ಕನ್ನಡ ಚಿತ್ರರಂಗದ ಕನಸುಗಾರ, ಶೋ ಮ್ಯಾನ್, ಕ್ರೇಜಿಸ್ಟಾರ್, ರಣಧೀರ, ರವಿಮಾಮ ಹೀಗೆ ಹಲವು ಬಿರುದಾವಳಿ ಹೊಂದಿರುವ ಕನ್ನಡದ ನಟ ವಿ.ರವಿಚಂದ್ರನ್. ಕನ್ನಡ ಸಿನಿಮಾರಂಗವನ್ನು ಶ್ರೀಮಂತಗೊಳಿಸಿದ ಹಾಗು 'ಪ್ರೇಮಲೋಕದ ಹೆಡ್ ಮಾಸ್ಟರ್' ಎಂದೇ ಹೇಳಲಾಗುವ ಕ್ರೇಜಿಸ್ಟಾರ್ಗೆ ಇಂದು 63ನೇ ಹುಟ್ಟುಹಬ್ಬದ ಸಂಭ್ರಮ. ಈ ಖುಷಿಯ ಸಂದರ್ಭದಲ್ಲಿ ಪ್ರೇಮಲೋಕ-2 ಬಗ್ಗೆ ಘೋಷಣೆಯ ಸುದ್ದಿ ಹರಿದಾಡಿತ್ತು. ಆದರೆ ಸದ್ಯ ಅಂಥ ಸೂಚನೆಗಳೇನೂ ಕಾಣುತ್ತಿಲ್ಲ.

ಕನ್ನಡ ಸಿನಿಮಾರಂಗದಲ್ಲಿ ಆರು ದಶಕಗಳನ್ನು ಪೂರೈಸಿರುವ ರವಿಚಂದ್ರನ್ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸುತ್ತಿದ್ದ ನಿರ್ಮಾಪಕ ವೀರಾಸ್ವಾಮಿ ಅವರ ಪುತ್ರ. 1971ರಲ್ಲಿ ಕುಲ ಗೌರವ ಚಿತ್ರದಲ್ಲಿ ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ರವಿಚಂದ್ರನ್ ಪದಾರ್ಪಣೆ ಮಾಡಿದ್ದರು.
ಮೊದಲ ಹೆಸರು ಈಶ್ವರ: ಪ್ರೇಮಲೋಕ, ರಣಧೀರ, ಅಂಜದ ಗಂಡು, ರಾಮಾಚಾರಿ, ಅಣ್ಣಯ್ಯ ಹೀಗೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ಮಾಡಿರುವ ರವಿಚಂದ್ರನ್ಗೆ ಈಶ್ವರ ಎಂಬ ಮತ್ತೊಂದು ಹೆಸರಿದೆ. ಇದು ಅವರ ತಂದೆ ಹಾಗೂ ತಾಯಿ ಜಾತಕದ ಪ್ರಕಾರ ಇಟ್ಟ ಹೆಸರಂತೆ. ಮನೆಯಲ್ಲಿ ಇವರ ತಂದೆ-ತಾಯಿ ಈಶ್ವರ ಎಂದೇ ಕರೆಯುತ್ತಿದ್ದರಂತೆ.

ಈಶ್ವರ ಅಚ್ಚುಮೆಚ್ಚಿನ ದೇವರು: ಇನ್ನು ರವಿಚಂದ್ರನ್ಗೆ ಈಶ್ವರ ದೇವರು ಅಚ್ಚುಮೆಚ್ಚು. ಏಕಾಂಗಿ ಸಿನಿಮಾ ಮಾಡಿ ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸುತ್ತಾರೆ. ಆ ಸಮಯಲ್ಲಿ ಸಿನಿಮಾ ಶೂಟಿಂಗ್ಗೆ ಹೋದಾಗ ಈಶ್ವರ ಪ್ರತಿಮೆಯನ್ನು ಮನೆಗೆ ತೆಗೆದುಕೊಂಡು ಬರುತ್ತಾರೆ. ಆಗ ಮಲ್ಲ ಚಿತ್ರ ಸೂಪರ್ ಹಿಟ್ ಆಗುತ್ತದಂತೆ. ಅಂದಿನಿಂದ ಕ್ರೇಜಿಸ್ಟಾರ್ ಈಶ್ವರನ ಪರಮ ಭಕ್ತರು.
ತಾಯಿ ಕೈಯಿಂದ ನೀರು ಕುಡಿದು ಹೋದರೆ ಕೆಲಸ ಸಕ್ಸಸ್: ಸಿನಿಮಾ ಶೂಟಿಂಗ್ ಅಥವಾ ಯಾವುದೇ ಕೆಲಸಕ್ಕೆ ಹೋಗುವುದಕ್ಕೆ ಮುನ್ನ ತಾಯಿ ಪಟ್ಟಮ್ಮಲ್ ಅವರ ಕೈಯಿಂದ ನೀರು ಕುಡಿದು ಹೋಗುವುದು ರವಿಚಂದ್ರನ್ ಸಕ್ಸಸ್ ಸಿಕ್ರೇಟ್ ಅಂತೆ.

ಪರಭಾಷಾ ನಟಿಯರನ್ನು ಕನ್ನಡಕ್ಕೆ ಕರೆತಂದರು: ಅಂದಿನ ಕಾಲದ ಬಹುಬೇಡಿಕೆಯ ನಟಿಮಣಿಗಳಾದ ಜೂಹಿ ಚಾವ್ಲಾ, ಖುಷ್ಬು, ಮೂನ್ ಮೂನ್ ಸೇನ್, ಮಧುಬಾಲ, ಮೀನಾ, ರೋಜಾ, ಭಾನುಪ್ರಿಯ, ಶಿಲ್ಪಾಶೆಟ್ಟಿ ಹೀಗೆ ಹಲವು ಮಂದಿ ಹೆಸರಾಂತ ಪರಭಾಷಾ ನಾಯಕಿಯರನ್ನು ಕನ್ನಡಕ್ಕೆ ಕರೆತಂದ ಹೆಗ್ಗಳಿಕೆಯೂ ರವಿಚಂದ್ರನ್ ಅವರಿಗೆ ಸಲ್ಲುತ್ತದೆ.
ಪ್ರೇಮಲೋಕ ಸಿನಿಮಾ ಬಂದು 37 ವರ್ಷಗಳಾಗುತ್ತಿವೆ. ಆದರೆ ಇಂದಿಗೂ ಸಿನಿಮಾ ಪ್ರೇಮಿಗಳು ರವಿಚಂದ್ರನ್ ಅವರನ್ನೇ ಪ್ರೇಮಲೋಕದ ಹೀರೋ ಎಂದೇ ಗುರುತಿಸುತ್ತಾರೆ. ಆ ಕಾಲದಲ್ಲಿ ರವಿಚಂದ್ರನ್ 60 ಲಕ್ಷ ರೂ. ಖರ್ಚು ಮಾಡಿ ಈ ಸಿನಿಮಾ ಮಾಡಿದ್ದರು. ಆಗ ತಂದೆ ವೀರಸ್ವಾಮಿ, ಇಷ್ಟು ಲಕ್ಷ ಖರ್ಚು ಮಾಡಿ ಸಿನಿಮಾ ಮಾಡಬೇಡ ಎಂದಿದ್ದರಂತೆ. ಆದರೂ ಪ್ರೇಮಲೋಕದಿಂದ ಯಶಸ್ವಿಯಾಗುತ್ತಾರೆ. ಈ ಸಿನಿಮಾ ಆ ಕಾಲದಲ್ಲೇ ಕೋಟಿ ಕೋಟಿ ಹಣ ಗಳಿಸಿತ್ತು ಎಂಬುದು ಗಮನಾರ್ಹ.

ಕಡಿಮೆ ಸಮಯದಲ್ಲಿ ನಟ, ನಿರ್ಮಾಪಕ ಹಾಗೂ ನಿರ್ದೇಶಕನಾಗಿ ತನ್ನ ಪ್ರತಿಭೆಯನ್ನು ನಿರೂಪಿಸಿದ ಕ್ರೇಜಿಸ್ಟಾರ್, 1999ರಲ್ಲಿ ಬಂದ 'ನಾನು ನನ್ನ ಹೆಂಡ್ತಿರು' ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗುತ್ತಾರೆ. ಓ ನನ್ನ ನಲ್ಲೆ, ಏಕಾಂಗಿ, ಮಲ್ಲ, ಹಠವಾದಿ, ಅಪೂರ್ವ ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳಿಗೆ ಇವರ ಸಂಗೀತವಿದೆ. ಭಾರತೀಯ ಚಿತ್ರರಂಗದಲ್ಲಿ ಒಬ್ಬ ಸ್ಟಾರ್ ನಟ ಹಾಗೂ ಒಬ್ಬ ಸ್ಟಾರ್ ಸಂಗೀತ ನಿರ್ದೇಶಕ ಒಟ್ಟಿಗೆ ಕೆಲಸ ಮಾಡಿ, 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸೂಪರ್ ಹಿಟ್ ಹಾಡುಗಳನ್ನು ನೀಡುತ್ತಾರೆ. ಈ ಜೋಡಿಯೇ ರವಿಚಂದ್ರನ್ ಹಾಗೂ ಸಂಗೀತ ನಿರ್ದೇಶಕ ಹಂಸಲೇಖಾ.

ರವಿಚಂದ್ರನ್ ಸಿನಿಮಾದಿಂದ ದುಡಿದ ಹಣದಿಂದ ಯಾವುದೇ ಜಮೀನು, ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟುವ ಕೆಲಸ ಮಾಡುತ್ತಿರಲಿಲ್ಲ. ಆ ಹಣವನ್ನು ಪೂರ್ತಿ ಸಿನಿಮಾಕ್ಕೆ ಹಾಕುತ್ತಿದ್ದರಂತೆ. ಇದಕ್ಕೆ ಕಾರಣ, ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎಂಬ ಮಹದಾಸೆ.
ಇದನ್ನೂ ಓದಿ: 'ರಾಜಕೀಯದಲ್ಲಿ ನಾನಿರುವವರೆಗೆ ಅಭಿಷೇಕ್ ಬರಲ್ಲ, ಮುಂದೆ ಏನಾಗುತ್ತೆ ನೋಡೋಣ': ಸುಮಲತಾ ಅಂಬರೀಶ್ - Sumalatha Ambareesh