ಮಂಗಳೂರು: ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಆಯುಕ್ತರ ಕಚೇರಿ, ಬೆಂಗಳೂರು ಇವರ ಉಲ್ಲೇಖದ ಅನ್ವಯ ಸರ್ಕಾರಿ ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಶಾಲಾ ಮೈದಾನ, ಆವರಣವನ್ನು ಯಾವುದೇ ಸಂದರ್ಭದಲ್ಲಿ ಶೈಕ್ಷಣಿಕೇತರ ಚಟುವಟಿಕೆ ಉದ್ದೇಶಗಳಿಗೆ ಬಳಸಬಾರದು ಮತ್ತು ಅನುಮತಿ ನೀಡಬಾರದು ಎಂದು ದಕ್ಷಿಣ ಕನ್ನಡ ಡಿಡಿಪಿಐ ವೆಂಕಟೇಶ್ ಸುಬ್ರಾಯ ಪಟಗಾರ್ ಆದೇಶಿಸಿದ್ದಾರೆ.
ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಶಾಲಾ ಮೈದಾನ, ಆವರಣ ಬಳಸಲು ಅನುಮತಿಗಾಗಿ ಪ್ರಸ್ತಾವನೆಗಳನ್ನು, ಮನವಿಗಳನ್ನು ಸಲ್ಲಿಸಬಾರದು ಎಂದು ಇಲಾಖೆ ಸೂಚಿಸಿದೆ. ಹಾಗೂ ಶಾಲಾ ಹಂತದಲ್ಲಿ ಶೈಕ್ಷಣಿಕೇತರ ಚಟುವಟಿಕೆಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು ಎಂದು ತಿಳಿಸಿದೆ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಸಂಬಂಧಿಸಿದ ಶಾಲಾ ಮುಖ್ಯಸ್ಥರೇ ಹೊಣೆಗಾರರಾಗುತ್ತಾರೆ ಎಂದು ಅವರು ಆದೇಶಿಸಿದ್ದಾರೆ.
ಹಿನ್ನೆಲೆ ಏನು?: ಕಡಬ ತಾಲೂಕಿನ ಯಡಮಂಗಲ ಗ್ರಾಮದ ಕರಿಂಬಿಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜು. 14 ರಂದು ಸಂಜೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಗುರುಪೂಜೆ ಕಾರ್ಯಕ್ರಮ ನಡೆಸಿರುವುದು ವಿವಾದಕ್ಕೆ ಕಾರಣವಾಗಿತ್ತು.
ಸರಕಾರಿ ಶಾಲೆಯ ಆವರಣದೊಳಗೆ ಅಥವಾ ಮೈದಾನವನ್ನು ಕೂಡಾ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಕೊಡಬಾರದೆಂಬ ಸುತ್ತೋಲೆ ಇರುವಾಗ ಶಾಲೆಯ ಒಳಗೆಯೇ ಆರ್ಎಸ್ಎಸ್ ಕಾರ್ಯಕ್ರಮ ಮಾಡಲು ಅವಕಾಶ ಕೊಟ್ಟದ್ದು ಹೇಗೆ ಎಂದು ಸ್ಥಳೀಯ ಕೆಲವರು ಶಿಕ್ಷಣ ಇಲಾಖೆಗೆ ಮತ್ತು ಜಿಲ್ಲಾಡಳಿತಕ್ಕೆ ಪ್ರಶ್ನೆ ಮಾಡಿದ್ದರು.
ಶಾಲೆಯ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಮತ್ತು ಹಳೆಯ ವಿದ್ಯಾರ್ಥಿಗಳ ಸಂಘವು ಶಾಲೆಯಲ್ಲಿ ನವೀಕರಣ ಕೆಲಸಗಳನ್ನು ಪ್ರಾರಂಭಿಸಿತ್ತು. ಸುಧಾರಣೆಗೆ ನಿಧಿಗಾಗಿ ದೇಣಿಗೆ ಸಂಗ್ರಹಿಸಿತು. "ಶಾಲೆಯು ದೂರದ ಪ್ರದೇಶದಲ್ಲಿದೆ ಮತ್ತು ನವೀಕರಣ ಕಾರ್ಯಗಳ ಮೇಲ್ವಿಚಾರಣೆಗೆ ಶಿಕ್ಷಕರು ಹಾಜರಾಗಲು ಸಾಧ್ಯವಾಗದ ಕಾರಣ, ಮುಖ್ಯ ಶಿಕ್ಷಕರು ಆ ಹಳೆಯ ವಿದ್ಯಾರ್ಥಿಗಳಿಗೆ ಶಾಲೆಯ ಒಂದು ಕೀಲಿಯನ್ನು ನೀಡಿದ್ದರು. ಅವರು ಅನೇಕ ದಿನಗಳಿಂದ ನವೀಕರಣ ಕಾರ್ಯಗಳನ್ನು ನಡೆಸುತ್ತಿದ್ದರು. ಆದರೆ, ಈ ಮಧ್ಯೆ ಶಾಲೆಯಲ್ಲಿ ಆರ್ಎಸ್ಎಸ್ನಿಂದ ಗುರುಪೂಜೆ ನಡೆದ ಫೋಟೋ ವೈರಲ್ ಆಗಿತ್ತು. ಶಿಕ್ಷಣ ಇಲಾಖೆಯು ಘಟನೆಯ ಬಗ್ಗೆ ವಿವರಣೆಯನ್ನು ಕೋರಿ ಶಿಕ್ಷಕರಿಗೆ ನೋಟಿಸ್ ನೀಡಿತ್ತು.