ಶಿವಮೊಗ್ಗ: ನನ್ನ ವಿರುದ್ದ ನ್ಯಾಯಾಧೀಶರ ಮುಂದೆ ಆರೋಪ ಮಾಡಿರುವ ಮೆಸ್ಕಾಂ ಇಂಜಿನಿಯರ್ ಶಾಂತಕುಮಾರಸ್ವಾಮಿ ಯಾರೆಂದು ನನಗೆ ಗೊತ್ತಿಲ್ಲ ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.
ಶಾಂತಕುಮಾರ್ ನಿನ್ನೆ ಹೈಕೋರ್ಟ್ನ ಏಕ ಸದಸ್ಯ ಪೀಠದೆದುರು, ಸಾಗರದ ಡಿವೈಎಸ್ಪಿ ಗೋಪಾಲ ನಾಯಕ್ ಹಾಗೂ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ನನಗೆ ಬೆದರಿಕೆ ಹಾಕಿ ಹಣ ಪಡೆಯಲು ಯತ್ನಿಸಿದರು. ನಾನು ಈ ವಿಚಾರವನ್ನು ರೆಕಾರ್ಡ್ ಮಾಡಿ ಲೋಕಾಯುಕ್ತಕ್ಕೆ ದೂರು ನೀಡಿದ್ದೆ. ಇದರಿಂದಾಗಿ ಇಬ್ಬರೂ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ನನಗೆ ರಕ್ಷಣೆ ನೀಡಿ ಎಂದು ಮನವಿ ಮಾಡಿದ್ದರು.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು, ಆತ ಸಾಗರ ತಾಲೂಕು ತಾಳಗುಪ್ಪದ ಮೆಸ್ಕಾಂ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ನನಗೆ ಮಾಹಿತಿ ಇದೆ. ಅವರು ಯಾವ ಕುರಿತು ಆರೋಪ ಮಾಡಿದ್ದಾರೆ ಅಂತ ನನಗೆ ಗೊತ್ತಿಲ್ಲ. ನಾನು ಫೋನ್ ಮಾಡಿಲ್ಲ, ಮಾತನಾಡಿಸಿಲ್ಲ ಎಂದರು.
ನನ್ನ ಮೇಲೆ ಆರೋಪ ಮಾಡಿರುವವರ ಮೇಲೆ ಗಾಂಜಾ ಕೇಸು, ಹೆಣ್ಣು ಮಗಳ ಕುರಿತ ಕೇಸ್ ಇದೆ. ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದರೆಂದು ಗೊತ್ತಿದೆ. ನಾನು ಆ ಮನುಷ್ಯನ ಮುಖವನ್ನೇ ನೋಡಿಲ್ಲ. ಆನಂದಪುರಂನ ಮೆಸ್ಕಾಂ ಜೆಇ ಅಂದುಕೊಂಡಿದ್ದೆ. ಆದರೆ ಈತ ಬೇರೆ ಎಂದು ಹೇಳಿದರು.
ನನ್ನ ವಿರುದ್ದ ಸುಮ್ಮನೆ ಆರೋಪ ಮಾಡಿರುವ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಿಸುತ್ತೇನೆ. ಸುಮ್ಮನೆ ಆರೋಪ ಮಾಡಿದರೆ ಯಾರೂ ಸುಮ್ಮನಿರುವುದಿಲ್ಲ. ನಾನು ಯಾವಾಗ, ಎಲ್ಲಿ ಹಣ ಕೇಳಿದ್ದೆ ಎಂದು ಆತ ತಿಳಿಸಬೇಕೆಂದರು.
ಇದನ್ನೂ ಓದಿ: ₹15 ಸಾವಿರ ಲಂಚ ಸ್ವೀಕರಿಸುತ್ತಿದ್ದ ಮೆಸ್ಕಾಂ ಎಂಜಿನಿಯರ್ ಲೋಕಾಯುಕ್ತ ಬಲೆಗೆ