ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಈ ಬಾರಿಯ ಸಾರ್ವಜನಿಕ ಗಣೇಶ ಮೂರ್ತಿಗಳ ನಿಮಜ್ಜನ ಮೆರವಣಿಗೆ ಸತತ 32 ಗಂಟೆಗಳ ಕಾಲ ನಡೆದಿದ್ದು, ಈ ಮೂಲಕ ಹೊಸ ದಾಖಲೆ ಬರೆದಿದೆ.
ಇಡೀ ರಾಜ್ಯದ ಗಣೇಶೋತ್ಸವ ಒಂದು ತೂಕವಾದರೆ, ಗಡಿನಾಡು ಬೆಳಗಾವಿಯಲ್ಲಿನ ಗಣೇಶೋತ್ಸವದ್ದೇ ಮತ್ತೊಂದು ತೂಕ. ಅದ್ಧೂರಿ ಗಣೇಶೋತ್ಸವ ಪರಂಪರೆಯನ್ನು ಇಲ್ಲಿನ ಬೆನಕ ಭಕ್ತರು ಮುಂದುವರಿಸಿದ್ದಾರೆ. 11 ದಿನಗಳ ಕಾಲ ಬೃಹದಾಕಾರದ, ಸುಂದರ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಮಂಡಳಿಗಳು ವಿಘ್ನವಿನಾಯಕನಿಗೆ ಅದ್ಧೂರಿ ಬೀಳ್ಕೊಡುಗೆ ಕೊಟ್ಟಿದ್ದಾರೆ. ಲಕ್ಷಾಂತರ ಜನರು ನಿಮಜ್ಜನ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

ಈ ಮೊದಲು ಒಂದೇ ದಿನದಲ್ಲಿ ಮೆರವಣಿಗೆ ಮುಕ್ತಾಯವಾಗುತ್ತಿತ್ತು. ಆದರೆ, ಕಳೆದ ವರ್ಷ ಸತತ 30 ಗಂಟೆ ನಡೆದಿದ್ದ ಮೆರವಣಿಗೆ, ಈ ಬಾರಿ 32 ಗಂಟೆ ನಡೆದು ಹೊಸ ದಾಖಲೆ ಬರೆಯಿತು. ಮಂಗಳವಾರ ಸಂಜೆ 5ಕ್ಕೆ ಆರಂಭಗೊಂಡ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಲಕ್ಷಕ್ಕೂ ಅಧಿಕ ಜನ ಜಮಾಯಿಸಿದ್ದರು. ಡಿ.ಜೆ, ಡಾಲ್ಬಿ ಸಂಗೀತಕ್ಕೆ ಯುವಕ-ಯುವತಿಯರು ಕುಣಿದು ಕುಪ್ಪಳಿಸಿ, ಸಿಡಿಮದ್ದು ಸಿಡಿಸಿ ಸಂಭ್ರಮಿಸಿದ್ದರು. ಗಣೇಶ ಮಂಡಳಿಗಳ ರೂಪಕಗಳು ನೋಡುಗರ ಗಮನ ಸೆಳೆದವು. ಅಲ್ಲದೇ ಡೋಲ್ ಥಾಷಾ, ಡೊಳ್ಳು ಸೇರಿ ಮತ್ತಿತರ ಕಲಾ ತಂಡಗಳು ಮೆರವಣಿಗೆ ಮೆರಗು ಹೆಚ್ಚಿಸಿದ್ದವು.

386 ಮೂರ್ತಿಗಳ ವಿಸರ್ಜನೆ: ಈ ವರ್ಷ ಬೆಳಗಾವಿ ನಗರದ ವಿವಿಧ ಗಲ್ಲಿ, ಬಡಾವಣೆಗಳಲ್ಲಿ ಬರೊಬ್ಬರಿ 386 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಈ ಪೈಕಿ ಎಸ್ಪಿಎಂ ರಸ್ತೆಯ ಕಪಿಲೇಶ್ವರ ದೇವಸ್ಥಾನದ ಹೊಸ ಹೊಂಡದಲ್ಲಿ 161, ಹಳೆಯ ಹೊಂಡದಲ್ಲಿ 44, ಇಂದ್ರಪ್ರಸ್ಥ ನಗರದ ಜಕ್ಕೇರಿ ಹೊಂಡದಲ್ಲಿ 58, ಕಣಬರ್ಗಿ ಕೆರೆ, ಹಳೇ ಬೆಳಗಾವಿ ಕೆರೆಯಲ್ಲಿ ತಲಾ 36, ಕೋಟೆ ಕೆರೆಯಲ್ಲಿ 34, ಅನಗೋಳದ ಲಾಲ್ ತಾಲಾಬ್ನಲ್ಲಿ 8, ಮಜಗಾವಿ ಕೆರೆಯಲ್ಲಿ 9 ಮೂರ್ತಿಗಳನ್ನು ವಿಸರ್ಜಿಸಲಾಯಿತು. ಕೊನೆಯದಾಗಿ ವರ್ಷದ ಪದ್ಧತಿಯಂತೆ ಮಹಾನಗರ ಪಾಲಿಕೆಯ ಗಣೇಶ ಮೂರ್ತಿ ನಿಮಜ್ಜನ ಮಾಡಲಾಯಿತು. ಬಹುತೇಕ ಬೃಹದಾಕಾರದ ಮೂರ್ತಿಗಳನ್ನು ಕ್ರೇನ್ಗಳ ಸಹಾಯದಿಂದ ವಿಸರ್ಜಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ಅಭಯ್ ಪಾಟೀಲ, ಆಸೀಫ್ ಸೇಠ್, ಬಾಬಾಸಾಹೇಬ ಪಾಟೀಲ ಸೇರಿ ಮತ್ತಿತರ ಜನಪ್ರತಿನಿಧಿಗಳು, ಗಣ್ಯರು ನಿಮಜ್ಜನ ಮೆರವಣಿಗೆ ಕಣ್ತುಂಬಿಕೊಂಡರು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಮೆರವಣಿಗೆ ಸುಗಮವಾಗಿ ನಡೆಯಲು ಶ್ರಮಿಸಿದರು.
ಚಾಕು ಇರಿತದಿಂದ ಮೂವರಿಗೆ ಗಾಯ, ಟ್ರ್ಯಾಲಿ ಹರಿದು ಓರ್ವ ವ್ಯಕ್ತಿ ಸಾವು ಹೊರತು ಪಡಿಸಿದರೆ, ಇನ್ನುಳಿದಂತೆ ಶಾಂತಿಯುತವಾಗಿ ಗಣೇಶ ನಿಮಜ್ಜನ ಮೆರವಣಿಗೆ ಸಂಪನ್ನಗೊಂಡಿದೆ. ಪೊಲೀಸರು ನಗರದಾದ್ಯಂತ ಬಿಗಿ ಭದ್ರತೆ ಕೈಗೊಂಡಿದ್ದರು. ಜಿಲ್ಲಾಡಳಿತ, ಪೊಲೀಸ್, ಮಹಾನಗರ ಪಾಲಿಕೆ, ಹೆಸ್ಕಾಂ ಸೇರಿ ಇನ್ನಿತರ ಇಲಾಖೆಗಳು ಗಣೇಶೋತ್ಸವ ಯಶಸ್ಸಿಗೆ ಹಗಲಿರುಳು ಶ್ರಮಿಸಿವೆ.
ಇದನ್ನೂ ಓದಿ: ಹುಬ್ಬಳ್ಳಿ: ಗಣೇಶೋತ್ಸವ ಮೆರವಣಿಗೆಯಲ್ಲಿ ನಟ ದರ್ಶನ್ ಫೋಟೋ ಹಿಡಿದು ಕುಣಿದ ಅಭಿಮಾನಿಗಳು - Hubballi Ganesh Procession