ಬೆಳಗಾವಿ: ''ಚುನಾವಣೆ ಬಂದಾಗ ಗಾಳಿ, ಮೋಡ, ಮಳೆ ಸ್ವಾಭಾವಿಕ. ಅಲ್ಲಿ ಹೋಗುವವರು, ಇಲ್ಲಿ ಬರುವವರು ಇರುವರೇ'' ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಸದ್ದಿಲ್ಲದೇ ಬಿಜೆಪಿಯಿಂದ ರಾಜ್ಯದಲ್ಲಿ ರಿವರ್ಸ್ ಆಪರೇಷನ್ ನಡೆಯುತ್ತಿದೆಯಾ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ''ಚುನಾವಣೆ ಬಂದಾಗ ರಾಜಕಾರಣದಲ್ಲಿ ಈ ರೀತಿ ಆಗುವುದು ಸಹಜ. ಗಾಳಿ, ಮೋಡ, ಮಳೆ ಸ್ವಾಭಾವಿಕ. ಒಂದು ಕಡೆ ಜೋರು ಮಳೆ ಆಗುತ್ತೆ, ಕೆಲವು ಕಡೆ ಆಗುವುದೇ ಇಲ್ಲ. ರಾಜಕಾರಣದಲ್ಲಿ ಇದು ಸಹಜ'' ಎಂದರು.
ತಾವು ರಾಜ್ಯದ ಏಕನಾಥ ಶಿಂಧೆ ಆಗ್ತಿರಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ''ಈಗಾಗಲೇ ನಾನು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಹ್ಲಾದ್ ಜೋಶಿ ಜೊತೆ ಚರ್ಚಿಸಿದ್ದೇನೆ'' ಎಂದಾಗ ಪರ್ತಕರ್ತರು ಪ್ರಶ್ನೆಗಳ ಸರಮಾಲೆಗಳನ್ನೇ ಸಚಿವರ ಮುಂದಿಟ್ಟರು.
ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆಯೋ? ಅಥವಾ ರಾಜಕೀಯ ವಿಷಯಗಳ ಬಗ್ಗೆ ಚರ್ಚೆಯೋ ಎಂದು ಕೇಳಿದ ಪ್ರಶ್ನೆಗೆ, ''ಅಭಿವೃದ್ಧಿ ಜೊತೆಗೆ ರಾಜಕೀಯದ ಬಗ್ಗೆಯೂ ಚರ್ಚೆ ಆಗಿದೆ'' ಎಂದು ಹಾಸ್ಯ ಚಟಾಕಿ ಹಾರಿಸಿದರು. ''ರಾಜಕೀಯ ನಾಯಕರನ್ನು ಭೇಟಿ ಮಾಡಿದಾಗ ಉಭಯ ಕುಶಲೋಪರಿ ಮಾಡುವುದು ಸಹಜ. ಆಗ ನಿಮ್ಮ ಸರ್ಕಾರ ಹೇಗೆ ನಡೆಯುತ್ತಿದೆ ಎಂದು ಅವರು ಕೇಳುವುದು, ನಾವು ಹೇಳುವುದು ಎಲ್ಲವೂ ಸ್ವಾಭಾವಿಕ. ಈ ರೀತೀಯ ಚರ್ಚೆ ಆಗಿದೆ'' ಎಂದರು.
ರಿವರ್ಸ್ ಆಪರೇಷನ್ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, ''ಐದು ವರ್ಷಗಳ ಕಾಲ ಸರ್ಕಾರ ಬದಲಾವಣೆ ಸಂಬಂಧ ಚರ್ಚೆಗಳು ಸಹಜ. ಸರ್ಕಾರ ಬಂದ ದಿನವೇ ನಾನು ಈ ಮಾತನ್ನು ಹೇಳಿದ್ದೆ, ಈಗ ಹಾಗೆ ಆಗುತ್ತಿದೆ. ಈ ಬಗ್ಗೆ ಜಾಸ್ತಿ ಚರ್ಚೆ ಬೇಡ, ಅಭಿವೃದ್ಧಿ ಕೆಲಸಗಳ ಬಗ್ಗೆ ಎಲ್ಲರೂ ಬೆಳಕು ಚೆಲ್ಲೋಣ'' ಎಂದರು. ''ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ಬಹುತೇಕ ಅಂತಿಮವಾಗಿದ್ದು, ಬಹುಶಃ ಈ ವಾರದಲ್ಲಿ ಮುಖ್ಯಮಂತ್ರಿಗಳು ಮಾಡುತ್ತಾರೆ'' ಎಂದು ಅವರು ಇದೇ ವೇಳೆ ಹೇಳಿದರು.
ಬೆಳಗಾವಿಯಿಂದ ಜಗದೀಶ ಶೆಟ್ಟರ್ ಸ್ಪರ್ಧಿಸುವ ವಿಚಾರಕ್ಕೆ, ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಬಿಜೆಪಿಯವರು ಅವರನ್ನು ಎಲ್ಲಿ ಬೇಕಾದರೂ ನಿಲ್ಲಿಸಬಹುದು ಎಂದರು.
ಸತೀಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ನೀಡುವಂತೆ ಸೇಠ್ ಆಗ್ರಹ: ಬೆಳಗಾವಿಯಲ್ಲಿ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕ ಆಸೀಫ್ ಸೇಠ್, ಸತೀಶ್ ಜಾರಕಿಹೊಳಿ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂಬ ಬೇಡಿಕೆ ಹಲವು ದಿನಗಳಿಂದಲೂ ಇದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಈ ಭಾಗದ ಶಾಸಕರ ಬೇಡಿಕೆ ಮೊದಲಿನಿಂದಲೂ ಇದೆ. ಲೋಕಸಭಾ ಚುನಾವಣೆ ಬಳಿಕ ನೀಡಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಸರ್ಕಾರ ಮತ್ತು ಹೈಕಮಾಂಡ್ ಗಮನಕ್ಕೆ ತರಲಾಗಿದೆ. ಇವತ್ತೂ ಮನವಿ ಮಾಡುತ್ತೇವೆ. ನಾಳೇನೂ ಮಾಡುತ್ತೇವೆ. ಮತ್ತೊಂದು ಸಲವಾದರೂ ಮನವಿ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಸರ್ಕಾರ ನೀಡಿದ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ, ಬದ್ಧತೆ ಮೆರೆದಿದೆ: ರಾಜ್ಯಪಾಲ ಗೆಹ್ಲೋಟ್