ದಕ್ಷಿಣ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ಆರ್ಮುಗ ರವಿಶಂಕರ್ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ಧರಿಸಿರುವ ಅವರು 'ಸುಬ್ರಹ್ಮಣ್ಯ' ಸಿನಿಮಾ ಮೂಲಕ ಮಗ ಅಧ್ವೈನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಕಳೆದ ಆಯುಧ ಪೂಜೆಗೆ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಅಲ್ಲಿಂದ ಇಲ್ಲಿವರೆಗೂ ಸಿನಿಮಾದ ಬಗ್ಗೆ ಸಣ್ಣ ಅಪ್ಡೇಟ್ ಕೂಡ ಸಿಕ್ಕಿರಲಿಲ್ಲ. ಈಗ ಚಿತ್ರತಂಡ ಹೊಸ ಸಮಾಚಾರ ರಿವೀಲ್ ಮಾಡಿದೆ.
ಸುಬ್ರಹ್ಮಣ್ಯ ಸಿನಿಮಾದ ಶೇ 60 ಭಾಗದಷ್ಟು ಶೂಟಿಂಗ್ ಮುಕ್ತಾಯಗೊಂಡಿದೆ. ಸದ್ಯ ಪೋಸ್ಟ್-ಪ್ರೊಡಕ್ಷನ್ ಕೆಲಸ ಮುಂಬೈನ ಶಾರುಖ್ ಒಡೆತನದ ರೆಡ್ ಚಿಲ್ಲೀಸ್ ಸ್ಟುಡಿಯೋದಲ್ಲಿ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ಮುಂಬೈ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನ ಹಲವಾರು ಪ್ರತಿಷ್ಠಿತ ಸ್ಟುಡಿಯೋಗಳಲ್ಲಿ VFX ಮತ್ತು CGI ಕೆಲಸಗಳು ಸಾಗುತ್ತಿವೆ. ಪ್ರೀಮಿಯಂ ಲಾರ್ಜ್ ಫಾರ್ಮ್ಯಾಟ್ ಮತ್ತು ಐಮ್ಯಾಕ್ಸ್ ಥಿಯೇಟರ್ಗಳಲ್ಲಿ ಅದ್ಭುತ ಫೀಲ್ ಕೊಡುವ ರೀತಿಯಲ್ಲಿ ಸುಬ್ರಹ್ಮಣ್ಯ ಸಿನಿಮಾವನ್ನು ಕಟ್ಟಿಕೊಡಲಾಗುತ್ತಿದೆ.
![pre look poster](https://etvbharatimages.akamaized.net/etvbharat/prod-images/01-09-2024/22347677_thumbnailmeg.jpg)
ಫಸ್ಟ್ ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಶೀಘ್ರದಲ್ಲೇ ಅನಾವರಣಗೊಳಿಸಲು ಮುಂದಾಗಿದೆ. ಈ ಪೋಸ್ಟರ್ ಮೂಲಕ ಸುಬ್ರಹ್ಮಣ್ಯನ ಪ್ರಪಂಚವನ್ನು ಚಿತ್ರತಂಡ ಪರಿಚಯಸಲು ಹೊರಟಿದೆ. ಸೋಷಿಯೋ ಫ್ಯಾಂಟಸಿ ಅಡ್ವೆಂಚರ್ಸ್ ಸಿನಿಮಾವನ್ನು ಎಸ್ಜಿ ಮೂವೀ ಮೇಕರ್ಸ್ ಬ್ಯಾನರ್ನಡಿ ತಿರುಮಲ ರೆಡ್ಡಿ ಮತ್ತು ಅನಿಲ್ ಕಡಿಯಾಲ ನಿರ್ಮಿಸುತ್ತಿದ್ದಾರೆ. ಪ್ರವೀಣಾ ಕಡಿಯಾಲ ಹಾಗೂ ರಮಾ ಲಕ್ಷ್ಮೀ ಪ್ರಸ್ತುತಪಡಿಸುತ್ತಿದ್ದಾರೆ. ಸಲಾರ್ ಮತ್ತು ಕೆಜಿಎಫ್ ಸರಣಿ ಸಿನಿಮಾಗಳಿಗೆ ಸಂಗೀತ ನೀಡಿರುವ ರವಿ ಬಸ್ರೂರ್ ಈ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಸುಬ್ರಹ್ಮಣ್ಯ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಗೂ ಮುನ್ನ ಚಿತ್ರತಂಡ ಪ್ರೀ ಲುಕ್ ಅನಾವರಣ ಮಾಡಿದೆ. ಪಾಳು ಬಿದ್ದಿರುವ ದೇಗುಲದ ಮುಂದೆ ನಾಯಕ ಅದ್ವೈ ಕೈಯಲ್ಲಿ ಪಂಜು ಹಿಡಿದು ಬ್ಯಾಕ್ ಪೋಸ್ ಕೊಟ್ಟಿರುವ ಪ್ರೀ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಪ್ರೀ ಲುಕ್ ಪೋಸ್ಟರ್ ಇದೀಗ ಫಸ್ಟ್ ಲುಕ್ ಪೋಸ್ಟರ್ ಮೇಲೆ ನಿರೀಕ್ಷೆ ಹೆಚ್ಚಿಸಿದೆ.
ವಿಘ್ನೇಶ್ ರಾಜ್ ಕ್ಯಾಮೆರಾ ಹಿಡಿದಿದ್ದು, ವಿಜಯ್ ಎಂ.ಕುಮಾರ್ ಸಂಕಲನ ಸಿನಿಮಾಕ್ಕಿದೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸುಬ್ರಹ್ಮಣ್ಯ ಸಿನಿಮಾ ತಯಾರಾಗುತ್ತಿದೆ. 20 ವರ್ಷಗಳ ಹಿಂದೆ ಆ್ಯಕ್ಷನ್ ಕ್ವೀನ್ ಮಾಲಾಶ್ರೀಗೆ ಮೊದಲ ಬಾರಿಗೆ ಪಿ.ರವಿಶಂಕರ್ ಆ್ಯಕ್ಷನ್ ಕಟ್ ಹೇಳಿದ್ದರು. ದುರ್ಗಿ ಸಿನಿಮಾ ಡೈರೆಕ್ಷನ್ ಮಾಡುವ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದಿದ್ದರು. ಅವತ್ತಿಗೆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ ತೆಲುಗಿಗೆ ರಿಮೇಕ್ ಕೂಡ ಆಗಿತ್ತು. ಇದೀಗ 20 ವರ್ಷದ ಬಳಿಕ ಮಗ ಅಧ್ವೈಗಾಗಿ ಅವರು ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.