ವಿಜಯಪುರ: ಭೀಮಾತೀರದ ರೌಡಿಶೀಟರ್ ಭಾಗಪ್ಪ ಹರಿಜನ ಹತ್ಯೆ ಇಡೀ ವಿಜಯಪುರ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು. ಹತ್ಯೆ ನಡೆದ ಮೂರೇ ದಿನಗಳಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣ ಕುರಿತು ಎಸ್ಪಿ ಲಕ್ಷ್ಮಣ ನಿಂಬರಗಿ ಸಂಪೂರ್ಣ ಮಾಹಿತಿ ನೀಡಿದ್ದಾರೆ. "ಫೆಬ್ರವರಿ 11ರಂದು ವಿಜಯಪುರ ಸಿಟಿಯ ಮದಿನಾ ನಗರದಲ್ಲಿ ಪಿಂಟು ಮತ್ತು ನಾಲ್ಕೈದು ದುಷ್ಕರ್ಮಿಗಳು ಸೇರಿ ಬಾಗಪ್ಪ ಹರಿಜನ್ಗೆ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದರು. ಬಳಿಕ ತಲ್ವಾರ್ ಮತ್ತು ಕೊಡಲಿಯಿಂದ ಹಲ್ಲೆ ನಡೆಸಿದ್ದರು. ಪರಿಣಾಮ ಬಾಗಪ್ಪ ಹರಿಜನ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಾಗಪ್ಪ ಹರಿಜನ ಅವರ ಮಗಳು ಗಂಗೂಬಾಯಿ ಹರಿಜನ ಗಾಂಧಿ ಚೌಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಾಗಪ್ಪ ಹರಿಜನ ಈಗಾಗಲೇ ಅಪರಾಧಿ ಹಿನ್ನೆಲೆ ಹೊಂದಿದ್ದ. 10ಕ್ಕೂ ಹೆಚ್ಚು ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ. ಈ ಪೈಕಿ 6ಕ್ಕೂ ಹೆಚ್ಚು ಕೊಲೆ ಪ್ರಕರಣಗಳಿವೆ" ಎಂದರು.
ಮುಂದುವರೆದು, "ಈ ಹಿನ್ನೆಲೆಯಲ್ಲಿ ಆತನ ಸಹಚನನಾಗಿದ್ದ ರವಿ ಮೇಲಿನಕೇರಿ ಎಂಬವ 6 ತಿಂಗಳ ಹಿಂದೆಯೇ ಕೊಲೆಯಾಗಿದ್ದ. ಈ ಪ್ರಕರಣದಲ್ಲಿ ತುಳಸಿರಾಮ ಹರಿಜನ ಹಾಗೂ ಆತನ ಸಹಚರರಾದ ಅಲೇಕ್ಸ್ ಗೊಲ್ಲರ, ಶಣ್ಮುಖ ನಡುವಿನಕೇರಿ, ಪ್ರಕಾಶ ಗೊಲ್ಲರ, ಮುರುಗೇಶ ಉಳ್ಳಾಗಡ್ಡಿ,ರಾಜೇಸಾಬ ರುದ್ರವಾಡಿ ಆರೋಪಿಗಳಾಗಿದ್ದಾರೆ. ಇವರೆಲ್ಲರೂ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ" ಎಂದು ಎಸ್ಪಿ ಹೇಳಿದರು.
ಅಣ್ಣನ ಹೆಂಡತಿಯ ಕುರಿತು ಅವಾಚ್ಯ ಪದ ಬಳಕೆ: "ರವಿ ಮೇಲಿನಕೇರಿ ಮತ್ತು ಬಾಗಪ್ಪ ಹರಿಜನ ಕೂಡ ಒಂದೇ ತಂಡದಲ್ಲಿದ್ದು ಹಲವಾರು ವರ್ಷ ಕೆಲಸ ಮಾಡಿದ್ದಾರೆ. ಇವರ ಮಧ್ಯೆ ಸಾಕಷ್ಟು ವ್ಯವಹಾರಗಳು ಇರುತ್ತದೆ. ಇವರಿಬ್ಬರೂ ಸಂಬಂಧಿಕರೂ ಕೂಡ ಹೌದು. ಆದರೆ ರವಿ ಮೇಲಿನಕೇರಿ ಕೊಲೆಯಾದ ಬಳಿಕ ಈತ ತಮ್ಮ ಪ್ರಕಾಶ್ ಮೇಲಿನಕೇರಿ ಮೇಲೆ ಬಾಗಪ್ಪ ಹರಿಜನ ಸಾಕಷ್ಟು ಒತ್ತಡ ಹಾಕುತ್ತಿದ್ದ. ರವಿ ನನ್ನ ಹೆಸರಿನಲ್ಲಿ ಸಾಕಷ್ಟು ಆಸ್ತಿ, ಹಣ, ವಾಹನ ಮಾಡಿದ್ದಾನೆ. ಅದೆಲ್ಲವನ್ನೂ ನನಗೆ ವರ್ಗಾಯಿಸಿ, ಇಲ್ಲದಿದ್ದರೆ 10 ಕೋಟಿ ಕೊಡಿ. ಅದೂ ಆಗದಿದ್ದರೆ ನಿಮ್ಮ ಅಣ್ಣನ ಹೆಂಡತಿಯನ್ನು ನನ್ನ ಹತ್ತಿರ ಕಳುಹಿಸು ಎಂದು ಅಣ್ಣನ ಹೆಂಡತಿಯ ಕುರಿತಾಗಿ ಅವಾಚ್ಯ ಪದ ಬಳಕೆ ಮಾಡಿ ಮಾತನಾಡಿದ್ದಾನೆ" ಎಂದರು.
![VIJAYAPURA BAGAPPA HARIJAN MURDER ACCUSED BHEEMATHEERA ರೌಡಿಶೀಟರ್ ಭಾಗಪ್ಪ ಹರಿಜನ](https://etvbharatimages.akamaized.net/etvbharat/prod-images/14-02-2025/23543117_dsdssds.jpg)
ಆಟೋ, ಬೈಕ್ನಲ್ಲಿ ಬಂದು ದಾಳಿ: "ಅಲ್ಲದೇ ನಿಮ್ಮ ಅಣ್ಣನಿಗೆ ಹೇಗೆ ಹೊಡೆದಿದ್ದೇನೋ, ಅದೇ ರೀತಿ ನಿನಗೂ ಹೊಡೆಯುವೆ ಅಂತಾ ಧಮಕಿ ಹಾಕಿದ್ದನಂತೆ. ಆಗ ಪ್ರಕಾಶ ಮೇಲಿನಕೇರಿಗೆ ತನ್ನ ಅಣ್ಣನ(ರವಿ) ಕೊಲೆ ಭಾಗಪ್ಪ ಹರಿಜನನೇ ಮಾಡಿಸಿದ್ದಾನೆ ಎಂದು ಖಚಿತವಾಗಿದೆ. ಆಗ ಭಾಗಪ್ಪ ಹರಿಜನನ್ನು ಕೊಲೆ ಮಾಡಲು ಪ್ರಕಾಶ ಮೇಲಿನಕೇರಿ ತನ್ನ ಸಂಬಂಧಿಕ ಹಾಗೂ ಸ್ನೇಹಿತರೊಂದಿಗೆ ಸಂಚು ಮಾಡಿ 11ರಂದು ಭಾಗಪ್ಪ ಹರಿಜನ ತನ್ನ ಮನೆಯ ಹೊರಗಡೆ ವಾಕಿಂಗ್ ಮಾಡುತ್ತಿದ್ದಾಗ ಆಟೋ ಹಾಗೂ ಬೈಕ್ನಲ್ಲಿ ಬಂದು ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾರೆ. 2 ಗುಂಡು ಹಾರಿದ್ದು ಅದರಲ್ಲಿ 1 ಮಾತ್ರ ಬಾಗಪ್ಪನಿಗೆ ತಗುಲಿದೆ. ಅಷ್ಟೇ ಅಲ್ಲದೆ, ಕೊಡಲಿ, ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾರೆ" ಎಂದು ಎಸ್ಪಿ ವಿವರಿಸಿದರು.
"ಪೊಲೀಸರು ಪ್ರಕಾಶ ಅಲಿಯಾಸ ಪಿಂಟು ಲಕ್ಷ್ಮಣ ಮೇಲಿನಕೇರಿ ಸೇರಿದಂತೆ ರಾಹುಲ್ ಭೀಮಾಶಂಕರ ತಳಕೇರಿ, ಸುದೀಪ , ಹಾಗೂ ಮಣಿಕಂಠ ಅಲಿಯಾಸ್ ಗದಿಗೆಪ್ಪ ಶಂಕ್ರಪ್ಪ ಬೆನಕೊಪ್ಪ ಎಂಬವರನ್ನು ಬಂಧಿಸಿದ್ದಾರೆ. ತನಿಖೆ ಮುಂದುವರೆದಿದೆ" ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದರು.
ಇದನ್ನೂ ಓದಿ: ಭೀಮಾತೀರದ ರೌಡಿಶೀಟರ್ ಬಾಗಪ್ಪ ಹರಿಜನ ಮರ್ಡರ್: 6 ಕೊಲೆ ಪ್ರಕರಣದ ಆರೋಪಿ ಮೇಲಿದ್ದವು ಹತ್ತಾರು ಕೇಸ್!