಲೇ ವ್ಯವಸ್ಥಿತವಾಗಿ ದುಡ್ಡಿನ ಮದ, ಅಹಂಕಾರದಿಂದ ಗೋಬ್ಯಾಕ್ ಅಭಿಯಾನ ಮಾಡಿಸುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. 'ಗೋಬ್ಯಾಕ್ ಶೋಭಕ್ಕ' ಪತ್ರ ಅಭಿಯಾನಕ್ಕೆ ನಗರದಲ್ಲಿಂದು ಪ್ರತಿಕ್ರಿಯಿಸಿದ ಅವರು, ಕಳೆದ ಚುನಾವಣೆಯಲ್ಲಿಯೂ ಕೂಡ ಇದೇ ರೀತಿಯ ಅಭಿಯಾನ ಮಾಡಿದ್ದರು. ಇದೀಗ ಈ ಬಾರಿಯ ಚುನಾವಣೆಯಲ್ಲೂ ಮಾಡುತ್ತಿದ್ದಾರೆ. ಈ ಬಗ್ಗೆ ನಮ್ಮ ನಾಯಕರು ಉತ್ತರ ನೀಡುತ್ತಾರೆ. ಹೈಕಮಾಂಡ್ ನನಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿಕೊಂಡು ಬಂದಿದ್ದೇನೆ ಎಂದು ತಿಳಿಸಿದರು.
ಗೋಬ್ಯಾಕ್ ಪತ್ರ ಯಾರು ಬರೆದರು, ಎಲ್ಲೆಲ್ಲಿ ಇದನ್ನು ಪೋಸ್ಟ್ ಮಾಡಿದ್ದಾರೆ ಎಂಬುದರ ಬಗ್ಗೆ ಹೈಕಮಾಂಡ್ ವರದಿ ತರಿಸಿಕೊಂಡಿದೆ. ಚುನಾವಣೆಯ ಸಮಯದಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿರುವವರ ವಿರುದ್ಧ ಈ ರೀತಿ ಆರೋಪ ಕೇಳಿ ಬಂದಾಗ ಸಹಜವಾಗಿಯೇ ಹೈಕಮಾಂಡ್ ವರದಿ ತರಿಸಿ ಪರಿಶೀಲನೆ ನಡೆಸುತ್ತದೆ. ಈ ವರದಿಯಲ್ಲಿ ಸತ್ಯ ಏನೆಂಬುದು ಅವರಿಗೆ ತಿಳಿಯುತ್ತದೆ ಎಂದರು.
ಆಪರೇಷನ್ ಕಮಲ ಕುರಿತು ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯ ಕಾಂಗ್ರೆಸ್ನಲ್ಲಿ ಏನಾಗುತ್ತಿದೆ ಎಂದು ಅವರಿಗೆ ಗೊತ್ತಿದೆ. ಅಲ್ಲದೇ ತಮ್ಮ ಪಕ್ಷದ ಶಾಸಕರನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ ಎಂದು ಅವರೇ ಬಿಜೆಪಿ ಶಾಸಕರಿಗೆ ಕೈ ಹಾಕಿದ್ದಾರೆ. ಮತ್ತೊಂದೆಡೆ ಸಿಎಂ ಮತ್ತು ಡಿಸಿಎಂ ಮಧ್ಯೆ ಏನು ನಡೆಯುತ್ತಿದೆ ಎಂಬುದೂ ತಿಳಿದಿದೆ. ಲೋಕಸಭೆ ಚುನಾವಣೆಯ ಬಳಿಕ ಈ ಎಲ್ಲಾ ಸಂಗತಿ ಹೊರಬರಲಿವೆ ಎಂದು ತಿಳಿಸಿದರು.
ಇದನ್ನೂ ಓದಿ: ನಮಗೆ ನಿರೀಕ್ಷೆಗಿಂತ ಜಾಸ್ತಿ ಮತಗಳು ಬರುತ್ತವೆ, ಯಾವುದೇ ಭಯ ಇಲ್ಲ: ಸಚಿವ ಎಂ.ಬಿ.ಪಾಟೀಲ್ ವಿಶ್ವಾಸ