ಕಲಬುರಗಿ: ಗ್ರಾಮ ಪಂಚಾಯಿತಿ ಮಾಜಿ ಸದಸ್ಯನಿಗೆ ಗುಂಡಿಕ್ಕಿ ಹತ್ಯೆಗೈದ ಪ್ರಕರಣದ ಆರೋಪಿಯು ಬಂಧಿಸಲು ಬಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆರೋಪಿ ಕಾಲಿಗೆ ಪೊಲೀಸರು ಗುಂಡೇಟು ನೀಡಿ, ಬಂಧಿಸಿರುವ ಘಟನೆ ಶನಿವಾರ ನಡೆದಿದೆ.
ಪ್ರಕರಣದ ಬಗ್ಗೆ ಎಸ್ಪಿ ಮಾಹಿತಿ: ಈ ಕುರಿತು ಎಸ್ಪಿ ಅಡ್ಡೂರು ಶ್ರೀನಿವಾಸುಲು ಮಾತನಾಡಿ, ''ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಜಿಡಗಾ ಕ್ರಾಸ್ ಬಳಿ ಸೆ. 13 ರಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ವಿಶ್ವನಾಥ ಜಮಾದರ್ ಹತ್ಯೆ ನಡೆದಿತ್ತು. ವಿಶ್ವನಾಥ್ ಜಮಾದಾರ್ ಕೊಲೆ ಕೇಸ್ನ ಆರೋಪಿ ಮಾಡ್ಯಾಳ್ ಗ್ರಾಮದ ಬಳಿ ಇರುವ ಖಚಿತ ಮಾಹಿತಿ ಮೇರೆಗೆ ವಿಶೇಷ ಪೊಲೀಸ್ ತಂಡ ತೆರಳಿತ್ತು. ಈ ವೇಳೆ ನಿಂಬರ್ಗಾ ಠಾಣೆ ಪಿಎಸ್ಐ ಇಂದುಮತಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಆರೋಪಿ ಲಕ್ಷ್ಮಣ್ ಪೂಜಾರಿ ಪರಾರಿಯಾಗಲು ಯತ್ನಿಸುವಾಗ ಆತ್ಮರಕ್ಷಣೆಗಾಗಿ ಅಫಜಲಪುರ ಠಾಣೆ ಪಿಎಸ್ಐ ಸೋಮಲಿಂಗ್ ಒಡೆಯರ್ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ'' ಎಂದು ತಿಳಿಸಿದರು.
ಪಿಎಸ್ಐ ಆಸ್ಪತ್ರೆಗೆ ದಾಖಲು: ''ಆಗಲೂ ಕೇಳದಿದ್ದಾಗ ಆರೋಪಿ ಪೂಜಾರಿ ಬಲಗಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಗುಂಡೇಟಿನಿಂದ ಕುಸಿದು ಬಿದ್ದ ಆರೋಪಿ ಲಕ್ಷ್ಮಣ್ ಪೂಜಾರಿಯನ್ನು ವಶಕ್ಕೆ ಪಡೆದು, ನಗರದ ಜಿಮ್ಸ್ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್ಗೆ ದಾಖಲಿಸಲಾಗಿದೆ. ಇತ್ತ ಗಾಯಾಳು ಪಿಎಸ್ಐ ಇಂದುಮತಿ ಅವರನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ'' ಎಂದರು.
''ಹತ್ಯೆಯಾದ ವಿಶ್ವನಾಥ ಜಮಾದಾರ್ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಪಡಸಾವಳಿ ಗ್ರಾಮದವರು. ಕೊಲೆ ಆರೋಪಿ ಲಕ್ಷ್ಮಣ್ ಪೂಜಾರಿ, ಆಳಂದ ತಾಲೂಕಿನ ಹಿತ್ತಲ್ ಶಿರೂರ್ ಗ್ರಾಮದ ನಿವಾಸಿ. ಕೊಲೆ ಹಿಂದಿನ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ'' ಎಂದು ಎಸ್ಪಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
''ಆರೋಪಿ ಲಕ್ಷ್ಮಣ್ ಪೂಜಾರಿ ವಿರುದ್ಧ ಅಕ್ರಮವಾಗಿ ಪಿಸ್ತೂಲ್ ಸಾಗಾಟ, ಕೊಲೆ, ಕೊಲೆ ಯತ್ನ ಸೇರಿದಂತೆ 11ಕ್ಕೂ ಅಧಿಕ ಪ್ರಕರಣಗಳು ಕಲಬುರಗಿ ಹಾಗೂ ಬೆಂಗಳೂರಿನಲ್ಲಿ ದಾಖಲಾಗಿವೆ'' ಎಂದು ಎಸ್ಪಿ ಅಡ್ಡೂರು ಶ್ರೀನಿವಾಸುಲು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಕಲಬುರಗಿ: ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿ ಕಾಲಿಗೆ ಗುಂಡೇಟು - Police Shot Rowdy Sheeter