ಶಿವಮೊಗ್ಗ: ಭದ್ರಾವತಿಯ ಐದಾರು ಗ್ರಾಮಗಳ ಜನರಲ್ಲಿ ಆತಂಕ ಸೃಷ್ಟಿಸಿದ್ದ ಕರಡಿ ಸೆರೆಯಾಗಿದೆ. ತಟ್ಟೆಹಳ್ಳಿಯ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಕರಡಿಯ ಓಡಾಟವನ್ನು ಗಮನಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಿದ್ದ ಬೋನಿಗೆ ಇಂದು ಬೆಳಗ್ಗೆ ಕರಡಿ ಬಿದ್ದಿದೆ. ಕರಡಿ ಬೋನಿಗೆ ಬಿದ್ದಿದ್ದರಿಂದ ಅಗಸನಹಳ್ಳಿ, ಎಮ್ಮೆಹಟ್ಟಿ, ಕೆರೆಬೀರನಹಳ್ಳಿ, ತಿಮ್ಲಾಪುರ ಕ್ಯಾಂಪ್ ಹಾಗೂ ತಟ್ಟೆಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಕರಡಿ ಬೋನಿಗೆ ಬಿದ್ದಿರುವ ದೃಶ್ಯ ಇಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕರಡಿ ನೋಡಲು ಮುಗಿಬಿದ್ದ ಜನ: ಇನ್ನು ಕರಡಿ ಬೋನಿಗೆ ಬಿದ್ದಿದೆ ಎಂಬ ವಿಷಯ ತಿಳಿದ ಈ ಭಾಗದ ಅಗಸನಹಳ್ಳಿ, ಎಮ್ಮೆಹಟ್ಟಿ, ಕೆರೆಬೀರನಹಳ್ಳಿ, ತಿಮ್ಲಾಪುರ ಕ್ಯಾಂಪ್ ಸೇರಿದಂತೆ ಸುತ್ತಮುತ್ತ ಗ್ರಾಮದಲ್ಲಿನ ಜನರು ದೇವಾಲಯದ ಬಳಿ ಜಮಾಯಿಸಿದ್ದರು.
ಮಾವಿನಕಟ್ಟೆ ಅರಣ್ಯ ವಿಭಾಗದ ಆರ್ಎಫ್ಒ ಜಗದೀಶ್ ಈಟಿವಿ ಭಾರತ ಜೊತೆ ಮಾತನಾಡಿ, ಐದಾರು ಗ್ರಾಮದ ಜನರ ನಿದ್ದೆಗೆಡಿಸಿದ್ದ ಕರಡಿಯನ್ನು ಸೆರೆ ಹಿಡಿಯಲಾಗಿದೆ. ಕರಡಿಯನ್ನು ಮತ್ತೆ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಕುಮಟಾದ ಬರ್ಗಿಯಲ್ಲಿ ಬಾಯ್ತೆರೆದ ಗುಡ್ಡ; ಮತ್ತೊಂದು ದುರಂತದ ಆತಂಕ! - earth fissure in Kumta