ಶಿರಸಿ: ಶಂಕರಾಚಾರ್ಯರ ಪರಂಪರೆಯ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಉತ್ತರಾಧಿಕಾರಿ, 55ನೇ ಯತಿಗಳಾಗಿ ಶ್ರೀ ಆನಂದ ಬೋಧೇಂದ್ರ ಸರಸ್ವತಿ ಸ್ವಾಮೀಜಿ ನಿಯೋಜಿತಗೊಂಡರು.
1300 ವರ್ಷಗಳ ಇತಿಹಾಸ ಹೊಂದಿರುವ ಸ್ವರ್ಣವಲ್ಲೀ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಹಾಗೂ ಸನ್ಯಾಸ ಗ್ರಹಣದ ವಿಧಿ ವಿಧಾನಗಳು ನೆರವೇರಿದವು.
ಶಿಷ್ಯ ಸ್ವೀಕಾರ ಮಹೋತ್ಸವ ಕಾರ್ಯಕ್ರಮ ಕೊನೆಯ ದಿನ ಶೋಭನ ಸಂವತ್ಸರದ ಮಾಘ ಶುಕ್ಲ ತ್ರಯೋದಶಿಯಲ್ಲಿ ಇಂದು ಬೆಳಗ್ಗೆ 10ರಿಂದ 10.10ರ ಅವಧಿಯಲ್ಲಿ ನೂತನ ಶ್ರೀಗಳು ಸನ್ಯಾಸ ದೀಕ್ಷೆ ಸ್ವೀಕರಿಸಿದರು. ಬೆಳಗ್ಗೆ 5 ಗಂಟೆಯಿಂದ ವಿವಿಧ ಧಾರ್ಮಿಕ ಹಾಗೂ ಕಾಯ ಶೋಧನ ಕಾರ್ಯಗಳು ಶ್ರೀಮಠದಲ್ಲಿ ಜರುಗಿದವು.
ಬೆಳಗ್ಗೆ 9.40ಕ್ಕೆ ಶ್ರೀಮಠದಿಂದ ಸುಮಾರು ಒಂದು ಕಿ.ಮೀ ದೂರದ ಶಾಲ್ಮಲಾ ನದಿಯತ್ತ ಜಲಾಶಯಗಮನ ಮಾಡಲಾಯಿತು. ಬಳಿಕ ನೂತನ ಉತ್ತರಾಧಿಕಾರಿಗಳು ಸ್ನಾನ ಪೂರ್ಣಗೊಳಿಸಿ ಮೇಲ್ಮುಖವಾಗಿ ಜನಿವಾರ ತೆಗೆದು, ಶಿರದ ಮೇಲಿನ ಆರು ಕೂದಲನ್ನು ಹರಿದು, ಸಂಸಾರದ ಬಂಧ ಸಹಿತ, ಸರ್ವಸ್ವವನ್ನೂ ತ್ಯಾಗ ಮಾಡಿ ಏಳು ಹೆಜ್ಜೆ ಇಟ್ಟರು. ಪ್ರಪಂಚ ಬಂಧನ ಬಿಟ್ಟು ಸಚ್ಚಿದಾನಂದ ಸ್ವರೂಪಿಯಾದ ಅವರಿಗೆ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳು ಕಾಷಾಯ ವಸ್ತ್ರ ನೀಡಿದರು.
ಇದೇ ಶುಭಗಳಿಗೆಯಲ್ಲಿ ಸಾವಿತ್ರಿ ಪ್ರವೇಶ, ಪ್ರೇಶೋಚ್ಛಾರಣೆ, ಬ್ರಹ್ಮ ದಂಡದ ಧಾರಣೆ ಕೂಡ ಮಾಡಲಾಯಿತು.
10:30ರ ಸುಮಾರಿಗೆ ಶಾಲ್ಮಲಾ ನದಿ ತಟದಲ್ಲಿ ನೂತನ ಯತಿಗಳು ಭೂಸ್ಪರ್ಷ ಮಾಡಿದರು. ಅಲ್ಲಿಂದ ಪಂಚ ವಾದ್ಯಗಳ, ವೈದಿಕರ ವೇದ ಘೋಷ, ನಾಲ್ಕು ಸಾವಿರಕ್ಕೂ ಅಧಿಕ ಮಾತೆಯರಿಂದ ಪೂರ್ಣ ಕುಂಭ ಸ್ವಾಗತದ ಮೂಲಕ ನೂತನ ಯತಿಗಳನ್ನು ಸ್ವರ್ಣವಲ್ಲಿ ಹಾಗೂ ಇತರ ಮಠಗಳ ಯತಿಗಳನ್ನು ಶ್ರೀಮಠಕ್ಕೆ ಬರಮಾಡಿಕೊಳ್ಳಲಾಯಿತು.
ಶ್ರೀಮಠದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ಕೇಂದ್ರ ಮಾತೃ ಮಂಡಳಿ ಪ್ರಮುಖರು ಮಠದ ಆವರಣದಲ್ಲಿ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಶ್ರೀಮಠಕ್ಕೆ ಆಗಮಿಸಿದ ಬಳಿಕ ಆರಾಧ್ಯ ದೇವರ ದರ್ಶನ ಪಡೆದು ಗುರುಮೂರ್ತಿ ಭವನಕ್ಕೆ ತೆರಳಿದರು. ಬಳಿಕ ಶಂಖ ಸ್ನಾನ, ಪ್ರಣವ ಮಹಾ ವಾಕ್ಯೋಪದೇಶ ನೀಡಿ ನೂತನ ಶ್ರೀಗಳಿಗೆ ಶ್ರೀಆನಂದ ಬೋಧೇಂದ್ರ ಸರಸ್ವತಿ ಸ್ವಾಮೀಜಿಗಳು ಎಂದು ನಾಮಕರಣವನ್ನು ಸ್ವರ್ಣವಲ್ಲಿ ಶ್ರೀಗಳು ಮಾಡಿದರು. ನಂತರ ಪರ್ಯಂಕಶೌಚ, ಯೋಗಪಟ್ಟ, ಬ್ರಹ್ಮವಿದಾಶೀರ್ವಚನ ನಡೆಸಲಾಯಿತು.
ಪ್ರಸಿದ್ಧ ಶ್ರೀಗಳು ಭಾಗಿ: ನಾಡಿನ ಪ್ರಸಿದ್ಧ ಯತಿಗಳಾದ ಎಡತೋರೆ ಶ್ರೀಶಂಕರ ಭಾರತೀ ಸ್ವಾಮೀಜಿ, ಹರಿಹರ ಪುರದ ಶ್ರೀಸ್ವಯಂ ಪ್ರಕಾಶ ಸಚ್ಚಿದಾನಂದ ಸ್ವರೂಪಿ ಸ್ವಾಮೀಜಿ, ಬೆಂಗಳೂರಿನ ಕೂಡ್ಲಿ ಶೃಂಗೇರಿ ಮಠದ ವಿದ್ಯಾ ವಿಶ್ವೇಶ್ವರ ಭಾರತೀ ಸ್ವಾಮೀಜಿ, ಹೋಳೆನರಸೀಪುರದ ಶ್ರೀಪ್ರಕಾಶಾನಂದೇಂದ್ರ ಸ್ವಾಮೀಜಿ, ಶ್ರೀಮನ್ನೆಲಮಾವು ಮಠದ ಶ್ರೀಮಾಧವಾನಂದ ಭಾರತೀ ಮಹಾ ಸ್ವಾಮೀಜಿ, ತುರುವೇಕೇರೆಯ ಶ್ರೀಪ್ರಣವಾನಂದ ತೀರ್ಥ ಸ್ವಾಮೀಜಿ ಹಾಗೂ ಹಲವು ವಿದ್ವಾಂಸರು 30 ಸಾವಿರಕ್ಕೂ ಅಧಿಕ ಭಕ್ತ ಶಿಷ್ಯರು ಸಾಕ್ಷಿಯಾದರು.
ಇದನ್ನೂಓದಿ:ಬೂದಿ ಬಸವೇಶ್ವರ ಮಠದ ಜಾತ್ರೋತ್ಸವ: ಹಗ್ಗ ಇಲ್ಲದೇ ಪೀಠಾಧಿಪತಿ ಆಜ್ಞೆಯಂತೆ ಚಲಿಸುವ ಮಹಾರಥ