ನವದೆಹಲಿ: ಉತ್ತರ ಭಾರತ ರಾಜ್ಯದ ಜನರು ಸೋಡಿಯಂ, ಪೊಟ್ಯಾಶಿಯಂ, ರಂಜಕ ಮತ್ತು ಪ್ರೋಟೀನ್ಗಳಂತಹ ಅಗತ್ಯ ಪೋಷಕಾಂಶಗಳನ್ನು ಶಿಫಾರಸು ಮಾಡಿರುವುದಕ್ಕಿಂತ ಹೆಚ್ಚು ಅಥವಾ ಕಡಿಮೆ ಮಟ್ಟದಲ್ಲಿ ಸೇವನೆ ಮಾಡುತ್ತಾರೆ ಎಂಬುದು ಅಧ್ಯಯನದಲ್ಲಿ ತಿಳಿದು ಬಂದಿದೆ.
ಈ ಪೋಷಕಾಂಶಗಳು ಅಧಿಕ ರಕ್ತದೊತ್ತಡ, ಹೃದಯರಕ್ತನಾಳದ ಕಾಯಿಲೆ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬೆಳವಣಿಗೆಯಲ್ಲಿ ಪ್ರಮುಖವಾಗಿದ್ದು, ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರೋಗ್ಯ ಸವಾಲುಗಳನ್ನು ಮೂಡಿಸುತ್ತದೆ ಎಂದು ಚಂಡೀಗಢದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಸ್ನಾತಕೋತ್ತರ ಸಂಸ್ಥೆ ಸಹಯೋಗದಲ್ಲಿ ದಿ ಜಾರ್ಜ್ ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ ಇಂಡಿಯಾದ ಸಂಶೋಧಕರು ಈ ಅಧ್ಯಯನ ಮಾಡಿದ್ದಾರೆ.
ಈ ಅಧ್ಯಯನವನ್ನು ಜರ್ನಲ್ ಫ್ರಾಂಟಿಯರ್ಸ್ ಇನ್ ನ್ಯೂಟ್ರಿಷನ್ ನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನದಲ್ಲಿ ಉತ್ತರ ಭಾರತದ ರಾಜ್ಯಗಳ ಜನರು ಶಿಫಾರಸ್ಸಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಮತ್ತು ರಂಜಕವನ್ನು ಸೇವಿಸಿದ್ದರೆ, ಪ್ರೋಟಿನ್ ಮತ್ತು ಪೊಟಾಶಿಯಂ ಬಳಕೆ ಕಡಿಮೆ ಇದೆ.
ಕಳಪೆ ಪೌಷ್ಟಿಕ ಆಹಾರವು ಸಾಂಕ್ರಾಮಿಕವಲ್ಲದ ಕಾಯಿಲೆಗಳ ಹೆಚ್ಚಳದಲ್ಲಿ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಇದು ಸಾರ್ವಜನಿಕ ಆರೋಗ್ಯ ಕಾಳಜಿ ವಿಚಾರವಾಗಿದೆ. ಜನರು ವಿಭಿನ್ನ ಬಗೆಯ ಆಹಾರವನ್ನು ಸೇವಿಸುವ ಹಿನ್ನೆಲೆ ಅವರು ಯಾವ ಪೋಷಕಾಂಶವನ್ನು ಸೇವಿಸುತ್ತಾರೆ ಎಂದು ತಿಳಿಯುವುದು ಅಗತ್ಯ. ಯಾವ ಪೋಷಕಾಂಶಗಳು ರೋಗಗಳನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ ಎಂಬ ಅರಿವು ಅಗತ್ಯ ಎಂದು ಜಾರ್ಜ್ ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ ಇಂಡಿಯಾದ ಕಾರ್ಯ ನಿರ್ವಾಹಕ ನಿರ್ದೇಶಕ ವಿವೇಕಾನಂದ ಝಾ ತಿಳಿಸಿದ್ದಾರೆ.
ಹೆಚ್ಚಿನ ಉಪ್ಪು ಸೇವನೆ ಮತ್ತು ಕಡಿಮೆ ಪೊಟ್ಯಾಶಿಯಂ ಸೇವನೆ ಕುರಿತು ಮಧ್ಯಸ್ಥಿಕೆಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಈ ಅಧ್ಯಯನಕ್ಕೆ 400 ಮಂದಿ ವಯಸ್ಕರನ್ನು ಬಳಕೆ ಮಾಡಲಾಗಿದೆ. ಈ ಭಾಗಿದಾರರಲ್ಲಿ ಕೆಲವು ಆರೋಗ್ಯವಂತರಾಗಿದ್ದು, ಮತ್ತೆ ಕೆಲವರು ಆರಂಭಿಕ ಹಂತದ ಮೂತ್ರಪಿಂಡ ಕಾಯಿಲೆ ಹೊಂದಿದ್ದರು. ಭಾಗಿದಾರರ ಪೋಷಕಾಂಶಗಳ ಸೇವನೆಯನ್ನು ನಿರ್ಣಯಿಸಲು ತಂಡ 24 ಗಂಟೆಗಳ ಮೂತ್ರ ವಿಸರ್ಜನೆಯ ವಿಶ್ಲೇಷಣೆ ತಂತ್ರವನ್ನು ಬಳಸಿಕೊಂಡಿದೆ. ಮಹಿಳೆಯರಿಗೆ ಹೋಲಿಸಿದರೆ ಪುರುಷರು ಹೆಚ್ಚಿನ ಪೋಷಕಾಂಶಗಳ ಸೇವನೆ ಮಾಡುತ್ತಾರೆ ಎಂಬುದು ಅಧ್ಯಯನದ ಫಲಿತಾಂಶದಲ್ಲಿ ಕಂಡು ಬಂದಿದೆ.
ಸಾಂಕ್ರಾಮಿಕವಲ್ಲದ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಆಹಾರದಲ್ಲಿನ ಬದಲಾವಣೆಗಳನ್ನು ಮಾಡುವುದು ಅಗತ್ಯವಾಗಿದೆ. ಆಹಾರದ ಮೇಲೆ ಲೇಬಲ್, ಸಂಸ್ಕರಿತ ಆಹಾರದಲ್ಲಿ ಉಪ್ಪು ಕಡಿಮೆ ಮಾಡುವುದು. ಪೊಟ್ಯಾಶಿಯಂ ಸಮೃದ್ಧ ಹಣ್ಣು ತರಕಾರಿ ಸೇವಿಸಲು ಉತ್ತೇಜಿಸುವುದು ಅಗತ್ಯ. ಈ ಮೂಲಕ ದೇಶದಲ್ಲಿ ಹೆಚ್ಚುತ್ತಿರುವ ಎನ್ಸಿಡಿ ತಡೆಯಬಹುದು ಎಂದಿದ್ದಾರೆ ಸಂಶೋಧಕರು. (ಐಎಎನ್ಎಸ್)
ಇದನ್ನೂ ಓದಿ: ಆತ್ಮ ವಿಶ್ವಾಸ ವೃದ್ಧಿಸಲು, ಮೆದುಳು ಚುರುಕಾಗಿಸಲು ಈ ಆಹಾರ ಸೇವಿಸಿ