ಶಿವಮೊಗ್ಗ: ತೀರ್ಥಹಳ್ಳಿಯ ಸಾಯಿ ಪ್ರಸಾದ್ರನ್ನು ಎನ್ಐಎ ಕೇವಲ ವಿಚಾರಣೆ ನಡೆಸಿ ವಾಪಸ್ ಕಳುಹಿಸಿದೆ. ಸಾಯಿ ಪ್ರಸಾದ್ ಯಾವ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ತೀರ್ಥಹಳ್ಳಿಯ ಸಾಯಿ ಪ್ರಸಾದ್ ಎಂಬ ಬಿಜೆಪಿ ಕಾರ್ಯಕರ್ತನನ್ನು ಎನ್ಐಎ ತಂಡ ವಿಚಾರಣೆಗೆಂದು ಕರೆದೊಯ್ದಿದ್ದರು ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿಯಾಗಿದ್ದನೆಂದು ಪ್ರಚಾರವಾಗುತ್ತಿತ್ತು. ಈಗ ಎನ್ಐಎ ತಂಡ ಸಾಯಿ ಪ್ರಸಾದ್ರನ್ನು ವಿಚಾರಣೆಗೆ ಒಳಪಡಿಸಿ, ವಾಪಸ್ ಕಳುಹಿಸಿದ್ದಾರೆ. ಮತೀನ್ನ ಮೊಬೈಲ್ ಅಂಗಡಿಯಲ್ಲಿ ಸಿಮ್ ಖರೀದಿ ಮಾಡಲು ಹೋದಾಗ ನೀಡಿದ ದಾಖಲೆಯಿಂದ ನಕಲಿ ಫೇಸ್ಬುಕ್ ಐಡಿಯನ್ನು ಕ್ರಿಯೇಟ್ ಮಾಡಿದ್ದನು. ಆ ಕುರಿತು ವಿಚಾರಣೆ ನಡೆಸಲು ಎನ್ಐಎ ಸಾಯಿ ಪ್ರಸಾದ್ರನ್ನು ಕರೆದಿತ್ತು ಎಂದು ವಿವರಿಸಿದರು.
ಮತೀನ್ ಮೊಬೈಲ್ ಅಂಗಡಿಯಲ್ಲಿ ಸುಮಾರು ಎಂಟು ಜನ ಸಿಮ್ ಖರೀದಿ ಮಾಡಿದ್ದರು. ಇವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಐಡಿ ಕ್ರಿಯೇಟ್ ಮಾಡಿದ್ದಾನೆ. ಇದರಿಂದ ಈ ಎಂಟು ಜನರನ್ನು ತನಿಖೆಗೆ ಕರೆಯಿಸುವ ಸಾಧ್ಯತೆ ಇದೆ. ಇದರಿದ ಸಿಮ್ ಖರೀದಿ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಯಾವ ಬಿಜೆಪಿ ಕಾರ್ಯಕರ್ತನು ಇಂತಹ ರಾಷ್ಟ್ರ ವಿರೋಧಿ ಕೃತ್ಯದಲ್ಲಿ ಭಾಗಿಯಾಗಿರಲಾರ. ನಮ್ಮ ಸಾಮಾನ್ಯ ಕಾರ್ಯಕರ್ತನಾದ ಸಾಯಿ ಪ್ರಸಾದ್ ಒಬ್ಬ ಪೇಂಟರ್, ಆತ ವಿಚಾರಣೆಗೆ ಒಳಪಟ್ಟು, ವಾಪಸ್ ಆಗುತ್ತಿದ್ದಾನೆ. ದಯವಿಟ್ಟು ಅಪಪ್ರಚಾರ ಮಾಡುವುಬೇಡ ಎಂದು ಮನವಿ ಮಾಡಿದ್ದಾರೆ.
ಮಾರ್ಚ್ 27 ರಂದು ಎನ್ಐಎ ತಂಡ ರಾಮೇಶ್ವರಂ ಬ್ಲಾಸ್ಟ್ ಪ್ರಕರಣ ಸಂಬಂಧ ತೀರ್ಥಹಳ್ಳಿ ಮುಸಾವೀರ್ ಮನೆ ಸೇರಿದಂತೆ ಸುಮಾರು ಮೂರು ಕಡೆ ದಾಳಿ ನಡೆಸಿತ್ತು. ಈ ವೇಳೆ ಮತೀನ್ ಮೊಬೈಲ್ ಅಂಗಡಿಯ ಮೇಲೂ ದಾಳಿ ನಡೆಸಲಾಗಿತ್ತು.
ಇದನ್ನೂ ಓದಿ: ಕೆಫೆ ಸ್ಫೋಟ ಕೇಸ್: ಪ್ರಮುಖ ಆರೋಪಿ, ಸಹ ಸಂಚಕೋರ ಇಬ್ಬರೂ ಶಿವಮೊಗ್ಗದವರು; ಸ್ನೇಹಿತರು, ಪರಿಚಯಸ್ಥರ ವಿಚಾರಣೆ - Cafe Blast Case