ನೆಲಮಂಗಲ(ಬೆಂ.ಗ್ರಾಮಾಂತರ): ವರನಟಿ ಲೀಲಾವತಿ ಅವರು ನಮ್ಮನ್ನಗಲಿ ಒಂದು ವರ್ಷವಾಗಿದೆ. ಇನ್ನು ಎರಡು ದಿನಗಳು ಕಳೆದರೆ ಒಂದು ವರ್ಷದ ಕಾರ್ಯ ಕೂಡ ಮಾಡಬೇಕಿದೆ. ಅದಕ್ಕೂ ಮುನ್ನವೇ ಅಂದುಕೊಂಡಂತೆ ಪುತ್ರ ವಿನೋದ್ ರಾಜ್ ತಾಯಿಯ ಸ್ಮಾರಕವನ್ನು ಮಾಡಿ ಮುಗಿಸಿದ್ದಾರೆ. ತಾಯಿಗಾಗಿ ಅದ್ಭುತವಾದ ಮಂದಿರ ಕಟ್ಟಿಸಿದ್ದಾರೆ.
![DR LEELAVATHI MEMORIAL](https://etvbharatimages.akamaized.net/etvbharat/prod-images/06-12-2024/23054113_thll.jpg)
ಸೋಲದೇವನಹಳ್ಳಿ ಸುತ್ತ ಮುತ್ತಲಿನ ಗ್ರಾಮಸ್ಥರಿಗೆ ಮಾತ್ರ ದೇಗುಲವದು. ಅಷ್ಟು ಅದ್ಭುತವಾಗಿದೆ. ಬಂಗಾರದ ಬರಹಗಳ ಮೂಲಕ ವರನಟಿ ಅವರ ಸ್ಮಾರಕ ಅಭಿಮಾನಿಗಳನ್ನು ಸ್ವಾಗತಿಸುತ್ತೆ. ಮಂದಿರದ ಸುತ್ತಲೂ ದೀಪಾಲಂಕಾರ ಮಾಡಲಾಗಿದೆ. ಲೀಲಾವತಿ ಅಮ್ಮನವರು ಮಾಡಿದ ಸಿನಿಮಾಗಳ ಪ್ರಮುಖ ಫೋಟೋಗಳನ್ನು ಸ್ಮಾರಕದ ಗೋಡೆಗಳಿಗೆ ಹಾಕಲಾಗಿದೆ. ಸುಮಾರು 63ಕ್ಕೂ ಹೆಚ್ಚು ಫೋಟೋಗಳು ನೋಡಗರನ್ನು ಬೆರಗುಗೊಳಿಸುತ್ತೆ. ಲೀಲಾವತಿ ಅಮ್ಮನವರ ಸ್ಮಾರಕವೂ ಕೂಡ ವಿಶೇಷವಾದ ಮಾರ್ಬಲ್ಗಳನ್ನು ಬಳಸಿ ನಿರ್ಮಾಣ ಮಾಡಲಾಗಿದೆ. ಸುತ್ತಲೂ ಮಂಟಪಗಳನ್ನು ನಿಲ್ಲಿಸಲಾಗಿದೆ.
ಲೀಲಾವತಿ ಅಮ್ಮನವರ ಸ್ಮಾರಕದ ಉದ್ಘಾಟನೆಗೆ ರಾಜಕಾರಣಿಗಳು ಸೇರಿದಂತೆ ಸಿನಿಮಾ ರಂಗದ ಹಲವು ಹಿರಿಯ ನಟರು ಆಗಮಿಸಿದ್ದರು. ಆಹಾರ ಸಚಿವ ಹೆಚ್. ಮುನಿಯಪ್ಪ, ಒಕ್ಕಲಿಗ ಮಠದ ನಿರ್ಮಲಾನಂದ ಶ್ರೀಗಳು ಕೂಡ ಸ್ಮಾರಕಕ್ಕೆ ಭೇಟಿ ಕೊಟ್ಟು ಉದ್ಘಾಟನೆ ಮಾಡಿದ್ದಾರೆ. ಇದೇ ವೇಳೆ ಗಿರಿಜಾ ಲೋಕೇಶ್ ಅವರು ಲೀಲಾವತಿ ಹಾಗೂ ವಿನೋದ್ ರಾಜ್ ಅವರ ಸರಳ ಜೀವನದ ಬಗ್ಗೆ ಹಾಡಿ ಹೊಗಳಿದರು.
![DR LEELAVATHI MEMORIAL](https://etvbharatimages.akamaized.net/etvbharat/prod-images/06-12-2024/23054113_mandfd.jpg)
ಇನ್ನು ಸ್ಮಾರಕ ಉದ್ಘಾಟನೆ ವೇಳೆ ಬಂದ ಅತಿಥಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಲೀಲಾವತಿಯವರ ಸ್ಮಾರಕ ನೋಡಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರು.
![DR LEELAVATHI MEMORIAL](https://etvbharatimages.akamaized.net/etvbharat/prod-images/06-12-2024/23054113_thman.jpg)
ಇದನ್ನೂ ಓದಿ: ನೆಲಮಂಗಲ - ಯಶವಂತಪುರ ಸಂಪರ್ಕಿಸುವ ರಸ್ತೆಗೆ ಡಾ.ಲೀಲಾವತಿ ಹೆಸರಿಡುವಂತೆ ಒತ್ತಾಯ