ಕಲಬುರಗಿ: ಇಂದಿನ ಯುವಕ - ಯುವತಿಯರು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಶೇ.100ರಷ್ಟು ಕಠಿಣ ಪರಿಶ್ರಮ ಹಾಕಬೇಕು. ಆಗ ಮಾತ್ರ ಗೆಲುವು ಸಾಧ್ಯ ಎಂದು ಟೀಮ್ ಇಂಡಿಯಾ ಕ್ರಿಕೆಟ್ ಆಟಗಾರ್ತಿ, ಕಲಬುರಗಿಯ ಶ್ರೇಯಾಂಕಾ ಪಾಟೀಲ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
![Shreyanka Patil honored by Kalaburgi District Administration](https://etvbharatimages.akamaized.net/etvbharat/prod-images/04-04-2024/21142512_dsrsdf.jpg)
ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಆಟಗಾರ್ತಿ, ಜೀವನದಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ. ಅವುಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ರೂಡಿಸಿಕೊಳ್ಳಬೇಕು. ನೆವರ್ ಗಿವ್ ಅಪ್ ಆ್ಯಟಿಟ್ಯೂಡ್ ಮೂಲಕ ನೀವು ಕಂಡ ಕನಸನ್ನು ಸಾಕಾರಗೊಳಿಸಬೇಕು. ಅದಕ್ಕೆ ಶೇ.100ರಷ್ಟು ಪರಿಶ್ರಮ ಅಗತ್ಯ ಎಂದು ಸಲಹೆ ನೀಡಿದರು.
ನಾನು ಸಹ ನಿಮ್ಮ ವಯಸ್ಸಿನವಳೇ ಆಗಿದ್ದೇನೆ. ವಿರಾಟ್ ಕೊಹ್ಲಿಯಂಥ ಶ್ರೇಷ್ಠ ಆಟಗಾರರನ್ನು ಭೇಟಿ ಮಾಡಿದ ಮೇಲೆ ಮನಸ್ಥಿತಿ ಬದಲಾಗಿ ಕ್ರಿಕೆಟ್ನಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ನೀವೆಲ್ಲರೂ ನಿಮ್ಮಿಷ್ಟದ ಕ್ಷೇತ್ರವನ್ನು ಆಯ್ಕೆ ಮಾಡಿ, ನಿರಂತರ ಶ್ರಮ ಹಾಕಿ ಎಂದು ತಿಳಿಸಿದರು.
![Shreyanka Patil honored by Kalaburgi District Administration](https://etvbharatimages.akamaized.net/etvbharat/prod-images/04-04-2024/21142512_sdred.jpg)
ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮಾತನಾಡಿ, ಶ್ರೇಯಾಂಕಾ ಪಾಟೀಲ್ ಕೇವಲ ಕಲಬುರಗಿ ಅಷ್ಟೇ ಅಲ್ಲದೇ, ಇಡೀ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಅವರ ಕಠಿಣ ಶ್ರಮ, ಶಿಸ್ತು ಹಾಗೂ ಸಾಮರ್ಥ್ಯದಿಂದ ಇಂತಹ ಸಾಧನೆ ಮಾಡಲು ಸಾಧ್ಯವಾಗಿದೆ. ಶ್ರೇಯಾಂಕಾಗೆ ಅವರ ತಂದೆ-ತಾಯಿ ಸೇರಿದಂತೆ ಅವರ ಸಂಪೂರ್ಣ ಕುಟುಂಬದ ಬೆಂಬಲ ಅನನ್ಯ. ಅವರ ಈ ಸಾಧನೆಗೆ ಜಿಲ್ಲಾಡಳಿತದಿಂದ ಗೌರವ ಸೂಚಿಸಲಾಗುತ್ತಿದೆ ಎಂದು ತಿಳಿಸಿದರು.
ಶ್ರೇಯಾಂಕಾ ಪಾಟೀಲ್ ಅವರಿಂದ ಯುವಕ - ಯುವತಿಯರು ಸ್ಫೂರ್ತಿ ಪಡೆದು ಕೇವಲ ಕ್ರೀಡೆಯಷ್ಟೇ ಅಲ್ಲದೇ, ಪ್ರತಿಯೊಂದು ಉನ್ನತ ಹುದ್ದೆಗೆ ಕಲಬುರಗಿಯವರು ತಲುಪಬೇಕು. ಶ್ರೇಯಾಂಕಾ ಇನ್ನೂ ಹೆಚ್ಚಿನ ಸಾಧನೆ ಮಾಡಲಿ. ಅವರ ಶ್ರೇಯ ಮುಗಿಲೆತ್ತರಕ್ಕೆ ಏರಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಹಾಕೈ ಮಾತನಾಡಿ, ಶ್ರೇಯಾಂಕಾ ಪಾಟೀಲ್ ಅವರ ಸಾಧನೆ ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ. ಕಲಬುರಗಿ ಅಲ್ಲದೇ, ಕರ್ನಾಟಕದ ಎಲ್ಲರಿಗೂ ಶ್ರೇಯಾಂಕಾ ಸಾಧನೆ ಮಾದರಿಯಾಗಿದೆ. ಸಾಧನೆಗೆ ಯಾವುದೇ, ಹಳ್ಳಿ, ಊರು ಎನ್ನುವ ಗಡಿ ಇಲ್ಲ. ಎಲ್ಲರಲ್ಲೂ ಸಾಧಿಸುವ ಸಾಮರ್ಥ್ಯವಿದೆ. ಭಯ ಎಂಬ ಗ್ಲಾಸ್ ಸೀಲಿಂಗ್ ಒಡೆಯುವ ಮೂಲಕ ನಿಮ್ಮ ಮೆಚ್ಚಿನ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ನೀಡಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಶ್ರೇಯಾಂಕಾ ಪಾಟೀಲ್ ಅವರನ್ನು ಸ್ಫೂರ್ತಿಯನ್ನಾಗಿಸಿ, ನಿಮ್ಮ ಕನಸು ನನಸು ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
![Shreyanka Patil honored by Kalaburgi District Administration](https://etvbharatimages.akamaized.net/etvbharat/prod-images/04-04-2024/21142512_aserwwft.jpg)
ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ಆಸ್ತಿ ಮೌಲ್ಯ 135 ಕೋಟಿ ರೂ.ಗೂ ಹೆಚ್ಚು - Congress candidate Rajeev Gowda
ಕಾರ್ಯಕ್ರಮದಲ್ಲಿ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ಸ್ವಾಗತಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ಅವರು ಶ್ರೇಯಾಂಕಾ ಅವರನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ, ಪಾಲಿಕೆ ಆಯುಕ್ತ ಭುವನೇಶ್ ದೇವಿದಾಸ್ ಪಾಟೀಲ್, ಶ್ರೇಯಾಂಕಾ ಪಾಟೀಲ್ ಅವರ ತಂದೆ ರಾಜೇಶ್ ಪಾಟೀಲ್, ತಾತ ಅಮೃತಗೌಡ ಪಾಟೀಲ್, ಕೋಚ್ ಅರ್ಜುನ್ ಸೇರಿ ಅನೇಕರು ಇದ್ದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಮಂಗಳಮುಖಿಯರಿಂದ ವಿಶೇಷ ಮತದಾನ ಜಾಗೃತಿ ಜಾಥಾ - Voting Awareness By Transgenders
ಡಿಸಿ ಆಫೀಸ್ನಲ್ಲಿ ಆರ್ಸಿಬಿ ಸದ್ದು: ಸನ್ಮಾನ ಸಮಾರಂಭದಲ್ಲಿ ಬಂದು ಸೇರಿದ್ದ ವಿದ್ಯಾರ್ಥಿಗಳು ಶ್ರೇಯಾಂಕಾ ಅವರನ್ನು ಕಂಡು ಆರ್ಸಿಬಿ, ಆರ್ಸಿಬಿ, ಆರ್ಸಿಬಿ ಎನ್ನುತ್ತಾ ಈ ಸಲ ಕಪ್ ನಮ್ದೇ ಎಂದು ಜೈಘೋಷ ಕೂಗಿ ಸಂಭ್ರಮಿಸಿದರು.