ಬೆಂಗಳೂರು: ವೈದ್ಯರಾದವರಿಗೆ ರೋಗಿಗಳ ಆರೋಗ್ಯ ಪರಿಶೀಲಿಸಲು ಇರುವ ಅಧಿಕಾರ ಅತ್ಯಂತ ಶ್ರೇಷ್ಠದ್ದಾಗಿದ್ದು, ಅದನ್ನು ರೋಗ ಗುಣಪಡಿಸಲು ಮಾತ್ರವೇ ಬಳಸಬೇಕು ಎಂದು ಎಚ್ಚರಿಸಿರುವ ಹೈಕೋರ್ಟ್, ರೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವೈದ್ಯರ ವಿರುದ್ಧದ ಎಫ್ಐಆರ್ ರದ್ದುಪಡಿಸಲು ನಿರಾಕರಿಸಿದೆ.
ತಮ್ಮ ವಿರುದ್ಧದ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮೂಲದ ಬೆಂಗಳೂರು ನಿವಾಸಿಯಾಗಿರುವ ಡಾ.ಎಸ್.ಚೇತನ್ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ವೈದ್ಯ ವೃತ್ತಿಯಲ್ಲಿ ಇರುವವರಿಗೆ ರೋಗಿಯ ಆರೋಗ್ಯವನ್ನು ಪರಿಶೀಲನೆ ನಡೆಸುವುದಕ್ಕೆ ಅವಕಾಶವಿದೆ. ಅದೊಂದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ. ಅದನ್ನು ರೋಗವನ್ನು ಗುಣಪಡಿಸುವ ಉದ್ದೇಶಕ್ಕೆ ಮಾತ್ರ ಬಳಸುವಂತಿರಬೇಕು. ದುರುದ್ದೇಶಪೂರ್ವಕವಾಗಿ ಬಳಕೆ ಮಾಡಿದಲ್ಲಿ ಅದು ಐಪಿಸಿ 354ಎ ಅಡಿ ಲೈಂಗಿಕ ಕಿರುಕುಳ ನೀಡಿದಂತಾಗಲಿದೆ ಎಂದು ಪೀಠ ತಿಳಿಸಿದೆ.
ಯಾವುದೇ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಿ ಬಳಲುತ್ತಿರುವ ಸಂದರ್ಭಗಳಲ್ಲಿ ಮಾತ್ರ ವೈದ್ಯರಲ್ಲಿಗೆ ಬರುತ್ತಾರೆ ಎಂಬ ಅಂಶವನ್ನು ವೈದ್ಯರಾದವರು ಗಮನದಲ್ಲಿಟ್ಟುಕೊಳ್ಳಬೇಕು. ರೋಗಿಯನ್ನು ಪರೀಕ್ಷೆಗೆ ಗುರಿಪಡಿಸುವ ವೈದ್ಯರಿಗೆ ಇರುವ ಅಧಿಕಾರವು ಲೈಂಗಿಕ ಶೋಷಣೆಗೆ ಅವಕಾಶಕ್ಕೆ ಕಾರಣವಾಗಬಹುದು ಎಂದು ಪೀಠ ಹೇಳಿದೆ.
ರೋಗಿಗಳ ದೌರ್ಬಲ್ಯವನ್ನು ವೈದ್ಯರು ಅಸ್ತ್ರವನ್ನಾಗಿ ಬಳಸಬಾರದು, ರೋಗಿಯು ವೈದ್ಯರ ಮೇಲಿನ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳಬಾರದು. ರೋಗಿಯ ದೇಹವನ್ನು ಪರೀಕ್ಷಿಸುವ ಅಧಿಕಾರವನ್ನು ಲೈಂಗಿಕ ಕಿರುಕುಳ ನೀಡುವುದಕ್ಕೆ ಬಳಸುವುದನ್ನು ಒಪ್ಪುಲು ಸಾಧ್ಯವಿಲ್ಲ. ಅಂತಹ ಕೃತ್ಯ ನಡೆದಲ್ಲಿ ಅದು ಲೈಂಗಿಕ ದೌರ್ಜನ್ಯಕ್ಕೆ ಕಾರಣವಾಗಲಿದೆ. ಈ ರೀತಿಯ ಕೃತ್ಯ ಬೆಳಕಿಗೆ ಬಂದಲ್ಲಿ ವೈದ್ಯರು ಮತ್ತು ರೋಗಿಯ ನಡುವೆ ವಿಶ್ವಾಸದ ಸಂಬಂಧಗಳು ನಾಶವಾಗಲಿದೆ ಎಂದು ಪೀಠ ಹೇಳಿದೆ.
ವೈದ್ಯರು ರೋಗಿಗಳನ್ನು ಪರಿಶೀಲಿಸುವ ವೇಳೆ ಲೈಂಗಿಕ ಮಿತಿಗಳ ಕುರಿತಂತೆ ಭಾರತೀಯ ವೈದ್ಯಕೀಯ ಮಂಡಳಿ ತನ್ನ ಜಾಲತಾಣದಲ್ಲಿ ವಿವರಿಸಲಾಗಿದೆ. ಅಂತಹ ಮಾರ್ಗಸೂಚಿಗಳ ಕುರಿತು ಭಾರತೀಯ ಮನೋವೈದ್ಯಕೀಯ ಸಂಸ್ಥೆಯ ಕಾರ್ಯಪಡೆ ಮಾರ್ಗಸೂಚಿಗಳನ್ನು ರೂಪಿಸಿದೆ. ಪ್ರಮುಖವಾಗಿ ಮಹಿಳಾ ರೋಗಿಯನ್ನು ದೈಹಿಕವಾಗಿ ಪುರುಷ ವೈದ್ಯರು ಪರೀಕ್ಷಿಸುವ ಸಂದರ್ಭದಲ್ಲಿ ಇನ್ನೋರ್ವ ಮಹಿಳಾ ವ್ಯಕ್ತಿ ಸ್ಥಳದಲ್ಲಿ ಉಪಸ್ಥಿತಿಯಲ್ಲಿರಬೇಕು. ವೈದ್ಯರು ರೋಗಿಯ ಸಂಬಂಧವನ್ನು ವೈಯಕ್ತಿಕ, ಸಾಮಾಜಿಕ ವ್ಯವಹಾರ ಅಥವಾ ಲೈಂಗಿಕ ಲಾಭಕ್ಕೆ ಬಳಕೆ ಮಾಡುಕೊಳ್ಳುವಂತಿಲ್ಲ ಎಂಬುದಾಗಿ ತಿಳಿಸಲಾಗಿದೆ.
ಆದರೆ, ಅರ್ಜಿದಾರ ವೈದ್ಯರು ಮೇಲ್ನೋಟಕ್ಕೆ ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ, ಪ್ರಕರಣದ ಕುರಿತು ಕನಿಷ್ಠ ತನಿಖೆ ನಡೆಯಬೇಕಾಗಿದೆ. ಅಲ್ಲದೆ, ಪ್ರಕರಣ ರದ್ದುಗೊಳಿಸುವಂತೆ ಕೋರಿರುವ ವೈದ್ಯರು ಕೇವಲ ವೈದ್ಯರಾಗಿರದೆ, ಆರೋಪಿ ಸ್ಥಾನದಲ್ಲಿದ್ದಾರೆ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರು ವೈದ್ಯರಾಗಿರುವ ಜೆಪಿ ನಗರದ ಏಳನೇ ಹಂತದಲ್ಲಿ ಆರ್ಬ್ಸ್ಕೈ ಆಸ್ಪತ್ರೆಗೆ ಎದೆನೋವು ಇರುವ ಮಹಿಳೆಯೊಬ್ಬರು ಪರೀಕ್ಷೆಗಾಗಿ ಬರುತ್ತಾರೆ. ಅವರನ್ನು ಪರಿಶೀಲಿಸಿದ ಅರ್ಜಿದಾರ ಚೇತನ್ ಅವರು ಇಸಿಜಿ ಮತ್ತು ಎಕ್ಸ್ರೇ ಪರೀಕ್ಷೆ ನಡೆಸುವಂತೆ ಸೂಚಿಸಿ ಆಕೆಯ ಮೊಬೈಲ್ ಸಂಖ್ಯೆಯನ್ನು ಪಡೆದು ವಾಟ್ಸ್ಆ್ಯಪ್ ಮಾಡುವುದಾಗಿ ತಿಳಿಸಿರುತ್ತಾರೆ. ಬಳಿಕ ಎಲ್ಲ ದಾಖಲೆಗಳನ್ನು ವಾಟ್ಸ್ಆ್ಯಪ್ ಮೂಲಕ ಕಳುಹಿಸಿ ತನ್ನ ಖಾಸಗಿ ಪ್ರಸಿದ್ಧಿ ಕ್ಲಿನಿಕ್ಗೆ ಬಂದು ಭೇಟಿಯಾಗುವಂತೆ ಸಲಹೆ ನೀಡಿದ್ದರು.
2024ರ ಮಾರ್ಚ್ 21ರಂದು ಕ್ಲಿನಿಕ್ಗೆ ಒಬ್ಬರೇ ಬಂದಿದ್ದ ಮಹಿಳಾ ರೋಗಿಯನ್ನು ಕೊಠಡಿಗೆ ಕರೆದೊಯ್ದು ಮಲಗಲು ಸೂಚಿಸಿ ಎದೆಯ ಮೇಲೆ ಸ್ಟೆಥಸ್ಕೋಪ್ ಇಟ್ಟು ಪರಿಶೀಲಿಸಿದರು. ಬಳಿಕ ಆಕೆಯ ಉಡುಪುಗಳನ್ನು ಮೇಲಕ್ಕೆ ಸರಿಸಿ ತನ್ನ ಕೈಯಿಂದ ಎದೆಯನ್ನು ಸ್ಪರ್ಶಿಸಿ, ಎಡಗಡೆ ಎದೆ ಭಾಗಕ್ಕೆ ಮುತ್ತಿಡಲು ಪ್ರಯತ್ನಿಸಿದ್ದಾರೆಂದು ದೂರಲಾಗಿದೆ.
ತಕ್ಷಣ ಎಚ್ಚೆತ್ತುಕೊಂಡ ಮಹಿಳೆ ಕ್ಲಿನಿಕ್ನಿಂದ ಹೊರಬಂದು ಕುಟುಂಬಸ್ಥರಿಗೆ ಮಾಹಿತಿ ನೀಡಿ, ಮರುದಿನ ಅಂದರೆ 2024ರ ಮಾರ್ಚ್ 22ರಂದು ಲೈಂಗಿಕ ಕಿರುಕುಳದ ಆರೋಪಿಸಿ ದೂರು ದಾಖಲಿಸಿದ್ದರು. ದೂರಿನ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಮುಂದುವರೆಸಿದ್ದರು. ಇದನ್ನು ಪ್ರಶ್ನಿಸಿ ವೈದ್ಯ ಚೇತನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಹೆಚ್ಎಸ್ಆರ್ಪಿ ನಂಬರ್ ಅಳವಡಿಸದ ವಾಹನ ಮಾಲೀಕರು ಮತ್ತೆ ನಿರಾಳ - HSRP Number Plate