ಕೊಪ್ಪಳ: "ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು, ಕಾರ್ಯಕರ್ತರು, ಮುಖಂಡರ ಶ್ರಮ ನನ್ನ ಗೆಲುವಿಗೆ ಕಾರಣವಾಗಿದೆ. ಕ್ಷೇತ್ರದಲ್ಲಿ ಜನಪರ ಕಾರ್ಯಗಳು, ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸುತ್ತೇನೆ" ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ್ ತಿಳಿಸಿದರು.
ಕೊಪ್ಪಳ ಕ್ಷೇತ್ರದಲ್ಲಿ ಸತತ ಮೂರು ಬಾರಿ ಸೋಲು ಕಂಡಿದ್ದ ಹಿಟ್ನಾಳ ಕುಟುಂಬ ಇದೀಗ ನಾಲ್ಕನೇ ಪ್ರಯತ್ನದಲ್ಲಿ ಗೆಲುವಿನ ನಗೆ ಬೀರಿದೆ. ಕೆ.ರಾಜಶೇಖರ ಹಿಟ್ನಾಳ್ ಅವರು ಬಿಜೆಪಿ ಅಭ್ಯರ್ಥಿ ಡಾ.ಕೆ.ಬಸವರಾಜ ಅವರನ್ನು 45 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ.
ಹ್ಯಾಟ್ರಿಕ್ ಸೋಲಿನಿಂದ ಪಾರಾದ ಹಿಟ್ನಾಳ್ ಕುಟುಂಬ: ಹಿಟ್ನಾಳ್ ಕುಟುಂಬದಿಂದ 2014ರಲ್ಲಿ ಕೆ.ಬಸವರಾಜ ಹಿಟ್ನಾಳ್ ಸ್ಪರ್ಧಿಸಿ ಸೋತಿದ್ದರು. 2019ರಲ್ಲಿ ರಾಜಶೇಖರ ಹಿಟ್ನಾಳ್ ಸೋಲುಂಡಿದ್ದರು. ಈ ಬಾರಿಯ ಹೋರಾಟದಲ್ಲಿ ಗೆಲ್ಲುವ ಮೂಲಕ ಹಿಟ್ನಾಳ್ ಕುಟುಂಬ ಹ್ಯಾಟ್ರಿಕ್ ಸೋಲಿನಿಂದ ಪಾರಾಗಿದೆ.
ಕೊಪ್ಪಳ ಕ್ಷೇತ್ರದಲ್ಲಿ ಲಿಂಗಾಯತ ವರ್ಸಸ್ ಕುರುಬ ಜನಾಂಗದವರ ಫೈಟ್ ಎಂದೇ ಬಿಂಬಿಸಲಾಗಿತ್ತು. ಕ್ಷೇತ್ರದ ಚುನಾವಣೆಯ ಇತಿಹಾಸ ನೋಡಿದಾಗ ಲಿಂಗಾಯತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದೇ ಹೆಚ್ಚು. 1991ರಲ್ಲಿ ಕೊಪ್ಪಳ ಲೋಕಸಭೆಗೆ ಸ್ಪರ್ಧಿಸಿದ್ದ ಸಿದ್ದರಾಮಯ್ಯನವರೂ ಸೋಲು ಅನುಭವಿಸಿದ್ದರು. ಇವರ ವಿರುದ್ದ ಸ್ಪರ್ಧಿಸಿದ್ದ ಲಿಂಗಾಯತ ಸಮಾಜದ ಬಸವರಾಜ ಪಾಟೀಲ ಜಯ ಗಳಿಸಿದ್ದರು.
ಕೊಪ್ಪಳ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಠಿ-ಸಚಿವ ತಂಗಡಗಿ: ಬಹಳ ವರ್ಷಗಳ ನಂತರ ಕೊಪ್ಪಳದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಿದ್ದೇವೆ. ಎಲ್ಲರ ಪರಿಶ್ರಮದಿಂದ ಕಾಂಗ್ರೆಸ್ಗೆ ಗೆಲುವಾಗಿದೆ. ಈ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಗಂಗಾವತಿಯಲ್ಲಿ ಅತೀ ಹೆಚ್ಚು ಮತವನ್ನು ಕಾಂಗ್ರೆಸ್ಗೆ ನೀಡುವುದರ ಮೂಲಕ ಜನರು ಶಾಸಕ ಜನಾರ್ದನ ರೆಡ್ಡಿ ಅವರ ಕಪಾಳಕ್ಕೆ ಹೊಡೆದಿದ್ದಾರೆ. ಚುನಾವಣಾ ಫಲಿತಾಂಶಪೂರ್ವ ಸಮೀಕ್ಷೆಗಳು ಸುಳ್ಳಾಗುತ್ತವೆ ಎಂದು ನಾನು ಈ ಮುಂಚೆಯೇ ಹೇಳಿದ್ದೆ. ನಿನ್ನೆಯವರೆಗೂ ಪ್ರಸಾರವಾದ ಎಕ್ಸಿಟ್ ಪೋಲ್ ಮೋದಿ ಅವರ ಎಕ್ಸಿಟ್ ಪೋಲ್ ಎನ್ನುತ್ತಾ ಬಿಜೆಪಿಗರನ್ನು ಕುಟುಕಿದರು.