ಬೆಂಗಳೂರು: ಕುಮಾರ ಕೃಪಾ ಈಸ್ಟ್ ಬಂಗಲೆಗಾಗಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಜಟಾಪಟಿ ನಡೆಯುತ್ತಿದೆ. ಉಭಯ ನಾಯಕರ ಪ್ರತಿಷ್ಠೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೈರಾಣಾಗಬೇಕಾಗಿದೆ. ಪತ್ರ ವ್ಯವಹಾರಕ್ಕೆ ಸೀಮಿತವಾಗಿದ್ದ ವಿವಾದ ಇದೀಗ ಉಭಯ ನಾಯಕರ ನಡುವೆ ಟಾಕ್ ವಾರ್ಗೂ ಮುನ್ನುಡಿ ಬರೆದಿದೆ. ಅಷ್ಟಕ್ಕೂ ಈ ಬಂಗಲೆಗಾಗಿ ಯಾಕೆ ಡಿಮ್ಯಾಂಡ್?.
ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ವಿರೋಧ ಪಕ್ಷದ ನಾಯಕರಿಗೆ ಸರ್ಕಾರಿ ನಿವಾಸವನ್ನು ಹಂಚಿಕೆ ಮಾಡಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕುಮಾರಕೃಪಾ ಈಸ್ಟ್ ಬಂಗಲೆಯನ್ನು ಸಾಮಾನ್ಯವಾಗಿ ಪ್ರತಿಪಕ್ಷ ನಾಯಕರಿಗೆ ಹಂಚಿಕೆ ಮಾಡಿಕೊಂಡು ಬರಲಾಗುತ್ತಿದೆ. ಇದನ್ನು ಬಿಟ್ಟರೆ ರೇಸ್ ಕೋರ್ಸ್ ರಸ್ತೆಯ ರೇಸ್ ವ್ಯೂ ಕಾಟೇಜ್ ಹಂಚಿಕೆ ಮಾಡುವುದು ವಾಡಿಕೆ. ಆದರೆ ಈಗ ವಿರೋಧ ಪಕ್ಷದ ನಾಯಕರಾಗಿರುವ ಅಶೋಕ್ಗೆ ಸರ್ಕಾರ ಈವರೆಗೂ ಸರ್ಕಾರಿ ನಿವಾಸವನ್ನು ಹಂಚಿಕೆ ಮಾಡಿಲ್ಲ. ಹಾಗಾಗಿ ಸರ್ಕಾರಿ ನಿವಾಸ ಹಂಚಿಕೆ ಮಾಡುವಂತೆ 2023 ರ ನವೆಂಬರ್ನಲ್ಲಿ ಸರ್ಕಾರಕ್ಕೆ ಅಶೋಕ್ ಮೊದಲ ಪತ್ರ ಬರೆದಿದ್ದರು. ಬಳಿಕ 2024ರ ಫೆಬ್ರವರಿಯಲ್ಲಿ ಮತ್ತೊಮ್ಮೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈಗ ಮೂರನೇ ಬಾರಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಸರ್ಕಾರಿ ನಿವಾಸ ಹಂಚಿಕೆ ಮಾಡುವಂತೆ ಮನವಿ ಮಾಡಿದ್ದಾರೆ. ಇದು ಇದೀಗ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ.
ಮೂರಲ್ಲಿ ಒಂದು ಕೊಡಿ ಎಂದ ಅಶೋಕ್: ಕುಮಾರಕೃಪಾ ಪೂರ್ವ ನಿವಾಸ, ರೇಸ್ ವ್ಯೂವ್ ಕಾಟೇಜ್-1, ರೇಸ್ ವ್ಯೂವ್ ಕಾಟೇಜ್-2 ಈ ಮೂರರಲ್ಲಿ ಒಂದು ನಿವಾಸಕ್ಕೆ ಅಶೋಕ್ ಮನವಿ ಸಲ್ಲಿಸಿದ್ದಾರೆ. ಕುಮಾರಕೃಪ ನಿವಾಸ ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಕೊಡಲಾಗಿದೆ. ರೇಸ್ ವ್ಯೂವ್ ಕಾಟೇಜ್-1 ಸಚಿವ ಎಂ.ಬಿ.ಪಾಟೀಲ್ ಮತ್ತು ರೇಸ್ ವ್ಯೂವ್ ಕಾಟೇಜ್-2 ನಿವಾಸದಲ್ಲಿ ಸಚಿವ ಕೆ.ಜೆ.ಜಾರ್ಜ್ ಅವರಿದ್ದಾರೆ. ಈಗ ವಿಪಕ್ಷ ನಾಯಕ ಅಶೋಕ್ ಅವರು ಕೇಳಿರುವ ಈ ನಿವಾಸಗಳು ಈಗ ಖಾಲಿ ಇಲ್ಲ.
ಆರ್.ಅಶೋಕ್ ಈಗ ಮೂರನೇ ಪತ್ರ ಬರೆಯುತ್ತಿದ್ದಂತೆ ಅಲರ್ಟ್ ಆದ ಡಿ.ಕೆ.ಶಿವಕುಮಾರ್, ನನ್ನನ್ನೇ ಕೇಳಿದ್ರೆ ನಾನೇ ಅಶೋಕ್ಗೆ ಮನೆ ಕೊಡಿಸುತ್ತಿದ್ದೆ ಅಂತಾ ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಕೌಂಟರ್ ನೀಡಿದ ಅಶೋಕ್, ನಾನು ಡಿ.ಕೆ.ಶಿವಕುಮಾರ್ ಅವರ ಮನೆ ಕೇಳಿಲ್ಲ. ವಿರೋಧ ಪಕ್ಷ ನಾಯಕರ ಮನೆ ಕೇಳಿರೋದು. ಹಿಂದಿನಿಂದಲೂ ನಡೆದ ಪದ್ಧತಿ. ಸಿದ್ದರಾಮಯ್ಯ ಅವರಿಗೆ ನಮ್ಮ ಸರ್ಕಾರ ಇದ್ದಾಗ ಸೆವೆನ್ ಮಿನಿಸ್ಟರ್ ಕ್ವಾಟ್ರಸ್ ಕೊಟ್ಟಿದ್ದೆವು. ಆದರೆ ಅವರು ಕುಮಾರಕೃಪಾ ಈಸ್ಟ್ ಮನೆಯೇ ಬೇಕೆಂದಿದ್ದರು. ಅಂದಿನ ಸ್ಪೀಕರ್ ಕಾಗೇರಿ ಅವರಿಗೆ ನೀಡಿದ್ದ ಆ ಮನೆಯನ್ನು ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟಿದ್ದೆವು. ನನಗೆ ಅಲಾಟ್ ಆಗಿದ್ದ ಮನೆಯನ್ನು ಕಾಗೇರಿ ಅವರಿಗೆ ಬಿಟ್ಟುಕೊಟ್ಟಿದ್ದೆ. ನೀವು ಆ ಔದಾರ್ಯ ಯಾಕೆ ಮಾಡುತ್ತಿಲ್ಲ?. ಮಾಧ್ಯಮದವರನ್ನ ಭೇಟಿ ಮಾಡಲು, ಜನರನ್ನು ಭೇಟಿ ಮಾಡಲು ದೂರ ಬರಬೇಕು. ಜನರಿಗೆ ಸಹಾಯ ಮಾಡುವ ದೃಷ್ಟಿಯಿಂದ ಮನೆ ಕೊಡಲಿ. ನಾನು ಒಂದೇ ಮನೆ ಕೇಳಿಲ್ಲ. ಮೂರು ಮನೆಗಳಲ್ಲಿ ಒಂದು ಕೇಳಿದ್ದೇನೆ. ಮನೆ ಕೊಡದಿದ್ದರೂ ಸಂತೋಷ. ಮೂರು ಪತ್ರ ಬರೆದರೂ ಯಾವುದೇ ರಿಯಾಕ್ಷನ್ ಕೊಟ್ಟಿಲ್ಲ. ನಿಯಮದಲ್ಲಿ ಇರೋ ಪ್ರಕಾರ ನೀಡಿ ಎಂದು ಸರ್ಕಾರದ ವಿರುದ್ಧ ಹಾಗೂ ಡಿ.ಕೆ.ಶಿವಕುಮಾರ್ ನಡೆಯ ವಿರುದ್ಧ ಹರಿಹಾಯ್ದಿದ್ದರು.
ಇದನ್ನೂ ಓದಿ: ಪೋಕ್ಸೋ ಕೇಸ್: ಬಿ.ಎಸ್.ಯಡಿಯೂರಪ್ಪ ಬಂಧಿಸದಂತೆ ಹೈಕೋರ್ಟ್ ನಿರ್ದೇಶನ - Yadiyurappa POCSO Case
ಅಶೋಕ್ ಖಡಕ್ ಉತ್ತರ ನೀಡಿದ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಪತ್ರಿಕಾ ಪ್ರಕಟಣೆ ಹೊರಡಿಸಿ, ಇನ್ನು ಮುಂದೆ ಕುಮಾರಪಾರ್ಕ್ ಸರ್ಕಾರಿ ನಿವಾಸದಲ್ಲೇ ಡಿಸಿಎಂ ಲಭ್ಯ. ಸದಾಶಿವನಗರದಲ್ಲಿರುವ ಖಾಸಗಿ ನಿವಾಸದಲ್ಲಿ ಇನ್ನು ಮುಂದೆ ಯಾರನ್ನೂ ಭೇಟಿ ಮಾಡುವುದಿಲ್ಲ. ಯಾರೂ ಇದನ್ನು ತಪ್ಪಾಗಿ ಭಾವಿಸಬಾರದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆ ಮೂಲಕ ಅಶೋಕ್ಗೆ ಕುಮಾರಕೃಪಾ ಈಸ್ಟ್ ನಿವಾಸ ಸಿಗಲ್ಲ ಎನ್ನುವುದು ಸ್ಪಷ್ಟವಾಗಿದೆ.
ಕುಮಾರಕೃಪಾ ಈಸ್ಟ್ಗೆ ಡಿಮ್ಯಾಂಡ್ ಯಾಕೆ?: 2008ರಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಸಿದ್ದರಾಮಯ್ಯಗೆ ಕುಮಾರಕೃಪಾ ಈಸ್ಟ್ ಸರ್ಕಾರಿ ನಿವಾಸ ಹಂಚಿಕೆ ಮಾಡಲಾಗಿತ್ತು. ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 2013ರಲ್ಲಿ ಸಿದ್ದರಾಮಯ್ಯ ಸಿಎಂ ಆದರು. ಕುಮಾರಕೃಪಾ ಈಸ್ಟ್ನಿಂದ ಕಾವೇರಿಗೆ ಬಂದರು. ನಂತರ 2019ರಲ್ಲಿ ಎರಡನೇ ಬಾರಿಗೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಕಾವೇರಿಯಿಂದ ಮತ್ತೆ ಕುಮಾರಕೃಪಾ ಈಸ್ಟ್ಗೆ ಮರಳಿದರು. ನಾಲ್ಕು ವರ್ಷ ಅಲ್ಲಿಯೇ ಕಳೆದರು, 2023 ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಕಾವೇರಿ ನಿವಾಸಕ್ಕೆ ವಾಪಸ್ ಬಂದರು. ಹೀಗೆ ಸಿದ್ದರಾಮಯ್ಯ ಎರಡು ಬಾರಿಯೂ ಮುಖ್ಯಮಂತ್ರಿಯಾಗುವ ಮುನ್ನ ಕುಮಾರಕೃಪಾ ಈಸ್ಟ್ನಲ್ಲಿ ವಾಸವಿದ್ದು, ಅಲ್ಲಿಂದಲೇ ಕಾವೇರಿಗೆ ಬಂದಿದ್ದರು. ಹಾಗಾಗಿ ಈ ನಿವಾಸ ಅದೃಷ್ಟದ ನಿವಾಸ. ಕುಮಾರಕೃಪಾಗೆ ಬಂದರೆ ಅಲ್ಲಿಂದ ಕಾವೇರಿಗೆ ಶಿಫ್ಟ್ ಆಗುವ ಅವಕಾಶ ಸಿಗಲಿದೆ ಅಂದರೆ ಮುಖ್ಯಮಂತ್ರಿಯಾಗುವ ಅವಕಾಶ ಸಿಗಲಿದೆ ಎನ್ನುವ ನಂಬಿಕೆ ಇದೆ.
ಸಿದ್ದರಾಮಯ್ಯಗೆ ಕುಮಾರಕೃಪಾ ಈಸ್ಟ್ ಹೇಗೆ ಅದೃಷ್ಠದ ಮನೆಯೋ ಹಾಗೆಯೇ ಯಡಿಯೂರಪ್ಪ ಅವರಿಗೂ ರೇಸ್ ಕೋರ್ಸ್ ರಸ್ತೆಯ ರೇಸ್ ವ್ಯೂ ಕಾಟೇಜ್ ಅದೃಷ್ಟದ ನಿವಾಸವಾಗಿದೆ. ರೇಸ್ ಕೋರ್ಸ್ ರಸ್ತೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ ವಾಸ್ತವ್ಯ ಮಾಡಿದ್ದ ಯಡಿಯೂರಪ್ಪ ನಂತರ ಮುಖ್ಯಮಂತ್ರಿಯಾದರು. ಹಾಗಾಗಿಯೇ 2018ರಲ್ಲಿ ವಿರೋಧ ಪಕ್ಷದ ನಾಯಕರಾದಾಗಲೂ ರೇಸ್ ಕೋರ್ಸ್ ನಿವಾಸಕ್ಕೆ ಯಡಿಯೂರಪ್ಪ ಪಟ್ಟು ಹಿಡಿದಿದ್ದರು. ಹಾಗಾಗಿ ಅಶೋಕ್ ಕೂಡ ಕುಮಾರಕೃಪಾ ಈಸ್ಟ್ ಅಥವಾ ರೇಸ್ ಕೋರ್ಸ್ ರಸ್ತೆಯ ನಿವಾಸಕ್ಕೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ದರ್ಶನ್ ವಿಚಾರದಲ್ಲಿ ನನ್ನ ಹತ್ತಿರ ಪ್ರಭಾವ ಬೀರಲು ಯಾರೂ ಬಂದಿಲ್ಲ: ಸಿಎಂ ಸಿದ್ದರಾಮಯ್ಯ - CM Siddaramaiah