ಬೆಂಗಳೂರು: ಬಿಡಿ ಮಾತ್ರೆಗಳನ್ನು ಮಾರಾಟ ಮಾಡಲು ನಿರಾಕರಿಸಿದ್ದ ನಗರದ ಮೆಡಿಕಲ್ ಶಾಪ್ವೊಂದರ ಪರವಾನಗಿಯನ್ನು ಔಷಧ ನಿಯಂತ್ರಣ ಇಲಾಖೆಯು ಎರಡು ದಿನಗಳ ಕಾಲ ಅಮಾನತುಗೊಳಿಸಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಇಲಾಖೆಯ ಆದೇಶದ ಅನ್ವಯ ಜುಲೈ 9 ಮತ್ತು 10ರಂದು ಮೆಡಿಕಲ್ ಶಾಪ್ ಮುಚ್ಚಲಾಗಿತ್ತು.
ಬಿಡಿ ಮಾತ್ರೆ ಮಾರಾಟ ನಿರಾಕರಣೆ, ಬಿಲ್ ನೀಡಲು ವಿಳಂಬ ಸೇರಿ ಪರವಾನಗಿಯಲ್ಲಿನ ಷರತ್ತುಬದ್ಧ ಅಂಶಗಳ ಉಲ್ಲಂಘನೆ ಕಂಡುಬಂದಿದ್ದರಿಂದ ಹಲಸೂರಿನ ಕೆಂಬ್ರಿಡ್ಜ್ ರಸ್ತೆಯ ಟ್ರಸ್ಟ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಮೆಡಿಕಲ್ ಶಾಪ್ ಪರವಾನಗಿಯನ್ನು ಎರಡು ದಿನಗಳ ಕಾಲ ಔಷಧ ನಿಯಂತ್ರಣ ಇಲಾಖೆಯು ರದ್ದುಗೊಳಿಸಿತ್ತು. ಈ ಅವಧಿಯಲ್ಲಿ ಔಷಧ ಮಾರಾಟ, ಖರೀದಿ ಹಾಗೂ ವಿತರಣೆ ಮಾಡಕೂಡದು ಎಂದು ಸಹಾಯಕ ಔಷಧ ನಿಯಂತ್ರಕಿ ಎ.ಎಂ.ಸನೋಫರ್ ಜಾನ್ ತಮ್ಮ ಆದೇಶದಲ್ಲಿ ತಿಳಿಸಿದ್ದರು.
ಪ್ರಕರಣ ವಿವರ: ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಎಂಬುವರು ತಮಗೆ ಅನಾರೋಗ್ಯ ಹಿನ್ನೆಲೆ ವೈದ್ಯರ ಸೂಚನೆ ಮೇರೆಗೆ ಮಾತ್ರೆಗಳನ್ನ ಖರೀದಿಸಲು ಕಳೆದ ಮೇ 5ರಂದು ಮೆಡಿಕಲ್ ಶಾಪ್ಗೆ ಹೋಗಿ ಎರಡು ಬಿಡಿ ಮಾತ್ರೆಗಳನ್ನು ಕೇಳಿದ್ದರು. ಆದರೆ, ಮೆಡಿಕಲ್ ಶಾಪ್ನವರು ಎರಡು ಮಾತ್ರೆ ನೀಡುವುದಿಲ್ಲ. ಖರೀದಿಸಿದರೆ 874 ರೂಪಾಯಿ ಕೊಟ್ಟು 14 ಮಾತ್ರೆವಿರುವ ಶೀಟ್ ಪಡೆಯಬೇಕು ಎಂದು ಶಾಪ್ ಸಿಬ್ಬಂದಿ ಹೇಳಿದ್ದರು.
ಇದಕ್ಕೆ ನರಸಿಂಹಮೂರ್ತಿ ತಮ್ಮ ಬಳಿ 200 ರೂಪಾಯಿ ಮಾತ್ರ ಹಣವಿದ್ದು ಎರಡರಿಂದ ಮೂರು ಮಾತ್ರೆ ಸಾಕು ಎಂದು ಹೇಳಿದರೂ ಮಾತ್ರೆ ನೀಡಲು ಸಿಬ್ಬಂದಿ ನಿರಾಕರಿಸಿದ್ದರು. ಅನಿವಾರ್ಯವಾಗಿ ಮನೆಗೆ ಹೋಗಿ ಹಣ ತೆಗೆದುಕೊಂಡು ಬಂದು ಪೂರ್ಣ ಮಾತ್ರೆಗಳನ್ನ ಖರೀದಿಸಿದ್ದರು. ಅಲ್ಲದೇ, ಬಿಲ್ ನೀಡಲು ವಿಳಂಬ ಧೋರಣೆ ಅನುಸರಿಸಿದ್ದರು ಎಂದು ಔಷಧ ನಿಯಂತ್ರಣ ಇಲಾಖೆಗೆ ನರಸಿಂಹಮೂರ್ತಿ ದೂರು ನೀಡಿದ್ದರು.
ಈ ದೂರಿನ ಮೇರೆಗೆ ಮೆಡಿಕಲ್ ಶಾಪ್ ಮಾಲೀಕರಿಗೆ ಇಲಾಖೆಯವರು ಕಾರಣ ಕೇಳಿ ನೊಟೀಸ್ ಜಾರಿ ಮಾಡಿದ್ದರು. ಅಲ್ಲದೇ ಮೇ 17ರಂದು ಔಷಧಿ ಅಂಗಡಿಗೆ ಬಂದು ಅಧಿಕಾರಿಗಳು ಪರಿಶೀಲಿಸಿದ್ದರು. ಈ ವೇಳೆ ಮೂಲ ಪರವಾನಗಿಗಳನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸದಿರುವುದು, ಖರೀದಿ ಹಾಗೂ ಮಾರಾಟದ ರಸೀದಿ ಸಮರ್ಪಕವಾಗಿ ಇಲ್ಲದಿರುವುದು ಕಂಡು ಬಂದಿತ್ತು. ಇದಕ್ಕೆ ಸಮಜಾಯಿಷಿ ನೀಡುವಂತೆಯೂ ನೊಟೀಸ್ ನೀಡಿತ್ತು.
ಮೇ 30ರಂದು ಶಾಪ್ ಮಾಲೀಕರು ಲಿಖಿತ ರೂಪದಲ್ಲಿ ಉತ್ತರಿಸಿದ್ದರು. ಜೊತೆಗೆ ಖುದ್ದು ವಿಚಾರಣೆಯಲ್ಲಿ ಸೂಕ್ತ ದಾಖಲಾತಿ ನೀಡಿರಲಿಲ್ಲ. ಹೀಗಾಗಿ ಔಷಧ ಹಾಗೂ ಕಾಂತಿವರ್ಧಕ ಅಧಿನಿಯಮ 1940ರಡಿ ಎರಡು ದಿನಗಳ ಕಾಲ ತಾತ್ಕಾಲಿಕವಾಗಿ ಮೆಡಿಕಲ್ ಶಾಪ್ ಪರವಾನಗಿ ರದ್ದು ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ವಿವಿಧ ಹಬ್ಬ ಹರಿದಿನಗಳಂದು ಮದ್ಯ ಮಾರಾಟ ನಿಷೇಧ: ರಾಜ್ಯದ ಬೊಕ್ಕಸಕ್ಕೆ 517 ಕೋಟಿ ಆದಾಯ ಖೋತಾ!