ಅಗರ್ತಲಾ (ತ್ರಿಪುರಾ) : ಇಲ್ಲಿನ ಪ್ರಸಿದ್ಧ ಸೆಪಹಿಜಾಲಾ ವನ್ಯಜೀವಿ ಅಭಯಾರಣ್ಯ ಮತ್ತು ಮೃಗಾಲಯದಲ್ಲಿ ಸಿಂಹ ಜೋಡಿಗೆ ಅಕ್ಬರ್, ಸೀತಾ ಹೆಸರಿಟ್ಟ ವಿವಾದದಲ್ಲಿ ಹಿರಿಯ ಅಧಿಕಾರಿಯ ತಲೆದಂಡವಾಗಿದೆ. ಭಾರೀ ಸದ್ದು ಮಾಡಿದ್ದ ಪ್ರಕರಣವು ಕೋರ್ಟ್ ಮೆಟ್ಟಿಲೇರಿ, ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು. ಒತ್ತಡಕ್ಕೆ ಮಣಿದ ಸರ್ಕಾರ ಇದಕ್ಕೆ ಕಾರಣವಾದ ಅಧಿಕಾರಿಯನ್ನು ಸೇವೆಯಿಂದಲೇ ವಜಾ ಮಾಡಿದೆ.
ಇತ್ತೀಚೆಗೆ ಪಶ್ಚಿಮಬಂಗಾಳ ಮತ್ತು ತ್ರಿಪುರಾ ಸರ್ಕಾರದ ನಡುವೆ ವನ್ಯಜೀವಿ ವಿನಿಯಮ ನಡೆದಿತ್ತು. ಅದರಲ್ಲಿ ಬಂಗಾಳದಿಂದ ಸಿಂಹ ಜೋಡಿಯನ್ನು ತರಲಾಗಿತ್ತು. ಅದರಲ್ಲಿ ಗಂಡು ಸಿಂಹಕ್ಕೆ 'ಅಕ್ಬರ್' ಎಂದು ಸಿಂಹಿಣಿಗೆ 'ಸೀತಾ' ಎಂದು ಹೆಸರಿಸಲಾಗಿತ್ತು. ಇದು ವಿವಾದ ಸೃಷ್ಟಿಸಿತ್ತು. ವಿಶ್ವ ಹಿಂದೂ ಪರಿಷತ್ (ವಿಹೆಚ್ಪಿ) ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರಿತ್ತು.
ಸಿಂಹ ಜೋಡಿಗೆ ದೇವತೆ ಮತ್ತು ಮನುಷ್ಯರ ಹೆಸರಿಟ್ಟಿದ್ದು, ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದೆ ಎಂದು ವಾದಿಸಿತ್ತು. ಇದನ್ನು ಆಲಿಸಿದ ಕೋರ್ಟ್, ಮರು ನಾಮಕರಣಕ್ಕೆ ಸೂಚಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಪಡಸಾಲೆಯಲ್ಲಿ ಆಕ್ಷೇಪ ಕೇಳಿಬಂದಿತ್ತು. ಜೊತೆಗ ಸಂಘಸಂಸ್ಥೆಗಳೂ ವಿರೋಧ ವ್ಯಕ್ತಪಡಿಸಿದ್ದವು.
ಅಧಿಕಾರಿ ತಲೆದಂಡ: ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ಪ್ರಕರಣದ ಹಿಂದೆ ತ್ರಿಪುರಾ ಸರ್ಕಾರದ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಲಾಲ್ ಅಗರ್ವಾಲ್ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಎರಡೂ ಸಿಂಹಗಳನ್ನು ಜೋಡಿಯಾಗಿ ಇರಿಸಲು ಅಧಿಕಾರಿ ಒತ್ತಡ ಹೇರಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದ ಬಳಿಕ ಅವರನ್ನು ಸರ್ಕಾರ ಶಿಸ್ತುಕ್ರಮದ ಅಡಿಯಲ್ಲಿ ಸೇವೆಯಿಂದ ವಜಾ ಮಾಡಿದೆ.
ಕೋರ್ಟ್ನ ಆದೇಶದ ನಂತರವೂ ಸಿಂಹಗಳ ಮರುನಾಮಕರಣ ಮಾಡದಂತೆ ಅಧಿಕಾರಿ ಪ್ರಭಾವ ಬೀರಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಇದರಿಂದ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಸರ್ಕಾರ ಸೂಚಿಸಿತ್ತು. ಜೊತೆಗೆ ಸಿಂಹಗಳಿಗೆ ಮರು ನಾಮಕರಣ ಮಾಡಲೂ ಆದೇಶಿಸಿದೆ.
ಕೇಂದ್ರ ಸರ್ಕಾರದ ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಸುದೀರ್ಘ ಕಾಯುವಿಕೆಯ ನಂತರ ತ್ರಿಪುರ ಮತ್ತು ಪಶ್ಚಿಮ ಬಂಗಾಳದ ನಡುವೆ ಈ ಹಲವಾರು ಪ್ರಾಣಿಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ಮತ್ತೊಂದೆಡೆ, ಬೆಂಗಾಲ್ ಸಫಾರಿ ಪಾಕ್ನಿಂದ ರಾಯಲ್ ಬೆಂಗಾಲ್ ಟೈಗರ್, ತೇಜಲ್ ಮತ್ತು ಶೇರಾ ಎಂಬ ಎರಡು ಹುಲಿ ಮರಿಗಳನ್ನು ತ್ರಿಪುರಾದ ಸೆಪಹಿಜಾಲಾ ಝೂಲಾಜಿಕಲ್ ಪಾರ್ಕ್ಗೆ ಸ್ಥಳಾಂತರಿಸಲಾಗಿದೆ.
ಅದರಲ್ಲಿ 2016ರಲ್ಲಿ ಜನಿಸಿದ 'ಅಕ್ಬರ್' ಎಂಬ ಸಿಂಹವನ್ನು ಮಾತ್ರ ಸಫಾರಿ ಪಾರ್ಕ್ಗೆ ಸ್ಥಳಾಂತರ ಮಾಡಲಾಗಿದೆ. ತ್ರಿಪುರಾ ಮೃಗಾಲಯದಲ್ಲಿ 2018ರಲ್ಲಿ ಜನಿಸಿದ 'ಸೀತಾ' ಸಿಂಹಿಣಿಗೆ ಈಗ ಐದು ವರ್ಷ. ಈ ಎರಡೂ ಸಹ ಸದ್ಯಕ್ಕೆ ಬೆಂಗಾಲ್ ಸಫಾರಿ ಪಾರ್ಕ್ನಲ್ಲಿ ಪ್ರಮುಖ ಆಕರ್ಷಣೆಯಾಗಿವೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: ವಿವಾದ ಎಬ್ಬಿಸಿದ 'ಅಕ್ಬರ್'-'ಸೀತಾ' ಸಿಂಹಗಳ ಮರುನಾಮಕರಣ