ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ತನ್ನ ತಾಯಿ ಸೋನಿಯಾ ಅಪಾರ ಗೌರವ ಹೊಂದಿದ್ದಾರೆ ಹಾಗೂ ಅವರ ಹೇಳಿಕೆಯನ್ನು ಮಾಧ್ಯಮಗಳು ತಿರುಚಿರುವುದು ತುಂಬಾ ದುರದೃಷ್ಟಕರ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕ್ಷಮೆ ಯಾಚಿಸಬೇಕೆಂಬ ಬಿಜೆಪಿಯ ಬೇಡಿಕೆಯನ್ನು ತಳ್ಳಿ ಹಾಕಿದ ಅವರು, ದೇಶ ಹಾಳು ಮಾಡಿದ್ದಕ್ಕಾಗಿ ಬಿಜೆಪಿಯೇ ಮೊದಲು ಕ್ಷಮೆಯಾಚಿಸಲಿ ಎಂದಿದ್ದಾರೆ.
"ನನ್ನ ತಾಯಿಗೆ ಈಗ 78 ವರ್ಷ ವಯಸ್ಸಾಗಿದೆ. 'ಇಷ್ಟು ದೀರ್ಘವಾದ ಭಾಷಣವನ್ನು ಓದಿ ಅಧ್ಯಕ್ಷರಿಗೆ ಸುಸ್ತಾಗಿರಬೇಕು, ಪಾಪ' ಎಂದಷ್ಟೇ ಅವರು ಹೇಳಿದ್ದು. ಅವರಿಗೆ ರಾಷ್ಟ್ರಪತಿಯವರ ಬಗ್ಗೆ ಸಂಪೂರ್ಣ ಗೌರವವಿದೆ. ಇಂಥ ವಿಷಯವನ್ನು ಮಾಧ್ಯಮಗಳು ತಿರುಚುತ್ತಿರುವುದು ತುಂಬಾ ದುರದೃಷ್ಟಕರ" ಎಂದು ಪ್ರಿಯಾಂಕಾ ಗಾಂಧಿ ಸುದ್ದಿಗಾರರಿಗೆ ತಿಳಿಸಿದರು.
"ಅವರಿಬ್ಬರೂ ಗೌರವಾನ್ವಿತ ವ್ಯಕ್ತಿಗಳಾಗಿದ್ದು, ಅವರು ನಮಗಿಂತ ಹಿರಿಯರು. ಹಿರಿಯರಾದ ಸೋನಿಯಾರವರ ಮಾತು ಯಾವುದೇ ಅಗೌರವವನ್ನು ಅರ್ಥೈಸುವುದಿಲ್ಲ ಎಂಬುದು ಬಹಳ ಸ್ಪಷ್ಟವಾಗಿದೆ" ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಸಮಿತಿಯ ಸಭೆಯೊಂದರಲ್ಲಿ ಭಾಗವಹಿಸಿದ ನಂತರ ಸಂಸತ್ ಭವನದ ಸಂಕೀರ್ಣದಿಂದ ನಿರ್ಗಮಿಸುವಾಗ ಹೇಳಿದರು.
ಇದಕ್ಕೂ ಮುನ್ನ ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯ್ ಕೂಡ ಈ ವಿಷಯದ ಬಗ್ಗೆ ಟೀಕೆ ಮಾಡಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
"ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಜಿ ಅವರ ಆರೋಗ್ಯದ ಬಗ್ಗೆ ಶ್ರೀಮತಿ ಸೋನಿಯಾ ಗಾಂಧಿ ಅವರ ಸಹಾನುಭೂತಿಯನ್ನು ಬಿಜೆಪಿಯವರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಭಾರತದ ಪ್ರತಿಯೊಬ್ಬ ವ್ಯಕ್ತಿಗೂ ರಾಷ್ಟ್ರಪತಿಯವರ ಬಗ್ಗೆ ಗೌರವ ಮತ್ತು ಸಹಾನುಭೂತಿ ಇದೆ" ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
"ನೂತನ ಸಂಸತ್ ಭವನದ ಉದ್ಘಾಟನೆ ಅಥವಾ ರಾಮ ಮಂದಿರದ ಉದ್ಘಾಟನೆಗೆ ಆಹ್ವಾನಿಸದೇ ರಾಷ್ಟ್ರಪತಿ ಮುರ್ಮು ಅವರಿಗೆ ಅಗೌರವ ತೋರಿದ್ದಕ್ಕಾಗಿ ಬಿಜೆಪಿ ಉತ್ತರಿಸುತ್ತದೆಯೇ? ಈ ಪ್ರಶ್ನೆಗೆ ಉತ್ತರಿಸುವಂತೆ ನಾನು ಅವರಿಗೆ ಸವಾಲು ಹಾಕುತ್ತೇನೆ" ಎಂದು ಗೊಗೊಯ್ ಹೇಳಿದರು.
ಇದಕ್ಕೂ ಮುನ್ನ, ಸೋನಿಯಾ ಗಾಂಧಿ ಅವರ ಹೇಳಿಕೆಯ ಬಗ್ಗೆ ಬಿಜೆಪಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತ್ತು. "ರಾಷ್ಟ್ರಪತಿಯವರು ಭಾಷಣದ ಕೊನೆಯಲ್ಲಿ ತುಂಬಾ ದಣಿದಿದ್ದರು... ಅವರಿಗೆ ಮಾತನಾಡಲೂ ಸಾಧ್ಯವಾಗಲಿಲ್ಲ, ಪಾಪ" ಎಂದು ಸೋನಿಯಾ ಗಾಂಧಿ ಹೇಳಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ : 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಖರ್ಚು ಮಾಡಿದ್ದು 1,737 ಕೋಟಿ: ಜಾಹೀರಾತಿಗೆ 611 ಕೋಟಿ ವೆಚ್ಚ - BJP POLL EXPENDITURE