ದಾವಣಗೆರೆ: "ಪ್ರಧಾನಿ ಮೋದಿ ರ್ಯಾಲಿಗೆ ನಮ್ಮ ವರಿಷ್ಠರನ್ನು ಅಹ್ವಾನ ಮಾಡಿಲ್ಲ. ಆಹ್ವಾನಿಸದೇ ಇರೋದು ನಮಗೆ ನೋವು ತಂದಿದೆ." ಬಿಜೆಪಿ ಮೈತ್ರಿ ಧರ್ಮ ಪಾಲಿಸಿಲ್ಲವೆಂದು ಆ ಪಕ್ಷದ ವರಿಷ್ಠರ ವಿರುದ್ಧ ಹರಿಹರ ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ ಅಸಮಾಧಾನ ಹೊರಹಾಕಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಷೇತ್ರ ಹಂಚಿಕೆ ಮಾಡುವ ವಿಚಾರವಾಗಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ಗೆ ಮಾತು ಕೊಟ್ಟ ಕ್ಷೇತ್ರಗಳಿಗೆ ಬಿಜೆಪಿ ವರಿಷ್ಠರು ತಗಾದೆ ತೆಗೆದಿರುವುದು ನಮಗೆ ಗೊಂದಲ ಉಂಟು ಮಾಡಿದೆ. ನಮಗೆ ಹಾಸನ, ಮಂಡ್ಯ, ಕೋಲಾರ ಕ್ಷೇತ್ರಗಳನ್ನು ಕೊಡುವುದಾಗಿ ಮಾತು ಕೊಟ್ಟಿದ್ದಾರೆ. ಈ ಮೂರು ಕ್ಷೇತ್ರಗಳಲ್ಲಿ ನಾವು ಯಾರನ್ನು ಬೇಕಾದರೂ ಅಭ್ಯರ್ಥಿಯಾಗಿ ಹಾಕಿಕೊಳ್ಳುತ್ತೇವೆ. ಆ ಕ್ಷೇತ್ರದ ನಮ್ಮ ಅಭ್ಯರ್ಥಿಯನ್ನು ಬದಲಿಸಿ ಎಂದು ಹೇಳಲು ಬಿಜೆಪಿ ನಾಯಕರು ಯಾರು. ನಾವು ಘೋಷಿಸುವ ಅಭ್ಯರ್ಥಿಗೆ ಅವರು ಕೆಲಸ ಮಾಡಬೇಕು. ಅವರು ಘೋಷಣೆ ಮಾಡಿದ ಅಭ್ಯರ್ಥಿಗೆ ನಾವು ಕೆಲಸ ಮಾಡೋದು ಮೈತ್ರಿ ಧರ್ಮ. ಈ ರೀತಿ ಮಾಡಿದರೆ ನಾವು ರಾಜ್ಯಾದ್ಯಂತ ಮೈತ್ರಿ ಧರ್ಮ ಪಾಲಿಸಲು ಸಾಧ್ಯವಿಲ್ಲ. ಬಿಜೆಪಿ ಗೆಲ್ಲುವ ವಾತಾವರಣ ರಾಜ್ಯದಲ್ಲಿ ಇಲ್ಲ." ಎಂದು ಹೇಳಿದರು.
"ಶಿವಮೊಗ್ಗ, ದಾವಣಗೆರೆಯಲ್ಲಿ ಬಿಜೆಪಿಗೆ ಬಂಡಾಯ ಇದೆ. ಇನ್ನು ಬೆಳಗಾವಿಯಲ್ಲಿ ಶೆಟ್ಟರ್ಗೆ ವಿರೋಧ ಇದೆ. ಎಲ್ಲಾ ಕ್ಷೇತ್ರಗಳಲ್ಲಿ ಒಂದರಿಂದ ಎರಡು ಲಕ್ಷ ಜೆಡಿಎಸ್ ಮತಗಳಿವೆ. ಬಿಜೆಪಿಗೆ ಅಷ್ಟು ಸುಲಭದ ಜಯ ಸಿಗುವುದಿಲ್ಲ"
"ವರಿಷ್ಠರನ್ನು ಅಗೌರಿಸಿ ನಮ್ಮ ಪಕ್ಷದ ಸ್ವಾಭಿಮಾನಕ್ಕೆ ಧಕ್ಕೆ ತಂದರೆ ನಾವು ಮೈತ್ರಿ ಧರ್ಮ ಪಾಲಿಸಲು ಸಾಧ್ಯವಿಲ್ಲ. ದಾವಣಗೆರೆಯಲ್ಲಿ ಬಿಜೆಪಿಗೆ ಫಲಪ್ರದ ವಾತಾವರಣ ಇಲ್ಲ. ಜೆಡಿಎಸ್ಗೆ ಟಿಕೆಟ್ ಕೊಟ್ಟರೆ ಸ್ಪರ್ಧಿಸಲು ಸಿದ್ಧರಿದ್ದೇವೆ. ಬಂಡಾಯ ಶಮನವಾಗಿ ಒಂದಾಗಿ ಕೆಲಸ ಮಾಡಲೂ ನಾವು ಸಿದ್ಧ" ಎಂದು ಎಚ್.ಎಸ್. ಶಿವಶಂಕರ್ ತಿಳಿಸಿದರು.
"ತೆಲಂಗಾಣದಲ್ಲಿ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಅವರನ್ನು ಕರೆದು ಮೋದಿ ರ್ಯಾಲಿ ಮಾಡಿದ್ರು. ಇಲ್ಲಿ ರ್ಯಾಲಿ ನಡೆದರೂ ಕೂಡ ನಮ್ಮ ವರಿಷ್ಠರಾದ ದೇವೇಗೌಡರನ್ನು ಕರೆಯಲಿಲ್ಲ. ದಾವಣಗೆರೆಯಲ್ಲಿ ಮೈತ್ರಿ ಧರ್ಮ ಪಾಲನೆ ಮಾಡಲು ಸಭೆ ನಡೆಸಿ ನಂತರ ನಿರ್ಧಾರ ಮಾಡುತ್ತೇವೆ. ವರಿಷ್ಠರ ಅದೇಶ ಬರುವ ತನಕ ತಟಸ್ಥವಾಗಿರಿ ಎಂದು ಕಾರ್ಯಕರ್ತರಿಗೆ ಹೇಳುತ್ತೇನೆ. ನನಗೆ ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಕರೆ ಮಾಡಿದ್ದರು. ಗೊಂದಲವನ್ನು ಬಗೆಹರಿಸಿಕೊಳ್ಳಿ, ಪಕ್ಷದ ಅಧ್ಯಕ್ಷರು ಆದೇಶ ಕಳಿಸಿದ ಬಳಿಕ ಮಾತುಕತೆ ನಡೆಸೋಣ ಎಂದಿರುವುದಾಗಿ" ಹೇಳಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಈಶ್ವರಪ್ಪ ಸೇರಿ ಹಲವರು ಗೈರು: ಕಮಲ ಪಡೆಗೆ ಬಂಡಾಯದ ಬಿಸಿ