ಬೆಂಗಳೂರು : ಬೆಂಗಳೂರು ಹುಡುಗರು ತಂಡವು ಕೂಲ್ ಟ್ರೀ ಅಭಿಯಾನಕ್ಕೆ ಮುಂದಾಗಿದ್ದು, ಈ ಹಿಂದೆ ಯಲಹಂಕದಲ್ಲಿ ಯಶಸ್ವಿಯಾದ ಬೆನ್ನಲ್ಲೇ ಭಾನುವಾರ ಇಂದಿರಾನಗರದಲ್ಲಿ ಅಭಿಯಾನ ನಡೆಸಲಾಗಿದೆ.
ಬಿಸಿಲಿಗೆ ಮರದ ತೊಗಟೆಗಳು ಒಣಗುವುದರಿಂದ ಗೆದ್ದಲು ಸುಲಭವಾಗಿ ಮರವನ್ನು ತಿಂದು ಹಾಕುತ್ತವೆ. ಇದರಿಂದ ಮರ ಸಾಯುವ ಅಥವಾ ಅದರ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ಪೈರೋಥ್ರಿನ್, ಆರ್ಗನೋಫಾಸ್ಟೆಡ್, ಮೆಲಾಥಿನ್ ಮಿಶ್ರಣ, ಬೇವಿನ ಎಣ್ಣೆ, ಸೂರ್ಯ ಸೆಮ್ ವೈಟ್ ವಾಷ್ ಬಳಸಿ ಪೇಸ್ಟ್ ತಯಾರಿಸಿ ಮರಕ್ಕೆ ಹಚ್ಚಲಾಗುತ್ತಿದೆ.

ಈ ಪೇಸ್ಟ್ ಅನ್ನು ಮರದ ಕಾಂಡಗಳಿಗೆ ಹಚ್ಚುವುದರಿಂದ ಸನ್ ಸ್ಕ್ರೀನ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಸ್ಥಳೀಯ ಸಂಸ್ಥೆಗಳ ಸ್ವಯಂಸೇವಕರ ಸಹಯೋಗದೊಂದಿಗೆ ಪ್ರತೀ ಭಾನುವಾರ ಈ ಅಭಿಯಾನವನ್ನು ಬೆಂಗಳೂರು ಹುಡುಗರು ತಂಡ ಹಮ್ಮಿಕೊಳ್ಳುತ್ತಿದೆ.
ಉದ್ಯಾನನಗರಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಧಗೆ ಹೆಚ್ಚಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ಮಾತ್ರವಲ್ಲದೇ ಮರಗಳು ತತ್ತರಿಸಿ ಹೋಗುತ್ತಿವೆ. ಬಿಸಿಲಿನ ಬೇಗೆಗೆ ಸನ್ಬರ್ನ್ ಆಗುವ ಜತೆಗೆ ಮರದ ತೊಗಟೆಗೆ ಗೆದ್ದಲು ಹಿಡಿಯುತ್ತದೆ. ಇದರಿಂದಾಗಿ ಮರಗಳಲ್ಲಿ ನೀರಿನಾಂಶ ಕ್ಷೀಣಿಸುವುದರೊಂದಿಗೆ ರೆಂಬೆ-ಕೊಂಬೆಗಳಲ್ಲಿ ಪೌಷ್ಟಿಕಾಂಶದ ಕೊರತೆಯಿಂದ ಬೆಳವಣಿಗೆ ಕುಂಠಿತವಾಗುತ್ತದೆ. ಇದನ್ನು ಮನಗಂಡ ‘ಬೆಂಗಳೂರು ಹುಡುಗರು ತಂಡ ‘ಕೂಲ್ ಟ್ರೀ’ ಅಭಿಯಾನವನ್ನು ಏ.7ರಂದು ಪ್ರಾರಂಭಿಸಿದೆ.

ಬೆಂಗಳೂರು ಹುಡುಗರು ತಂಡವು ಬಿಬಿಎಂಪಿ ಅರಣ್ಯ ತಜ್ಞರೊಂದಿಗೆ ಚರ್ಚಿಸಿದ ನಂತರ, ಕೀಟಗಳಿಂದ ಮರಗಳನ್ನು ಸಂರಕ್ಷಿಸಲು ಪೈರೋಥ್ರಿನ್, ಆರ್ಗನೋಫಾಸ್ಫೇಡ್, ಮೆಲಾಥಿನ್ ಮಿಶ್ರಣ, ವೃಕ್ಷಗಳಿಗಾದ ಗಾಯಗಳನ್ನು ಗುಣಪಡಿಸಲು ಮತ್ತು ಶಿಲೀಂಧ್ರಗಳಿಂದ ಕಾಪಾಡಲು ಬೇವಿನ ಎಣ್ಣೆ, ಸೂರ್ಯನ ಶಾಖ ಪ್ರತಿಬಿಂಬಿಸಲು ಸಣ್ಣ ಪ್ರಮಾಣದ ಸೂರ್ಯ ಸೆಮ್ ವೈಟ್ ವಾಶ್ ಪೌಡರ್ ಹಾಗೂ ಮಿಶ್ರಣವು ಮರದ ತೊಗಟೆಗೆ ಅಂಟಿಕೊಳ್ಳಲೆಂದು ಗೋಧಿ ಹಿಟ್ಟು ಬಳಸಲಾಗುತ್ತಿದೆ. ಈ ಎಲ್ಲಾ ವಸ್ತುಗಳನ್ನು ಪೇಸ್ಟ್ ರೀತಿಯಲ್ಲಿ ಕಲಸಿಕೊಂಡು, ಮರದ ಬುಡಕ್ಕೆ ಹಚ್ಚಲಾಗುತ್ತಿದೆ ಎಂದು ಬೆಂಗಳೂರು ಹುಡುಗರು ತಂಡದ ಸಂಸ್ಥಾಪಕ ವಿನೋದ್ ಕರ್ತವ್ಯ ತಿಳಿಸಿದ್ದಾರೆ.

ಈಗಾಗಲೇ ನಗರದ ಯಲಹಂಕದಲ್ಲಿನ ಸುಮಾರು 30 ಮರಗಳಿಗೆ ‘ಕೂಲ್ ಟ್ರೀ’ ಅಭಿಯಾನದ ಮೂಲಕ ಮರಗಳ ತೊಗಟೆಯನ್ನು ಸಂರಕ್ಷಿಸಲಾಗಿದೆ. ಇಂದು ಇಂದಿರಾನಗರದಲ್ಲಿ 72 ಮರಗಳಿಗೆ ಮಿಶ್ರಣವನ್ನು ಹಚ್ಚಲಾಗಿದೆ. ಮುಂದಿನ ಭಾನುವಾರಗಳಂದು ಶಾಂತಿ ನಗರ, ಕೆ. ಆರ್ ಪುರಂ ವಾರ್ಡ್ಗಳಲ್ಲಿನ ಮರಗಳ ತೊಗಟೆಗೆ ಸುರಕ್ಷಾ ಮಿಶ್ರಣವನ್ನು ಹಚ್ಚಲಾಗುತ್ತದೆ. ಪ್ರತಿ ಭಾನುವಾರ ಹಮ್ಮಿಕೊಳ್ಳುವ ಈ ಅಭಿಯಾನದಲ್ಲಿ ಬೆಂಗಳೂರು ಹುಡುಗರು ತಂಡದೊಂದಿಗೆ ಸ್ಥಳೀಯ ಎನ್ಜಿಒ ಹಾಗೂ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಸಲುವಾಗಿ ಮಕ್ಕಳನ್ನು ಒಳಗೊಂಡಂತೆ ಈ ಅಭಿಯಾನವನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ದೇಶದಲ್ಲಿ ಬಿರು ಬೇಸಿಗೆ; ಶಾಖದ ಅಲೆಯಿಂದ ಸುರಕ್ಷಿತವಾಗಿರಲು ಈ ಸಲಹೆಗಳನ್ನು ಪಾಲಿಸಿ - Heatwave Prediction In India