ವಿಶೇಷ ವರದಿ - ನೂರ್
ದಾವಣಗೆರೆ: ಹೆಚ್ಚು ಲಾಭಗಳಿಸುವ ಪರಿಕಲ್ಪನೆಯಿಂದ ರೈತರು ಅಡಕೆ ಹಿಂದೆ ಬಿದ್ದು ಇನ್ನಿತರೆ ಬೆಳೆಗಳನ್ನು ಬೆಳೆಯುವುದನ್ನೇ ಮರೆತುಬಿಟ್ಟಿದ್ದಾರೆ. ಆದರೇ ಇದಕ್ಕೆ ತದ್ವಿರುದ್ಧ ಎಂಬಂತೆ ಚನ್ನಗಿರಿ ತಾಲೂಕಿನ ನೀತಿಗೆರೆ ಗ್ರಾಮದ ನಿವೃತ್ತ ವಲಯ ಅರಣ್ಯಾಧಿಕಾರಿ ಒಂದು ಎಕರೆ ಜಮೀನಿನಲ್ಲಿ ಬಣ್ಣ ಬಣ್ಭದ ಕ್ಯಾಪ್ಸಿಕಂ ಬೆಳೆದಿದ್ದಾರೆ.

ಒಂಬತ್ತು ಬಾರಿ ಕ್ಯಾಪ್ಸಿಕಂ ಬೆಳೆ ಕಟಾವು : ಇದೇ ಬೆಳೆಯಿಂದ ಲಕ್ಷಾಂತರ ಆದಾಯಗಳಿಸುತ್ತಿದ್ದಾರೆ. ಇವರು ಬೆಳೆದ ಕ್ಯಾಪ್ಸಿಕಂಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದೆ. ನೀತಿಗೆರೆ ಗ್ರಾಮದ ನಿವೃತ್ತ ವಲಯ ಅರಣ್ಯಧಿಕಾರಿ ವೀರೇಶ್ ನಾಯ್ಕ್ ಅವರು ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಇವರು ಒಂದು ಎಕರೆ ಜಮೀನಿನಲ್ಲಿ ಬೆಳೆದ ಹಳದಿ, ಕೆಂಪು ಬಣ್ಣ ಬಣ್ಣದ ಕ್ಯಾಪ್ಸಿಕಂ ಹೆಚ್ಚು ಸುದ್ದಿ ಮಾಡುತ್ತಿದೆ. 35 ಲಕ್ಷ ಖರ್ಚು ಮಾಡಿ ಸುಸಜ್ಜಿತವಾದ ಪಾಲಿ ಹೌಸ್ ಮಾಡಿದ್ದು, ಹಳದಿ ಹಾಗೂ ಕೆಂಪು ಎರಡು ಬಣ್ಣದ ಕ್ಯಾಪ್ಸಿಕಂ ಬೆಳೆ ಬೆಳೆದು ಯಶ ಕಂಡಿದ್ದಾರೆ. ಈ ಬೆಳೆ ಹಾಕಿ ಕೇವಲ ಮೂರು ತಿಂಗಳಾಗಿದ್ದು, ಅದೃಷ್ಟ ಎಂಬಂತೆ ಒಂಬತ್ತು ಬಾರಿ ಕ್ಯಾಪ್ಸಿಕಂ ಬೆಳೆ ಕಟಾವು ಮಾಡಲಾಗಿದೆ.

ಕೆ.ಜಿ.ಗೆ 200: "ಪ್ರತಿ ವಾರಕ್ಕೆ ಒಂದು ಬಾರಿ ಕ್ಯಾಪ್ಸಿಕಂ ಕಟಾವು ಮಾಡುವ ಇವರಿಗೆ ಒಮ್ಮೆಲೇ 1ರಿಂದ 3 ಟನ್ ವರೆಗೂ ಫಸಲು ಕೈ ಸೇರುತ್ತಿದೆ. ಕಟಾವು ಮಾಡಿದ ಫಸಲನ್ನು ಹಳದಿ ಬೇರೆ ಕೆಂಪು ಕ್ಯಾಪ್ಸಿಕಂ ಬೇರೆ ಮಾಡಿ ಬಾಕ್ಸ್ಗೆ ತುಂಬಿ ಚೆನ್ನೈ (ಮದ್ರಾಸ್), ದೆಹಲಿ, ಕೋಲಾರ, ಬೆಂಗಳೂರು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಇವರಿಗೆ 70 ರೂಗಳಿಂದ 220 ರೂವರೆಗೂ ರೇಟ್ ಸಿಕ್ಕಿದೆ. ಪ್ರಸ್ತುತ ಪ್ರತಿ ಕೆ.ಜಿ.ಗೆ 200 ರೂ. ರಂತೆ ಕ್ಯಾಪ್ಸಿಕಂ ಮಾರಾಟ ಮಾಡಲಾಗುತ್ತಿದೆ" ಎಂದು ವೀರೇಶ್ ನಾಯ್ಕ್ ತಿಳಿಸಿದ್ದಾರೆ.


14 ಲಕ್ಷ ಆದಾಯ, ವಿದೇಶದಲ್ಲೂ ಬೇಡಿಕೆ: ವೀರೇಶ್ ನಾಯ್ಕ್ ಅವರು ಇಲ್ಲಿ ತನಕ 9 ಬಾರಿ ಕ್ಯಾಪ್ಸಿಕಂ ಕಟಾವು ಮಾಡಿದ್ದು, ಇಲ್ಲಿ ತನಕ ಒಟ್ಟು 14 ಲಕ್ಷ ಆದಾಯ ತಂದುಕೊಟ್ಟಿದೆ. ಇನ್ನೂ ಕೂಡ ಬೆಳೆಯಿಂದ 30 ರಿಂದ 35 ಲಕ್ಷ ಆದಾಯ ಬರುವ ನಿರೀಕ್ಷೆಯಲ್ಲಿ ವೀರೇಶ್ ನಾಯ್ಕ್ ಇದ್ದಾರೆ. ಮಧ್ಯವರ್ತಿಗಳು ಕ್ಯಾಪ್ಸಿಕಂ ಅನ್ನು ಗಲ್ಫ್ ದೇಶಗಳು ಸೇರಿದಂತೆ ಇಂಗ್ಲೆಂಡ್, ಅಮೆರಿಕ , ಉತ್ತರ ಕೊರಿಯಾಕ್ಕೆ ಕಳುಹಿಸುತ್ತಾರೆ ಎಂದು ವೀರೇಶ್ ಮಾಹಿತಿ ನೀಡಿದ್ದಾರೆ.


14 ತಿಂಗಳ ಬೆಳೆ, 11 ಸಾವಿರ ಗಿಡ: "ಕ್ಯಾಪ್ಸಿಕಂ 14 ತಿಂಗಳ ಬೆಳೆಯಾಗಿದೆ. 35 ಲಕ್ಷ ಖರ್ಚು ಮಾಡಿ ಪಾಲಿ ಹೌಸ್ ಮಾಡಿ ಮೂರು ತಿಂಗಳಿಂದ ಒಂದು ಎಕರೆಯಲ್ಲಿ ಬೆಳೆಯುತ್ತಿದ್ದೇನೆ. 11 ಸಾವಿರ ಗಿಡವಿದ್ದು ಅರ್ಧ ಎಕರೆ ಕೆಂಪು ಕ್ಯಾಪ್ಸಿಕಂ, ಇನ್ನುಳಿದ ಅರ್ಧ ಎಕರೆ ಹಳದಿ ಕ್ಯಾಪ್ಸಿಕಂ ಬೆಳೆದಿದ್ದೇವೆ. ಬೆಳೆ ಹಾಕಿ ಕೇವಲ ಮೂರು ತಿಂಗಳಾಗಿದೆ. ಈ ಬೆಳೆಗೆ ರಿಜ್ವಾನ್ ಸೀಡ್ಸ್ (ಬೀಜಗಳ) ಬಳಕೆ ಮಾಡಲಾಗಿದೆ. ಫಸಲನ್ನು ಪ್ರತಿ ಒಂದು ವಾರಕ್ಕೆ ಒಂದು ಬಾರಿ ಕಟಾವು ಮಾಡಲಾಗುತ್ತದೆ. ಪ್ರತಿ ಗಿಡಕ್ಕೆ ಡ್ರಿಪ್ ಮೂಲಕ ನೀರು ಹಾಯಿಸಲಾಗುತ್ತಿದೆ. ಅಲ್ಲದೇ ಫಸಲು ಚೆನ್ನಾಗಿ ಬರಲು ಬೋರಾನ್, ಮೆಗ್ನೀಸಿಯಂ, ಫೀಪ್ಟಿ ಹಾಲ್ ಸೇರಿದ್ದಂತೆ ಕೊಟ್ಟಿಗೆ ಗೊಬ್ಬರವನ್ನೂ ಕೂಡ ಬಳಕೆ ಮಾಡಲಾಗಿದೆ. ಪ್ರತಿ ಕಟಾವಿಗೆ 01-03 ಟನ್ ಬೆಳೆ ತೆಗೆದಿದ್ದೇನೆ. ಇಲ್ಲಿ ತನಕ 14 ಲಕ್ಷ ಆದಾಯ ಗಳಿಸಿದ್ದೇನೆ" ಎಂದು ವೀರೇಶ್ ನಾಯ್ಕ್ ಅವರು ತಿಳಿಸಿದ್ದಾರೆ.

ಉತ್ತರ ಕನ್ನಡ, ದಾಂಡೇಲಿ, ಚನ್ನಗಿರಿಯಲ್ಲಿ ಸೇವೆ: ವೀರೇಶ್ ನಾಯ್ಕ್ ಅವರು ವಲಯ ಅರಣ್ಯಧಿಕಾರಿ ಕರ್ತವ್ಯದಿಂದ ನಿವೃತ್ತಿ ಆಗಿ ಐದು ವರ್ಷಗಳೇ ಆಗಿವೆ. ಉತ್ತರ ಕನ್ನಡ, ದಾಂಡೇಲಿ, ಚನ್ನಗಿರಿಯಲ್ಲಿ ಸೇವೆ ಸಲ್ಲಿಸಿರುವ ಅವರು ನಿವೃತ್ತಿ ನಂತರ ತಮಗೆ ಸೇರಿದ ಎಂಟು ಎಕರೆ ಜಮೀನಿನಲ್ಲಿ ಕೃಷಿ ಮಾಡಬೇಕು ಎಂದು ಪಣ ತೊಟ್ಟು ಕ್ಯಾಪ್ಸಿಕಂ ಬೆಳೆದಿದ್ದಾರೆ. ಜತೆಗೆ ಜೇನು ಸಾಕಾಣಿಕೆ, ಹೈನುಗಾರಿಕೆ ಜತೆಗೆ ಸೀತಾಫಲ, ಮಾವು, ಚೆರ್ರಿ ಹಣ್ಣು ಮುಂತಾದ ಹಲವು ಬಗೆಯ ಹಣ್ಣಿನ ಗಿಡಗಳನ್ನು ನೆಟ್ಟಿದ್ದಾರೆ. ಹಸು, ಕುರಿ, ಮೊಲ, ಸಾಕಾಣಿಕೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಇನ್ನು ಫಾರ್ಮ್ ಹೌಸ್ನಲ್ಲಿ ಸ್ಥಳೀಯ 50 ಜನರಿಗೆ ಕೆಲಸ ಕೊಟ್ಟಿದ್ದಾರೆ. ಕ್ಯಾಪ್ಸಿಕಂ ನೋಡಿಕೊಳ್ಳಲು 10 ಜನ ಕೆಲಸ ಮಾಡುತ್ತಿದ್ದಾರೆ. ಬೆಳೆಗೆ ಇಂಡಿ ಗೊಬ್ಬರ, ಕುರಿ ಗೊಬ್ಬರ ಬಳಕೆ ಮಾಡಿದ್ದೇನೆ. ನಾನು ಪಕ್ಕಾ ಕೃಷಿಕ" ಎಂದು ಹೃಷ ವ್ಯಕ್ತಪಡಿಸಿದರು.


ಕ್ಯಾಪ್ಸಿಕಂ ಆರೈಕೆ ಮಾಡುವ ರಂಗಪ್ಪ: ಬೆಳೆ ಯಶಸ್ವಿಯಾಗಲು ಕೆಲಸಗಾರ ರಂಗಪ್ಪ ಅವರ ಶ್ರಮ ಕೂಡ ಹೆಚ್ಚಿದೆ. "ಇದನ್ನು ಮಾಡಲು ಬಲು ಕಷ್ಟಪಟ್ಟಿದ್ದೇವೆ. ಇದರದ್ದು ದೊಡ್ಡ ಕಥೆ ಇದೆ. ದಿನಕ್ಕೆ ಎರಡು ಬಾರಿ ನೀರು ಬಿಡುತ್ತೇನೆ. ಡ್ರಿಪ್ ಮೂಲಕ ನೀರು ಹಾಯಿಸಲಾಗುತ್ತದೆ. 10-20 ನಿಮಿಷ ನೀರು ಬಿಟ್ಟರೆ ಸಾಕು. ಇಲ್ಲಿ ಎಲ್ಲೂ ಗೊಬ್ಬರ ಸಿಗದೇ ಇದ್ದಾಗ ಸಾಹೇಬರು ಕಡೂರು, ಬೆಂಗಳೂರು ತನಕ ಹೋಗಿ ತರುತ್ತಾರೆ. ಕುರಿ ಗೊಬ್ಬರ ಕೂಡ ಬಳಕೆ ಮಾಡಲಾಗಿದೆ" ಎಂದು ಕೆಲಸದಾತ ರಂಗಪ್ಪ ತಿಳಿಸಿದರು.

ಇದನ್ನೂ ಓದಿ: ಕೃಷಿಗೂ ಬಂತು AI ತಂತ್ರಜ್ಞಾನ; ಬೆಳೆ ನಿರ್ವಹಣೆಗೆ ಸಿಗಲಿದೆ ಉಪಯುಕ್ತ ಮಾಹಿತಿ