ಬೆಂಗಳೂರು: ಚಿತ್ರದುರ್ಗ ನಿವಾಸಿ ರೇಣುಕಾಸ್ವಾಮಿ ಹತ್ಯೆಯನ್ನು ಮರೆಮಾಚಲು ಸಹ ಆರೋಪಿಗಳಿಗೆ ನೀಡಲಾಗಿದ್ದ 70 ಲಕ್ಷ ರೂಪಾಯಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಜಪ್ತಿ ಮಾಡಿಕೊಂಡಿದ್ದರು. ದೊಡ್ಡ ಮಟ್ಟದಲ್ಲಿ ನಗದು ಪತ್ತೆಯಾಗಿದ್ದರಿಂದ ಐಟಿಗೆ ಪತ್ರ ಬರೆದಿದ್ದಾರೆ. ಹಣದ ಮೂಲದ ಬಗ್ಗೆ ತನಿಖೆ ನಡೆಸುವಂತೆ ಕೇಳಿಕೊಂಡಿದ್ದಾರೆ.
ಜೂನ್ 8ರಂದು ರೇಣುಕಾಸ್ವಾಮಿ ಹತ್ಯೆ ಬಳಿಕ ರಾಘವೇಂದ್ರ ಅಂಡ್ ಟೀಮ್ನೊಂದಿಗೆ ದರ್ಶನ್ 30 ಲಕ್ಷ ರೂಪಾಯಿಯ ಡೀಲ್ ಮಾಡಿಕೊಂಡಿದ್ದರು. ನಂತರ ಹೆಚ್ಚುವರಿಯಾಗಿ ಪರಿಚಯಸ್ಥ ಮೋಹನ್ ರಾಜ್ ಎಂಬುವರಿಂದ 40 ಲಕ್ಷ ರೂ. ಪಡೆದಿದ್ದರು. ಹೀಗೆ, ಪ್ರಕರಣವನ್ನು ಮರೆಮಾಚಲು ಯತ್ನಿಸಿದ್ದರು ಎಂಬುದು ಪೊಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದರು. ಆರೋಪಿಗಳಿಂದ 70 ಲಕ್ಷ ರೂ. ಹಣವನ್ನು ಸೀಜ್ ಮಾಡಿಕೊಂಡ ಬಳಿಕ ಇದೀಗ ಐಟಿ ಇಲಾಖೆಗೆ ಪತ್ರ ಬರೆದು ಹಣದ ಮೂಲದ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಇದರಿಂದ ನಟ ದರ್ಶನ್ಗೆ ಐಟಿ ಉರುಳು ಸುತ್ತಿಕೊಳ್ಳುವ ಸಾಧ್ಯತೆ ಇದೆ.
ಕಾನೂನು ಪ್ರಕಾರ, ಓರ್ವ ವ್ಯಕ್ತಿ 10 ಲಕ್ಷ ರೂ.ಗಿಂತ ಹೆಚ್ಚು ನಗದನ್ನು ತಮ್ಮ ಬಳಿ ಇಟ್ಟುಕೊಳ್ಳುವಂತಿಲ್ಲ. 10 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟುಕೊಂಡರೆ ಅದಕ್ಕೆ ಸೂಕ್ತ ಪುರಾವೆ ಒದಗಿಸಬೇಕು. ದಾಖಲಾತಿ ನೀಡದಿದ್ದರೆ ಅಥವಾ ಹಣದ ಮೂಲದ ಬಗ್ಗೆ ಸ್ಪಷ್ಟವಾಗಿ ತಿಳಿಸದಿದ್ದರೆ ತೆರಿಗೆ ನಿಯಮ ಉಲ್ಲಂಘನೆಯಾಗುತ್ತದೆ. ಆದಾಯ ತೆರಿಗೆ ಕಾಯ್ದೆಯಡಿ ನಿಗದಿತ ದಂಡ ಪಾವತಿಸಬೇಕಾಗುತ್ತದೆ. ಆರೋಪಿಗಳಿಗೆ ದರ್ಶನ್ ನೀಡಿದ್ದ 30 ಲಕ್ಷ ರೂ. ಹಾಗೂ ಮೋಹನ್ ರಾಜ್ ಎಂಬಾತನಿಂದ ದರ್ಶನ್ ಪಡೆದಿದ್ದ 40 ಲಕ್ಷ ರೂ. ಹಣದ ನೈಜ ಮೂಲ ತೋರಿಸದಿದ್ದರೆ ತೆರಿಗೆ ಜೊತೆಗೆ ದಂಡ ಕಟ್ಟಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.