ಬೆಂಗಳೂರು: ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸಾವಯವ ಮತ್ತು ಸಿರಿಧಾನ್ಯ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2025 ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಮೂರು ದಿನಗಳ ಕಾಲ ನಡೆದ ಮೇಳವನ್ನು 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 185.41 ಕೋಟಿ ರೂ.ಗಳ ವ್ಯಾಪಾರ ಒಪ್ಪಂದ ನಡೆದಿದೆ.
ಇಂದು(ಶನಿವಾರ) ಸಂಜೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ''ಮೂರು ದಿನಗಳ ಕಾಲ ನಡೆದ ಅಂತಾರಾಷ್ಟ್ರೀಯ ಸಾವಯವ, ಸಿರಿಧಾನ್ಯ ವಾಣಿಜ್ಯ ಮೇಳ ಅತ್ಯಂತ ಯಶಸ್ವಿಯಾಗಿದೆ. ಹಿಂದಿಗಿಂತಲೂ ಈ ಬಾರಿಯ ಮೇಳ ಅತ್ಯಂತ ವಿಶಿಷ್ಟ ಪೂರ್ಣವಾಗಿ ಆಯೋಜನೆಗೊಂಡಿದ್ದು, ಜನಮೆಚ್ಚುಗೆಗೆ ಪಾತ್ರವಾಗಿದೆ'' ಎಂದರು.

3 ಲಕ್ಷ ಮಂದಿ ವೀಕ್ಷಣೆ: ''ಈ ಬಾರಿಯ ಮೇಳದಲ್ಲಿ ಒಟ್ಟಾರೆ 185 ಬಿ2ಬಿ ಸಭೆಗಳಲ್ಲಿ 194 ಉತ್ಪಾದಕರು, 105 ಮಾರಾಟ ಸಂಸ್ಥೆಗಳು ಪಾಲ್ಗೊಂಡಿದ್ದು, ಒಟ್ಟಾರೆ 185.41 ಕೋಟಿ ರೂ.ಗಳ ಒಪ್ಪಂದ ಏರ್ಪಟ್ಟಿದೆ. ಮೇಳದ ಸ್ಟಾಲ್ಗಳಲ್ಲಿ ನಿರೀಕ್ಷೆಗೂ ಮೀರಿ ವ್ಯಾಪಾರ ವಹಿವಾಟು ನಡೆದಿದೆ. ಈ ವರ್ಷ ಅಂದಾಜು ಒಟ್ಟಾರೆ 3 ಲಕ್ಷ ಮಂದಿ ಮೇಳಕ್ಕೆ ಆಗಮಿಸಿ ವೀಕ್ಷಿಸಿ ಖರೀದಿಸಿದ್ದಾರೆ'' ಎಂದು ತಿಳಿಸಿದರು.
''ದೇಶದ 25 ರಾಜ್ಯಗಳು, 5 ರಾಜ್ಯಗಳ ಕೃಷಿ ಸಚಿವರು ಮೇಳದಲ್ಲಿ ಭಾಗವಹಿಸಿದ್ದು ಸಾರ್ವಕಾಲಿಕ ದಾಖಲೆಯಾಗಿದೆ. ಇತರ ರಾಜ್ಯಗಳು ಕರ್ನಾಟಕದ ಈ ಅಂತಾರಾಷ್ಟ್ರೀಯ ಮೇಳಕ್ಕೆ ಆಗಮಿಸಿ ಅಧ್ಯಯನ ನಡೆಸಿದ್ದು, ಇದೇ ಮಾದರಿ ಇರಿಸಿಕೊಂಡು ತಮ್ಮ ರಾಜ್ಯದಲ್ಲಿಯೂ ಸಿರಿಧಾನ್ಯ ಮೇಳ ಆಯೋಜಿಸುವುದಾಗಿ ಹೇಳಿದ್ದಾರೆ. ಇದು ನಮಗೆ ಹೆಮ್ಮೆ ತಂದಿದೆ. ದೇಸಿ ಪೆವಿಲಿಯನ್ ಕೂಡ ಎಲ್ಲರ ಆಕರ್ಷಣೆ ಪಡೆದಿದೆ'' ಎಂದರು.

''ರೈತರೇ ನೇರವಾಗಿ ಈ ಮೇಳದಲ್ಲಿ ಪಾಲ್ಗೊಂಡಿದ್ದು, ಅವರನ್ನು ಸನ್ಮಾನಿಸಿ ಪ್ರೋತ್ಸಾಹ ನೀಡಲಾಗಿದೆ. ಇದು ರೈತ ಸಮಯದಾಯಕ್ಕೆ ಸಲ್ಲುತ್ತಿರುವ ಗೌರವ ಎಂದೇ ನಾನು ಭಾವಿಸುತ್ತೇನೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ಖರೀದಿಸುತ್ತಿರುವುದು ಸಂತೋಷದ ವಿಚಾರ. ಹಾಗೆಯೇ ನೂರಾರು ಯುವಕರು ಕೃಷಿ ಉತ್ಪನ್ನಗಳ ಮೌಲ್ಯ ವರ್ಧಿತ ಉತ್ಪನ್ನಗಳ ತಯಾರಿ,ಮಾರಾಟ ರಪ್ತು ಉದ್ಯಮದಲ್ಲಿ ತೊಡಗಿರುವುದು ಆಶಾದಾಯಕ ಬೆಳವಣಿಗೆ. ಇದು ಮುಂದೆ ಕೃಷಿ ಹಾಗೂ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಇರುವ ಉಜ್ವಲ ಭವಿಷ್ಯವನ್ನು ಸೂಚಿಸುತ್ತಿದೆ'' ಎಂದು ಹೇಳಿದರು.

ಎಲ್ಲ ಅಧಿಕಾರಿಗಳಿಗೆ ಅಭಿನಂದನೆ: ''ಮೇಳಕ್ಕೆ ಆಗಮಿಸಿ ಕೃಷಿ ಹಾಗೂ ಕೃಷಿ ಮಾರುಕಟ್ಟೆ ಬಲವರ್ಧನೆಗೆ ನೆರವು ನೀಡುವ ಘೋಷಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಸಚಿವ ಸಂಪುಟದ ಸಹೋದ್ಯೋಗಿಗಳು, ವಿವಿಧ ರಾಜ್ಯಗಳ ಸಚಿವರು, ವಿದೇಶದಿಂದ, ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದ ಪ್ರತಿನಿಧಿಗಳು, ಸಂಪನ್ಮೂಲ ವ್ಯಕ್ತಿಗಳಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮೇಳವನ್ನು ಇಲಾಖಾ ಅಧಿಕಾರಿಗಳು ಅತ್ಯಂತ ಕಾಳಜಿ ನಿರಂತರ ಪರಿಶ್ರಮದಿಂದ ಯಶಸ್ವಿಯಾಗಿ ಸಂಘಟಿಸಿದ್ದಾರೆ. ಎಲ್ಲ ಅಧಿಕಾರಿಗಳಿಗೆ ಅಭಿನಂದಿಸುತ್ತೇನೆ'' ಎಂದು ತಿಳಿಸಿದರು.
ಇದನ್ನೂ ಓದಿ: ಬಾಯಿಗೆ ರುಚಿ, ಆರೋಗ್ಯ ಶುಚಿ: ಅಸಲಿ ಚಿಗಳಿಯಲ್ಲಿರುವ ಆರೋಗ್ಯದ ಗುಣಗಳೇನು?
''ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರಕ್ಕೆ ಇನ್ನಷ್ಟು ಶಕ್ತಿ ತುಂಬುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ. ಕೃಷಿಕ ಸಬಲನಾದರೆ ದೇಶ ಸುಭದ್ರ. ಗ್ರಾಮಗಳ ಅಭಿವೃದ್ಧಿ ಕೂಡ ಸಾಧ್ಯವಾಗುತ್ತದೆ. ಸಾವಯವ, ಸಿರಿಧಾನ್ಯಗಳು ಅತ್ಯಂತ ಅರೋಗ್ಯಕರ ಎಲ್ಲರೂ ಅದನ್ನು ಬಳಸಲು ಪ್ರಾರಂಭಿಸೋಣ, ಎಲ್ಲ ರೀತಿಯ ಸಿರಿಧಾನ್ಯಗಳನ್ನು ಬೆಂಬಲ ಬೆಲೆಯೊಂದಿಗೆ ಖರೀದಿಸಲು ಈಗಾಗಲೇ ಕೇಂದ್ರಕ್ಕೆ ಮನವಿ ಮಾಡಿದ್ದೇವೆ'' ಎಂದರು.

''ಕೃಷಿ ಇಲಾಖೆಯಲ್ಲಿ ಕೃಷಿ ನವೋದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹ, ನೆರವು ಇದೆ ಯುವ ಉದ್ಯಮಿಗಳು ಬಳಸಿಕೊಳ್ಳಿ. ಕೆಪೆಕ್ನಿಂದ ಕೃಷಿ ಉತ್ಪನ್ನಗಳ ರಪ್ತು ಉತ್ತೇಜನಕ್ಕೆ ಕ್ರಮ ವಹಿಸಲಾಗುತ್ತಿದೆ. ಮುಂದಿನ ಯುಗವು ಕೃಷಿಕರ ಅಭ್ಯುದಯ ಯುಗವಾಗಬೇಕು ಅದಕ್ಕೆ ಎಲ್ಲರೂ ಸೇರಿ ಶ್ರಮಿಸಬೇಕಿದೆ'' ಕೃಷಿ ಸಚಿವರು ಕರೆ ನೀಡಿದರು.
ಇದನ್ನೂ ಓದಿ: ದೇಸಿ ತಳಿಗಳನ್ನು ಸಂರಕ್ಷಣೆ ಮಾಡಿ ಸೈ ಎನಿಸಿಕೊಂಡಿರುವ ರೈತರು: 210 ಭತ್ತದ ತಳಿ ಉಳಿಸಿ ಮಾದರಿ!