ಡೆಹ್ರಾಡೂನ್ (ಉತ್ತರಾಖಂಡ): "ಹವಾಮಾನ ಚೆನ್ನಾಗಿರುತ್ತಿದ್ದರೆ ಮುಂದಿನ 24 ಗಂಟೆಗಳಲ್ಲಿ ನಾವೆಲ್ಲರೂ ಸುರಕ್ಷಿತವಾಗಿ ಕೆಳಗಿಳಿಯುತ್ತಿದ್ದೆವು. ಎಲ್ಲವೂ ಚೆನ್ನಾಗಿತ್ತು. ಇದ್ದಕ್ಕಿದ್ದಂತೆ ಹವಾಮಾನ ಬದಲಾಯಿತು ಮತ್ತು ಎಲ್ಲವೂ ಕೊನೆಗೊಂಡಿತು. ನನ್ನ ಸ್ನೇಹಿತರು ನನ್ನ ಕಣ್ಣೆದುರೇ ಶಾಶ್ವತವಾಗಿ ಅಗಲುವುದನ್ನು ನೋಡಿದೆ. ಮೃತದೇಹಗಳೊಂದಿಗೆ ರಾತ್ರಿ ಕಳೆದೆವು." ಇದು ಸಹಸ್ತ್ರತಾಲ್ ಚಾರಣದಲ್ಲಿ ತಮ್ಮ 9 ಮಂದಿ ಸಹಚರರನ್ನು ಶಾಶ್ವತವಾಗಿ ಕಳೆದುಕೊಂಡವರ ನೋವಿನ ಮಾತುಗಳು.
ಸಹಸ್ತ್ರತಾಲ್ ಚಾರಣದ ನಮಗೆ ತಿಳಿಯದ ಕಥೆ: ಇದು ಸಾವಿನ ದವಡೆಯಿಂದ ಮರಳಿ ಬಂದ ಆ 13 ಜನರ ಕಥೆ. ಉತ್ತರಕಾಶಿಗೆ ಚಾರಣ ಹೋದವರು ಸಾವನ್ನಪ್ಪಿರುವ ಘಟನೆಗಳು ಅನೇಕ ಬಾರಿ ಸಂಭವಿಸಿವೆ. ಉತ್ತರಾಖಂಡದ ಸಹಸ್ತ್ರತಾಲ್ಗೆ 22 ಜನ ಟ್ರೆಕ್ಕಿಂಗ್ ಹೋಗಿದ್ದು, ಅದರಲ್ಲಿ ಒಂಬತ್ತು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸುರಕ್ಷಿತವಾಗಿ ಹೊರಬಂದ 13 ಜನ ಪ್ರತ್ಯಕ್ಷದರ್ಶಿಗಳು, ಅಲ್ಲಿನ ಪರಿಸ್ಥಿತಿ ಎಷ್ಟು ಭೀಕರವಾಗಿತ್ತು ಎಂಬುದನ್ನು ಹೇಳಿದ್ದಾರೆ. ಈ ಅವಘಡದಲ್ಲಿ 13 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಪ್ರಾಣ ಕಳೆದುಕೊಂಡವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಬೆಂಗಳೂರಿಗೆ ರವಾನಿಸಲಾಗಿದೆ.
ಹಿಂದಿರುಗಿ ಬರುತ್ತಿದ್ದೆವು, ಇದ್ದಕ್ಕಿದ್ದಂತೆ ಎಲ್ಲವೂ ಕೊನೆಯಾಯಿತು: ಸಹಸ್ತ್ರತಾಲ್ ಟ್ರೆಕ್ಕಿಂಗ್ ಪಾಯಿಂಟ್ಗೆ ತೆರಳುವ ತಂಡದಲ್ಲಿದ್ದ ಜಸ್ಪಾಲ್ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ಅದೃಷ್ಟವಂತರಲ್ಲಿ ಒಬ್ಬರು. ಜಸ್ಪಾಲ್ ಉತ್ತರಾಖಂಡದ ಉತ್ತರಕಾಶಿ ನಿವಾಸಿ. ಇದಕ್ಕೂ ಮೊದಲು, ಅವರು ಇತರ ಗುಂಪುಗಳೊಂದಿಗೆ ಹಲವಾರು ಬಾರಿ ಈ ಪರ್ವತಕ್ಕೆ ಭೇಟಿ ನೀಡಿದ್ದರು. "ಜೂನ್ 3 ರಂದು ನಾವು ನಮ್ಮ ಬೇಸ್ ಕ್ಯಾಂಪ್ಗೆ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ" ಎಂದು ಜಸ್ಪಾಲ್ ಭಯಾನಕ ಅಂಶಗಳನ್ನು ಹಂಚಿಕೊಂಡಿದ್ದಾರೆ.
ಅಪಾಯ ತಂದ ದೊಡ್ಡ ಆಲಿಕಲ್ಲುಗಳು: "ಅದೇ ದಿನ ನಾವು ನಮ್ಮ ಚಾರಣವನ್ನು ಮುಗಿಸಿ ಹಿಂತಿರುಗಬೇಕಾಗಿತ್ತು. ಇಡೀ ತಂಡ ಹಿಂತಿರುಗುತ್ತಿದ್ದಾಗ ಇದ್ದಕ್ಕಿದ್ದಂತೆ ಹವಾಮಾನ ಹದಗೆಟ್ಟಿತು. ತುಂಬಾ ದಟ್ಟವಾದ ಆಲಿಕಲ್ಲುಗಳು ನಮ್ಮ ಮೇಲೆ ಬೀಳಲು ಪ್ರಾರಂಭಿಸಿದವು. ಕೆಲವೇ ನಿಮಿಷಗಳಲ್ಲಿ ಇಡೀ ಕಣಿವೆಯ ವಾತಾವರಣ ತಣ್ಣಗಾಯಿತು. ನಮ್ಮಿಂದ ನಡೆಯಲು ಸಹ ಸಾಧ್ಯವಾಗಲಿಲ್ಲ. ಮಲೆನಾಡಿನಲ್ಲಿ ನಡೆದಾಡಿದ ಅನುಭವ ಮತ್ತು ಅಂತಹ ವಾತಾವರಣದಲ್ಲಿ ಬದುಕಿದ ಅನುಭವವಿದ್ದರೂ ಇಲ್ಲಿ ನಮ್ಮಿಂದ ಹೆಜ್ಜೆ ಇಡಲು ಅಸಾಧ್ಯವಾಗಿತ್ತು. ಟ್ರೆಕ್ಕಿಂಗ್ಗೆ ಬಂದಿದ್ದ ಜನರಿಗೆ ಚಳಿಯನ್ನು ಸಹಿಸಿಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ಅನೇಕ ಜನರು ಅಂತಹ ಕೆಟ್ಟ ಚಳಿಯನ್ನು ಸಹಿಸಲಾಗದೇ ನಿಧಾನವಾಗಿ ಕುಳಿತುಕೊಳ್ಳಲು ಪ್ರಾರಂಭಿಸಿದರು."
ಮೃತ ದೇಹಗಳೊಂದಿಗೆ ರಾತ್ರಿ ಕಳೆದೆವು, ಬೆಳಗ್ಗೆ ಹೊತ್ತಿಗೆ 9 ಜನರು ಸಾವನ್ನಪ್ಪಿದ್ದರು: "ವಾತಾವರಣ ತುಂಬಾ ಕೆಟ್ಟದಾಗುತ್ತಿದೆ ಎಂದೆನಿಸಿ, ನಾವು ಟ್ರೆಕ್ಕಿಂಗ್ ಗುಂಪಿನ ಮೂವರನ್ನು ಮಾರ್ಗದರ್ಶಿಯೊಂದಿಗೆ ಕೆಳಗೆ ಹೋಗಲು ಹೇಳಿದೆವು. ಆದರೆ ಅವರ ಸ್ಥಿತಿ ಎಷ್ಟು ಹದಗೆಟ್ಟಿತ್ತೆಂದರೆ ಒಂದು ಹೆಜ್ಜೆಯೂ ನಡೆಯಲು ಸಾಧ್ಯವಾಗಲಿಲ್ಲ. ಫೋನ್ ಸಿಗ್ನಲ್ಗಳು ಲಭ್ಯವಿರುವ ಸ್ಥಳಕ್ಕೆ ತಂಡದಿಂದ ಕೆಲವು ಜನರನ್ನು ಕಳುಹಿಸಲು ನಾವು ನಿರ್ಧರಿಸಿದವು. ಆಗ ಆಡಳಿತಕ್ಕೆ ಸಕಾಲದಲ್ಲಿ ಮೆಸೇಜ್ ತಲುಪಿಸಬಹುದು ಅಂದುಕೊಂಡೆವು. ನಿಧಾನವಾಗಿ ಕತ್ತಲಾಗತೊಡಗಿತ್ತು."
ಶಿಬಿರದ ಸ್ಥಳ ತಲುಪಿದ್ದು ಹೀಗೆ: "ಚಳಿ ತಾಳಲಾರದೇ ಕೆಲವರು ಸಾವನ್ನಪ್ಪಿದ್ದರು. ಶವ ಬಿದ್ದಿರುವ ಜಾಗದಲ್ಲಿಯೇ ನಾವು ರಾತ್ರಿ ಕಳೆಯಬೇಕಾಯಿತು. ಕೆಲವರು ಅಲ್ಲಿಯೇ ಉಳಿದರೆ, ಟ್ರೆಕ್ಕಿಂಗ್ ಗುಂಪಿನ ಕೆಲವು ಜನರು ಇಳಿಯಲು ಪ್ರಾರಂಭಿಸಿದರು. ನಾವು ಬೆಳಗ್ಗೆ ನಮ್ಮ ಶಿಬಿರದ ಸ್ಥಳವನ್ನು ತಲುಪಿದೆವು. ಮೆಸೇಜ್ ಮಾಡಲು ಇಳಿದಿದ್ದ ಇಬ್ಬರು ಸರಿಯಾಗಿ ಮೆಸೇಜ್ ಡೆಲಿವರಿ ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಯಿತು. ಆದರೆ, ಅಷ್ಟೊತ್ತಿಗಾಗಲೇ ತಡವಾಗಿತ್ತು. ಒಂದೊಂದಾಗಿ ಒಂಬತ್ತು ಜನರು ಹಿಮದಿಂದಾಗಿ ಸಾವನ್ನಪ್ಪಿದ್ದರು. ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ಇಂತಹ ಅತಿಯಾದ ಚಳಿ ಮತ್ತು ಹಿಮಪಾತದ ನಡುವೆ ಇಷ್ಟು ಎತ್ತರದ ಪರ್ವತದ ಮೇಲೆ ರಾತ್ರಿ ಕಳೆಯುವುದು ಮತ್ತು ನಮ್ಮ ಸುತ್ತಲಿದ್ದ ಜನರು ಈಗ ಈ ಜಗತ್ತಿನಲ್ಲಿಲ್ಲ ಎನ್ನುವ ಸತ್ಯದ ಜೊತೆಗೆ ರಾತ್ರಿ ಕಳೆಯುವುದು ಹೇಗಿರುತ್ತದೆ ಎನ್ನುವುದನ್ನು ನೀವು ಊಹಿಸಬಹುದು. ಆ ಅನುಭವ ತುಂಬಾ ಭಯಾನಕವಾಗಿತ್ತು." ಎನ್ನುತ್ತಾರೆ ಜಸ್ಪಾಲ್.
ಉತ್ತರಕಾಶಿಗೆ ಸುರಕ್ಷಿತವಾಗಿ ತಲುಪಿದ ಟ್ರೆಕ್ಕಿಂಗ್ ಗುಂಪಿನ ಮಹಿಳೆಯೊಬ್ಬರು ಮಾತನಾಡಿ, "ತಾನು ಸುರಕ್ಷಿತವಾಗಿ ತನ್ನ ಮನೆಯ ಕಡೆಗೆ ಹೋಗುತ್ತಿದ್ದೇನೆ" ಎಂದು ತುಂಬಾ ಖುಷಿಯಿಂದ ಹೇಳಿಕೊಂಡರು. "ಆದರೆ ಈ ಟ್ರೆಕ್ಕಿಂಗ್ ಪಾಯಿಂಟ್ ಅನೇಕ ಕೆಟ್ಟ ಹಾಗೂ ಅಳಿಸಲಾಗದ ಗಾಯಗಳನ್ನು ಉಂಟುಮಾಡಿದೆ ಎಂಬುದಂತೂ ಬೇಸರದ ಸಂಗತಿ." ಎಂದರು.
ಅವರು ಇಲ್ಲದಿದ್ದರೆ ನಾವ್ಯಾರೂ ಜೀವಂತವಾಗಿರುತ್ತಿರಲಿಲ್ಲ: ಈ ಸಂಪೂರ್ಣ ಘಟನೆಯ ಕುರಿತು ಅವರನ್ನು ಮಾತನಾಡಿಸಿದಾಗ, "ಸಾವುಗಳು ಯಾವುದೇ ಬಿರುಗಾಳಿ ಅಥವಾ ಅಪಘಾತದಿಂದ ಅಥವಾ ಆಲಿಕಲ್ಲು ಬಿದ್ದು ಸಂಭವಿಸಿಲ್ಲ. ಎಲ್ಲರೂ ಲಘು ಉಷ್ಣತೆಗೆ ಬಲಿಯಾದರು. ಸುರಕ್ಷಿತವಾಗಿ ಉಳಿದವರೂ ಕ್ರಮೇಣ ಈ ಸ್ಥಿತಿಯನ್ನು ತಲುಪುತ್ತಿದ್ದರು. ಆದರೆ ರಕ್ಷಣಾ ಕಾರ್ಯಾಚರಣೆ ನಡೆಸಿ 13 ಮಂದಿಯನ್ನು ರಕ್ಷಿಸಲಾಗಿದೆ. ಹಮಾಲರಾಗಿ ಸ್ಥಳೀಯರು ನಮ್ಮೊಂದಿಗೆ ಇರದಿದ್ದರೆ ನಾವ್ಯಾರೂ ಉಳಿಯುತ್ತಿರಲಿಲ್ಲ ಎನ್ನುತ್ತಾರೆ ಮಹಿಳೆ. ಅವರು ನಮಗೆ ತುಂಬಾ ಸಹಾಯ ಮಾಡಿದರು. ಸ್ಥಳೀಯ ಪೋರ್ಟರ್ ಸಹಾಯವನ್ನು ನಾವು ಎಂದಿಗೂ ಮರೆಯಬಾರದು" ಎನ್ನುತ್ತಾರೆ.
ಲಘು ಉಷ್ಣತೆ ಎಂದರೇನು?: ನಿಮ್ಮ ದೇಹದ ಉಷ್ಣತೆಯು 95 ಡಿಗ್ರಿ ಫ್ಯಾರನ್ಹೀಟ್ಗಿಂತ ಕಡಿಮೆ ಅಂದರೆ 35 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾದಾಗ ಹೈಪೋಥರ್ಮಿಯಾ ಸ್ಥಿತಿಯನ್ನು ಸೃಷ್ಟಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದರಿಂದ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಶಾಖ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಆಗ ನಮ್ಮ ಹೃದಯ ಬಡಿತ ಮತ್ತು ನಮ್ಮ ದೇಹದ ಪ್ರತಿಯೊಂದು ಭಾಗವೂ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ದೊಡ್ಡ ಪರಿಣಾಮ ಉಸಿರಾಟದ ಮೇಲಾಗುತ್ತದೆ. ವ್ಯಕ್ತಿಗೆ ಉಸಿರಾಡಲು ಸಹ ಸಾಧ್ಯವಾಗುವುದಿಲ್ಲ. ವ್ಯಕ್ತಿ ಸಾಯುವ ಪರಿಸ್ಥಿತಿ ಬರುತ್ತದೆ. ಆದ್ದರಿಂದ, ಎತ್ತರದ ಪರ್ವತಗಳಲ್ಲಿ ಕ್ಯಾಂಪಿಂಗ್ ಮತ್ತು ಟ್ರೆಕ್ಕಿಂಗ್ ಹೋಗುವ ಜನರು ಯಾವಾಗಲೂ ತಮ್ಮ ಬಟ್ಟೆಗಳನ್ನು ಉತ್ತಮ, ಹಾಗೂ ಬೆಚ್ಚಗಿನ ಅನುಭವ ಇರುವಂತೆ ಆಯ್ಕೆ ಮಾಡುತ್ತಾರೆ. ಹಾಗಾಗಿ ಟ್ರೆಕ್ಕಿಂಗ್ ಸಮಯದಲ್ಲಿ ಪ್ರತಿಯೊಂದು ಪರಿಸ್ಥಿತಿಯನ್ನು ಎದುರಿಸಲು ಬಟ್ಟೆ ಮತ್ತು ಆಹಾರ ಪದಾರ್ಥಗಳನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬುದನ್ನು ನೋಡುವುದು ಕಡ್ಡಾಯವಾಗುತ್ತದೆ.