ಕಾರವಾರ: ಜಾತ್ರೆ ಅಂದ್ರೆ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವುದು, ವಿವಿಧ ಆಚರಣೆಗಳೆಲ್ಲವೂ ಸಾಮಾನ್ಯ. ಆದರೆ ಇಲ್ಲೊಂದು ಕಡಲತೀರದಲ್ಲಿ ಇಂದು ನಡೆದ ಜಾತ್ರೆ ಬೇರೆಲ್ಲಾ ಜಾತ್ರೆಗಳಿಗಿಂತ ವಿಭಿನ್ನವಾಗಿತ್ತು. ಸಮುದ್ರತೀರಕ್ಕೆ ದೇವರುಗಳನ್ನು ಪಲ್ಲಕ್ಕಿ ಮೆರವಣಿಗೆಯ ಮೂಲಕ ತಂದ ಜನ ಸಮುದ್ರಸ್ನಾನ ಮಾಡಿ ಬಳಿಕ ವಿಶೇಷ ಪೂಜೆ ಸಲ್ಲಿಸಿ ಶಿವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿಯ ಕಡಲತೀರದಲ್ಲಿ ಶಿವರಾತ್ರಿ ಜಾಗರಣೆ ನಿಮಿತ್ತ ವಿಶೇಷ ಜಾತ್ರೆ ನಡೆಯಿತು. ಪ್ರತೀ ವರ್ಷದಂತೆ ಈ ವರ್ಷವೂ ಸಹ ಗಾಂವಗೇರಿಯಲ್ಲಿನ ರಾಮನಾಥ ದೇವರ ಜಾತ್ರಾ ಮಹೋತ್ಸವ ನಡೆಯಿತು. ಶಿವರಾತ್ರಿಯ ಮೂರನೇ ದಿನ ಅಥವಾ ಶಿವರಾತ್ರಿ ನಂತರ ಬರುವ ಅಮಾವಾಸ್ಯೆಯ ದಿನ ರಾಮನಾಥ ದೇವರ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಜಾತ್ರೆಯಲ್ಲಿ ಈ ಭಾಗದ ಅಸ್ನೋಟಿ, ಮಾಜಾಳಿ, ಕೃಷ್ಣಾಪುರ, ಚಿತ್ತಾಕುಲ, ಮುಡಗೇರಿ, ಹೊಸಳ್ಳಿ ಗ್ರಾಮಗಳಿಂದ ಬೇರೆಬೇರೆ ದೇವರುಗಳನ್ನು ಪಲ್ಲಕ್ಕಿಯಲ್ಲಿ ಕಡಲತೀರಕ್ಕೆ ತರಲಾಗುತ್ತದೆ. ಬಳಿಕ ಪಲ್ಲಕ್ಕಿಯಲ್ಲಿನ ದೇವರನ್ನು ಸಮುದ್ರದಲ್ಲಿ ಸ್ನಾನ ಮಾಡಿಸುವುದು ಇಲ್ಲಿನ ವಿಶೇಷ.
ಅದರಂತೆ ಈ ಬಾರಿ ಸಹ ಪಲ್ಲಕ್ಕಿಯಲ್ಲಿ ತಂದ ಏಳು ಗ್ರಾಮದ ದೇವರುಗಳಿಗೆ ಸಮುದ್ರದ ನೀರನ್ನು ಹಾಕಿ ಸ್ನಾನ ಮಾಡಿಸಿ ದರ್ಶನಕ್ಕೆ ಇರಿಸಲಾಯಿತು. ಜಾತ್ರೆಗೆ ಬಂದಂತಹ ಭಕ್ತರು ಸಮುದ್ರಸ್ನಾನ ಮಾಡಿ ಪಲ್ಲಕ್ಕಿಯಲ್ಲಿನ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಶಿವರಾತ್ರಿ ಆಚರಣೆಯನ್ನು ಮುಕ್ತಾಯಗೊಳಿಸಿದರು. ಇನ್ನು ಗಾಂವಗೇರಿಯಲ್ಲಿ ನಡೆಯುವ ಈ ರಾಮನಾಥ ದೇವರ ಜಾತ್ರಾ ಮಹೋತ್ಸವದಲ್ಲಿ ಗೋವಾ, ಮಹಾರಾಷ್ಟ್ರ, ಸೇರಿದಂತೆ ವಿವಿಧ ಭಾಗಗಳಿಂದ ಸಹ ಭಕ್ತರು ಆಗಮಿಸಿ ಪಾಲ್ಗೊಳ್ಳುತ್ತಾರೆ. ಶಿವರಾತ್ರಿಯ ದಿನದಂದು ಉಪವಾಸ ಮಾಡಿ ನಂತರ ಸಮುದ್ರಸ್ನಾನ ಮಾಡುವ ಮೂಲಕ ಉಪವಾಸ ಬಿಡುವುದು ಸಹ ಈ ಜಾತ್ರೆಯ ವಿಶೇಷತೆಗಳಲ್ಲಿ ಒಂದು.
ಅಲ್ಲದೇ ಸಮುದ್ರ ಸ್ನಾನಗಳಿಂದ ಪಾಪಗಳು ತೊಳೆದು, ರೋಗ ರುಜಿನಗಳು ದೂರಾಗುತ್ತವೆ ಎನ್ನುವ ನಂಬಿಕೆ ಇದೆ. ಜೊತೆಗೆ ಮೃತರಾದ ಹಿರಿಯರಿಗೆ ಇದೇ ಸಂದರ್ಭದಲ್ಲಿ ಕಡಲತೀರದಲ್ಲಿ ಪಿಂಡ ಪ್ರಧಾನವನ್ನ ಮಾಡಲಾಗುತ್ತದೆ. ಹಾಗೂ ಸಮುದ್ರಸ್ನಾನ ಮಾಡಿ ವಾಪಸ್ ತೆರಳುವ ವೇಳೆ ರಸ್ತೆ ಬದಿಯಲ್ಲಿ ಹಾಕಲಾಗುವ ಬಟ್ಟೆಯ ಮೇಲೆ ಪಡಿ ಅಂದರೆ ಅಕ್ಕಿ ಹಾಕಲಾಗುತ್ತದೆ. ಇದರಿಂದ ಹಿರಿಯರಿಗೆ ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆ ಇಲ್ಲಿನವರದ್ದು.
ಜಾತ್ರೆಗೆ ಆಗಮಿಸಿದ್ದ ಪ್ರಿಯಾಂಕ ಮಾತನಾಡಿ, "ಶಿವರಾತ್ರಿ ನಿಮಿತ್ತ ಸಮುದ್ರ ಸ್ನಾನಕ್ಕೆ ಜನರು ಬರುತ್ತಾರೆ. ಏಳು ಗ್ರಾಮಗಳಿಂದ ಇಲ್ಲಿಗೆ ದೇವರನ್ನು ಹೊತ್ತ ಪಲ್ಲಕಿ ಬರುತ್ತದೆ. ಇಲ್ಲಿ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿ ಈ ವಿಶೇಷ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ" ಎಂದರು.
ಇದನ್ನೂ ಓದಿ: ಸಮುದ್ರಕ್ಕೆ ಧುಮುಕಿ ಶವಾಸನ ಮಾಡಿದ ಸಚಿವ ಮಂಕಾಳ ವೈದ್ಯ: ವಿಡಿಯೋ ನೋಡಿ