ಹಾಸನ: ಹಾಸನ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗಿದ್ದು, ಶಾಸಕ ಹೆಚ್.ಪಿ. ಸ್ವರೂಪ್ ತಮ್ಮ ಆಪ್ತರಿಗೆ ಸ್ಥಾನ ಕೊಡಿಸುವ ಮೂಲಕ ತಮ್ಮ ನಾಯಕತ್ವದ ಹಿಡಿತವನ್ನು ಸಾಬೀತು ಪಡಿಸಿದರು.
9ನೇ ವಾರ್ಡ್ ಜೆಡಿಎಸ್ ಸದಸ್ಯ ಎಂ. ಚಂದ್ರೇಗೌಡ ಅಧ್ಯಕ್ಷರಾಗಿ ಹಾಗೂ ಬಿಜೆಪಿಯಿಂದ ಆಯ್ಕೆಯಾದರೂ ಜೆಡಿಎಸ್ ಬೆಂಬಲಿಸಿದ್ದ 35ನೇ ವಾರ್ಡ್ ಸದಸ್ಯೆ ಲತಾದೇವಿ ಸುರೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಒಟ್ಟು 35 ಸಂಖ್ಯಾಬಲದ ಹಾಸನ ನಗರಸಭೆಯಲ್ಲಿ ಜೆಡಿಎಸ್ 17, ಕಾಂಗ್ರೆಸ್ 2 ಬಿಜೆಪಿ 14 ಸದಸ್ಯರ ಬಲ ಹೊಂದಿದ್ದರೆ, ಇಬ್ಬರು ಪಕ್ಷೇತರರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು ಒಟ್ಟು 19 ಮತಗಳ ಅಗತ್ಯವಿತ್ತು. ಇಬ್ಬರು ಕಾಂಗ್ರೆಸ್ ಸದಸ್ಯರನ್ನು ಹೊರತುಪಡಿಸಿ ಉಳಿದ ಎಲ್ಲ 34 ಸದಸ್ಯರು ಚಂದ್ರೇಗೌಡ ಪರ ಕೈ ಎತ್ತಿ ಮತ ಚಲಾಯಿಸುವ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದರು. ಕಣದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಕೇವಲ 2 ಮತ ಪಡೆದರು.
ಬಿಜೆಪಿಗೆ ಕೈಕೊಟ್ಟ ಮೈತ್ರಿ: ನಗರಸಭೆ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದ ಲತಾದೇವಿ 21 ಮತಗಳನ್ನು ಪಡೆದು ಆಯ್ಕೆಯಾದರು. ಅವರ ಪ್ರತಿಸ್ಪರ್ಧಿ ಬಿಜೆಪಿಯ ಶಿಲ್ಪಾ ವಿಕ್ರಂ 14 ಮತಗಳನ್ನು ಗಳಿಸಿ ಪರಾಭವಗೊಂಡರು. ಎನ್.ಡಿ.ಎ. ಮೈತ್ರಿಯಂತೆ ಉಪಾಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿದ್ದ ಬಿಜೆಪಿ ಶಿಲ್ಪಾ ವಿಕ್ರಂ ಅವರನ್ನು ಕಣಕ್ಕಿಳಿಸಿತ್ತು. ವಿಪ್ ಜಾರಿ ಹಿನ್ನೆಲೆಯಲ್ಲಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಲತಾದೇವಿ ಶಿಲ್ಪಾ ವಿಕ್ರಂ ಪರ ಮತಹಾಕಿದ್ದು ವಿಶೇಷವಾಗಿತ್ತು. ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾದ ಶಾಸಕ ಹೆಚ್.ಪಿ. ಸ್ವರೂಪ್ ಸಹ ಮತ ಚಲಾಯಿಸಿದರು.
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಅವರು ಅತ್ತ ಬಿಜೆಪಿ ಸದಸ್ಯೆ ಉಪಾಧ್ಯಕ್ಷರಾಗುವಂತೆ ನೋಡಿಕೊಂಡಿದ್ದಲ್ಲದೇ ತಮ್ಮ ಪಕ್ಷದ ವರಿಷ್ಠ ಹೆಚ್.ಡಿ.ರೇವಣ್ಣ ಹಾಗೂ ಮಾಜಿ ಶಾಸಕ ಪ್ರೀತಂಗೌಡ ಅವರ ಕಾರ್ಯತಂತ್ರಗಳನ್ನು ವಿಫಲಗೊಳಿಸಿದರು. ಇನ್ನು ವಿಪ್ ಉಲ್ಲಂಘನೆ ಮಾಡಿದರೆ ಸದಸ್ಯತ್ವ ಅನರ್ಹಗೊಳ್ಳುವ ಆತಂಕದಿಂದ ನಗರಸಭೆ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ತನ್ನ ವಿರುದ್ಧ ತಾನೇ ಚಲಾಯಿಸಿಕೊಂಡ ಘಟನೆಗೆ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ಸಾಕ್ಷಿಯಾಯಿತು.
ಎನ್.ಡಿ.ಎ. ಮೈತ್ರಿಯಂತೆ ಉಪಾಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿದ್ದ ಬಿಜೆಪಿ ಶಿಲ್ಪಾವಿಕ್ರಂ ಅವರನ್ನು ಕಣಕ್ಕಿಳಿಸಿ ವಿಪ್ ಜಾರಿ ಮಾಡಿತ್ತು. ಹೀಗಾಗಿ ಎಲ್ಲ ಬಿಜೆಪಿ ಸದಸ್ಯರು ಕಡ್ಡಾಯವಾಗಿ ಪಕ್ಷದ ಅಭ್ಯರ್ಥಿ ಪರವಾಗಿ ಮತ ಚಲಾಯಿಸಲೇಬೇಕಿತ್ತು. ವಿಪ್ ಉಲ್ಲಂಘಿಸಿದರೆ ಅವರ ಸದಸ್ಯತ್ವ ರದ್ದಾಗುವ ಅಪಾಯವಿತ್ತು.
ಆದರೆ ಬಿಜೆಪಿಯಿಂದ ಗೆದ್ದು ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದ ಲತಾದೇವಿ ಕೂಡ ಉಪಾಧ್ಯಕ್ಷ ಸ್ಥಾನದ ಚುನಾವಣಾ ಕಣದಲ್ಲಿ ಉಳಿದಿದ್ದರು. ಅವರಿಗೆ ಜೆಡಿಎಸ್ ಸದಸ್ಯರು ಬೆಂಬಲವಾಗಿದ್ದರು. ಹೀಗಾಗಿ ರಾಜಕೀಯ ಜಾಣ್ಮೆ ಮೆರೆದ ಅವರು ಉಪಾಧ್ಯಕ್ಷ ಸ್ಥಾನದ ಮತದಾನದ ವೇಳೆ ತಮ್ಮ ಎದುರಾಳಿ ಅಭ್ಯರ್ಥಿ ಶಿಲ್ಪಾ ಪರ ಕೈ ಎತ್ತಿ ಮತ ಚಲಾಯಿಸಿದರು. ಇದರಿಂದ ವಿಪ್ ತೂಗುಗತ್ತಿಯಿಂದ ಪಾರಾದರು.