ಬೆಂಗಳೂರು: "ದಲಿತ ಸಿಎಂ ಅಪ್ರಸ್ತುತ ವಿಚಾರ. ಸದ್ಯಕ್ಕೆ ಇದರ ಬಗ್ಗೆ ಚರ್ಚೆ ಮಾಡದೇ ಇರೋದೇ ಸೂಕ್ತ" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ದಲಿತ ಸಿಎಂ ಕೂಗು ವಿಚಾರವಾಗಿ ಪ್ರತಿಕ್ರಿಯಿಸಿ, "ಈಗ ಸ್ಥಿರವಾದ ಸರ್ಕಾರ ಇದೆ. ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ. ಹೆಚ್ಚಿನ ಸೀಟು ಗೆಲ್ಲೋಕೆ ನಾವು ಪ್ರಯತ್ನ ಮಾಡಬೇಕು. ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸೀಟು ಬರುತ್ತೆ. ಆಡಳಿತ ನಡೆಸಲು ಸುಗಮವಾಗುತ್ತೆ. ಒಬ್ಬೊಬ್ಬರು ಒಂದೊಂದು ರೀತಿ ವಿಶ್ಲೇಷಣೆ ಮಾಡ್ತಾರೆ" ಎಂದರು.
"ಮತ ಹಾಕಿಸಿಕೊಳ್ಳಲು ಮನವೊಲಿಕೆ ಮಾಡುತ್ತಾರೆ ಅಂತ ಒಬ್ಬರು ಹೇಳುತ್ತಾರೆ. ಇನ್ನೊಬ್ಬರು ಈಗ್ಯಾಕೆ ಅದೆಲ್ಲಾ ಅಂತಾರೆ. ಚರ್ಚೆಗೆ ಬಿಟ್ಟರೆ ಒಬ್ಬೊಬ್ಬರು ಒಂದೊಂದು ಹೇಳ್ತಾರೆ. ಈಗ ದಲಿತ ಸಿಎಂ ಅಪ್ರಸ್ತುತ ಅನ್ನೋದು ನನ್ನ ಅನಿಸಿಕೆ" ಎಂದು ಪ್ರತಿಕ್ರಿಯೆ ನೀಡಿದರು.
7 ಕ್ಷೇತ್ರಗಳಿಗೆ ಕೈ ಟಿಕೆಟ್ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿ, "ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ತುಮಕೂರು ಗೆಲ್ಲೋ ಸೀಟು, ಗೆಲ್ಲುವ ಸಾಧ್ಯತೆ ಇದೆ. ಎಲ್ಲರೂ ಪ್ರಯತ್ನ ಮಾಡಬೇಕು. ಕೆಲವರು ನಮಗೆ ಬೇಕು ಅಂತಾ ಕೇಳಿದ್ರು. ಕೆಲವರಲ್ಲಿ ಸ್ವಲ್ಪ ಅಸಮಾಧಾನ ಇರುತ್ತೆ. ಅದೆಲ್ಲಾ ಸರಿಮಾಡಿಕೊಂಡು ಹೋಗಬೇಕು. ಬಾಕಿ ಕ್ಷೇತ್ರಗಳ ಪ್ರಕ್ರಿಯೆ ನಡೀತಾ ಇದೆ. ಮಾ.11ಕ್ಕೆ ಕ್ಲಿಯರ್ ಮಾಡ್ತೀವಿ ಅಂತಾ ಅಧ್ಯಕ್ಷರೇ ಹೇಳಿದ್ದಾರೆ. ಅಸಮಾಧಾನಿತರನ್ನು ಕೂರಿಸಿಕೊಂಡು ಮನವೊಲಿಸ್ತೀವಿ. ಬಹಳ ಜನ ಆಕಾಂಕ್ಷಿಗಳು ಇದ್ದರು. ಸ್ಕ್ರೀನಿಂಗ್ ಮಾಡಿ ಲಿಸ್ಟ್ ತೆಗೆದುಕೊಂಡು ಹೋಗಿದ್ರು. ಹೈಕಮಾಂಡ್ ಶಿಫಾರಸು ಮಾಡಿ ಟಿಕೆಟ್ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಅನುಮಾನ ವಿಚಾರದ ಕುರಿತು ಪ್ರತಿಕ್ರಿಯಿಸಿ, "ಮಲ್ಲಿಕಾರ್ಜುನ ಖರ್ಗೆಯವರ ಸ್ಪರ್ಧೆ ಬಗ್ಗೆ ನನಗೆ ಗೊತ್ತಿಲ್ಲ. ಅಂತಿಮವಾಗಿ ಅವರೇ ತೀರ್ಮಾನ ಮಾಡಬೇಕು. ಅವರು ಎಐಸಿಸಿ ಅಧ್ಯಕ್ಷರಿದ್ದಾರೆ ತೀರ್ಮಾನ ಮಾಡ್ತಾರೆ. ಅವರ ಸ್ಪರ್ಧೆ ಬಗ್ಗೆ ನಾವು ಹೇಳೋಕೆ ಆಗಲ್ಲ. ದಲಿತ ಸಮುದಾಯಕ್ಕೆ ಬೇರೆ ಕ್ಷೇತ್ರ ಕೇಳಿರೋದು ಗೊತ್ತಿಲ್ಲ. ಆ ರೀತಿ ಪ್ರಸ್ತಾಪ ಇಲ್ಲ. ಇನ್ನೂ ಜಾತಿ ಜನಗಣತಿ ಬಿಡುಗಡೆ ಆಗಿಲ್ವಲ್ಲಾ" ಎಂದರು.
ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ವಿಚಾರವಾಗಿ ಪ್ರತಿಕ್ರಿಯಿಸಿ, "ಒಂದೊಂದು ರೀತಿಯಲ್ಲಿ ಮಾಹಿತಿಗಳು ಸಿಕ್ತಾ ಇವೆ. ಎನ್ಐಎ ತನಿಖೆ ತೀವ್ರ ಗತಿಯಲ್ಲಿ ನಡೆಯುತ್ತಿದೆ. ನಮ್ಮ ಸಿಸಿಬಿಯವರು ಕೂಡ ಸಪೋರ್ಟ್ ಮಾಡ್ತಿದ್ದಾರೆ. ಜೈಲಿನಲ್ಲಿ ವಿಚಾರಣೆ ಬಗ್ಗೆ ಎನ್ಐಎ ಗಮನಿಸಿದ್ದಾರೆ. ಬಹಳ ಸೀರಿಯಸ್ ಆಗಿ ತೆಗೆದುಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: "ಸಮುದಾಯಗಳ ಬಗ್ಗೆ ಮಾತನಾಡಿದ್ದು, ಪಕ್ಷದ ಬಗ್ಗೆ ಹೇಳಿಕೆ ನೀಡಿದ್ದಲ್ಲ": ದಲಿತ ಸಿಎಂ ಹೇಳಿಕೆಗೆ ಸಚಿವ ಮಹದೇವಪ್ಪ ಸ್ಪಷ್ಟನೆ