ಕನ್ನಡ ಚಿತ್ರರಂಗದ ಕರಾಟೆ ಕಿಂಗ್ ಆಗಿ ಬೆಳ್ಳಿ ತೆರೆ ಮೇಲೆ ವಿಜೃಂಭಿಸಿದ್ದ ನಟ ಶಂಕರ್ ನಾಗ್ ನಮ್ಮೊಂದಿಗಿದ್ದಿದ್ದರೆ ಇಂದು ಅಭಿಮಾನಿಗಳೊಂದಿಗೆ 70ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಕರ್ನಾಟಕದಲ್ಲಿ ಶಂಕರ್ ನಾಗ್ ಜನ್ಮದಿನ ಚಾಲಕರ ದಿನಾಚರಣೆ ಎಂದೇ ಪ್ರಸಿದ್ಧಿ. ಬಸವೇಶ್ವರ ನಗರದ ಸುಮಾರು 200ಕ್ಕೂ ಹೆಚ್ಚು ಆಟೋ ಚಾಲಕರು 'ಮರ್ಯಾದೆ ಪ್ರಶ್ನೆ' ಚಿತ್ರತಂಡದೊಂದಿಗೆ ಚಾಲಕರ ದಿನವನ್ನು ವಿಭಿನ್ನವಾಗಿ ಆಚರಿಸಿದ್ದಾರೆ.
ಮರ್ಯಾದೆ ಪ್ರಶ್ನೆ ಚಿತ್ರತಂಡದ ಜೊತೆಗೆ ನಮ್ಮ ಯಾತ್ರಿ ಆ್ಯಪ್ನ ರಾಜೀವ್ ಕೂಡಾ ಭಾಗವಹಿಸಿದ್ದರು. ನಮ್ಮ ಯಾತ್ರಿ ಕನ್ನಡದ ಚಾಲಕರಿಗೆ ಸಹಾಯ ಮಾಡಲು ಶುರುವಾದ ಆ್ಯಪ್. ಕನ್ನಡಿಗರ ಜೊತೆ ನಿಲ್ಲುವುದು ನಮ್ಮಉದ್ದೇಶ. ಅದೇ ಉದ್ದೇಶದಿಂದ ಚಾಲಕರ ಪಾತ್ರ ಇರುವ 'ಮರ್ಯಾದೆ ಪ್ರಶ್ನೆ' ಸಿನಿಮಾ ತಂಡದ ಜತೆ ನಿಂತಿದ್ದೇವೆ ಎಂದು ರಾಜೀವ್ ತಿಳಿಸಿದರು.

ಆರ್ ಜೆ ಪ್ರದೀಪಾ ಸಕ್ಕತ್ ಸ್ಟುಡಿಯೋವನ್ನು 2017ರಲ್ಲಿ ಶಂಕರ್ ನಾಗ್ ಅವರ ಜನ್ಮದಿನದಂದು ಆರಂಭಿಸಿದರು. ಎಂಟು ವರ್ಷಗಳ ಹಿಂದೆ ಶುರುವಾದ ಸಂಸ್ಥೆ ಇಂದು ತಮ್ಮದೇ ಒಂದು ಸಿನಿಮಾ ನಿರ್ಮಿಸುವ ಮಟ್ಟಕ್ಕೆ ಬೆಳೆದಿದೆ. ರಿಯಲಿಸ್ಟಿಕ್ ರಿವೆಂಜ್ ಡ್ರಾಮಾ 'ಮರ್ಯಾದೆ ಪ್ರಶ್ನೆ' ಸಕ್ಕತ್ ಸ್ಟುಡಿಯೋದ ಮೊದಲ ಚಿತ್ರ.

ಚಿತ್ರದಲ್ಲಿ 'ಡ್ರೈವರ್' ಪಾತ್ರ ನಿರ್ವಹಿಸಿರುವ ಪೂರ್ಣಚಂದ್ರ ಮೈಸೂರು ಅವರಿಗೆ ಖಾಕಿ ಕೋಟ್ ಹಾಕುವ ಮೂಲಕ ಆಟೋ ಚಾಲಕರು ಸಾಂಕೇತಿಕವಾಗಿ ಪೂರ್ಣ ಅವರನ್ನು ಚಾಲಕರ ಬಳಗಕ್ಕೆ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಮರ್ಯಾದೆ ಪ್ರಶ್ನೆ ಚಿತ್ರದ ಆಟೋ ಸ್ಟಿಕ್ಕರ್ಸ್ ಹಾಕುವುದನ್ನು ಶುರು ಮಾಡಲಾಯಿತು.

ಪೂರ್ಣಚಂದ್ರ ಮೈಸೂರು ಮಾತನಾಡಿ, ''ಈ ಸಿನಿಮಾದಲ್ಲಿ ನಾನು ಚಾಲಕನ ಪಾತ್ರ ನಿರ್ವಹಿಸಿದ್ದೇನೆ. ಚಾಲಕರ ಕಷ್ಟಸುಖಗಳನ್ನು ತೋರಿಸುವ ಚಂದದ ಪಾತ್ರ. ಮಿಡಲ್ ಕ್ಲಾಸ್ ಜೀವನದ ಕತೆ ಹೊಂದಿರುವ ಚಿತ್ರ. ಚಾಲಕರು ಸೇರಿದಂತೆ ಎಲ್ಲ ದುಡಿಯುವ ವರ್ಗಕ್ಕೂ ಈ ಸಿನಿಮಾ ಇಷ್ಟವಾಗುವ ನಂಬಿಕೆಯಿದೆ" ಎಂದರು.
ಮರ್ಯಾದೆ ಪ್ರಶ್ನೆ ಚಿತ್ರದ ತಾರಾಗಣದಲ್ಲಿ ತೇಜು ಬೆಳವಾಡಿ, ಸುನಿಲ್ ರಾವ್, ಪೂರ್ಣಚಂದ್ರ ಮೈಸೂರು, ರಾಕೇಶ್ ಅಡಿಗ, ಶೈನ್ ಶೆಟ್ಟಿ, ಪ್ರಭು ಮುಂಡ್ಕುರ್ ಇದ್ದಾರೆ. ಉಳಿದಂತೆ ಹಿರಿಯ ನಟರಾದ ನಾಗಾಭರಣ, ಪ್ರಕಾಶ್ ತುಂಬಿನಾಡು, ನಂದಗೋಪಾಲ್, ನಾಗೇಂದ್ರ ಷಾ, ರೇಖಾ ಕುಂಡಲಿಗಿ, ಶ್ರವಣ್, ಹರಿಹರನ್ ಮುಂತಾದವರಿದ್ದಾರೆ.

ಇದನ್ನೂ ಓದಿ: 'ಗೇಮ್ ಚೇಂಜರ್' ಟೀಸರ್ ರಿಲೀಸ್: 'ಆರ್ಆರ್ಆರ್' ಬಳಿಕ ತೆರೆಮೇಲೆ ಅಬ್ಬರಿಸಲು ರಾಮ್ ಚರಣ್ ರೆಡಿ
ಚಿತ್ರದಲ್ಲಿ ಐದು ಹಾಡುಗಳಿದ್ದು, ಈಗಾಗಲೇ ಎರಡು ಹಾಡುಗಳು ಬಿಡುಗಡೆಯಾಗಿವೆ. ಎಲ್ಲ ಹಾಡುಗಳಿಗೆ ಅರ್ಜುನ್ ರಾಮು ರಾಗ ಸಂಯೋಜಿಸಿದ್ದಾರೆ. ಪ್ರಮೋದ್ ಮರವಂತೆ, ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ರಚಿಸಿದ್ದಾರೆ. ಸಕುಟುಂಬ ಸಮೇತ, ಗೌಳಿ ಮತ್ತು ಚಾರ್ಲಿ ಸಿನಿಮಾಗೆ ಕೆಲಸ ಮಾಡಿರುವ ಸಂದೀಪ್ ವೆಲ್ಲುರಿ ಈ ಸಿನಿಮಾಗೆ ಛಾಯಾಗ್ರಾಹಕರಾಗಿದ್ದಾರೆ. ಇದೇ ತಿಂಗಳ 12ಕ್ಕೆ ಟ್ರೇಲರ್ ಬಿಡುಗಡೆಗೊಳಿಸಲು ಚಿತ್ರತಂಡ ಸಜ್ಜಾಗಿದೆ.
ಇದನ್ನೂ ಓದಿ: 12 ವರ್ಷಗಳಲ್ಲಿ 80 ಸಿನಿಮಾ: ಸ್ಯಾಂಡಲ್ವುಡ್ ಉನ್ನತಿಯ ಕನಸು ಕಂಡಿದ್ದ ಶಂಕರ್ ನಾಗ್ ಜನ್ಮದಿನ
ಈಗಾಗಲೇ ಲೂಸ್ ಕನೆಕ್ಷನ್, ಹನಿಮೂನ್ ವೆಬ್ ಸೀರೀಸ್ಗಳನ್ನು ನಿರ್ಮಿಸಿ ಸದ್ದು ಮಾಡಿದ್ದ ಆರ್ಜೆ ಪ್ರದೀಪಾ ಅವರ ಸಕ್ಕತ್ ಸ್ಟೂಡಿಯೋ ಈ ಚಿತ್ರವನ್ನು ನಿರ್ಮಿಸಿದೆ. ಪ್ರದೀಪಾ ಅವರೇ ಬರೆದ ಕಥೆಗೆ ನಾಗರಾಜ ಸೋಮಯಾಜಿ ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಸಿನಿಮಾ ನವೆಂಬರ್ 22ರಂದು ಬಿಡುಗಡೆಯಾಗಲಿದೆ.