ನವದೆಹಲಿ: ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಅವರಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಎಐಎಂಐಎಂ ಅಧ್ಯಕ್ಷ ಅಸಾಸುದ್ದೀನ್ ಓವೈಸಿ ತಿಳಿಸಿದ್ದಾರೆ.
ಮೋದಿ ಮತ್ತು ಕೇಜ್ರಿವಾಲ್ ಸಹೋದರರಿದ್ದಂತೆ, ಒಂದೇ ನಾಣ್ಯದ ಎರಡು ಮುಖ. ಇಬ್ಬರು ಆರ್ಎಸ್ಎಸ್ ತತ್ವ ಹೊಂದಿರುವವರು. ಒಬ್ಬರು ಶಾಖೆಯಿಂದ ಬಂದರೆ, ಮತ್ತೊಬ್ಬರು ಅದರ ಸಂಸ್ಥೆಯಿಂದ ಹೊರ ಬಂದಿರುವವರು ಎಂದು ಚುನಾವಣಾ ಪ್ರಚಾರದಲ್ಲಿ ಓವೈಸಿ ವಾಗ್ದಾಳಿ ನಡೆಸಿದರು.
ಓಕ್ಲಾದ ತಮ್ಮ ಪಕ್ಷದ ಅಭ್ಯರ್ಥಿ ಶಿಫ-ಉರ್- ರೆಹಮಾನ್ ಪರ ಪ್ರಚಾರ ನಡೆಸಿದ ಬಳಿಕ ಶಹೀನ್ ಬಾಗ್ನಲ್ಲಿ ಪಾದಯಾತ್ರೆ ನಡೆಸಿದರು. ಚುನಾವಣೆಯಲ್ಲಿ ಜನರು ಗಾಳಿಪಟದ ಗುರುತಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.
ದೆಹಲಿ ಚುನಾವಣೆಗೆ ಎಐಎಂಐಎಂ ಪಕ್ಷದಿಂದ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದ್ದು, ಮುಸ್ತಾಫಾಬಾದ್ನಿಂದ ತಹೀರ್ ಹುಸೇನ್ ಮತ್ತು ಓಕ್ಲಾದಿಂದ ಶಿಫ-ಉರ್-ರೆಹಮಾನ್ ಕಣದಲ್ಲಿದ್ದಾರೆ. ಈ ಇಬ್ಬರು ಅಭ್ಯರ್ಥಿಗಳು ಪ್ರಸ್ತುತ ದೆಹಲಿ ಗಲಭೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ತಹೀರ್ ಹುಸೇನ್ ಎಎಪಿ ಕೌನ್ಸಿಲರ್ ಆದ ಸಂದರ್ಭದಲ್ಲಿ ಜೈಲು ಸೇರಿದ್ದರು. ಇವರು ಕಳೆದ ಡಿಸೆಂಬರ್ನಲ್ಲಿ ಎಐಎಂಐಎಂ ಸೇರಿದ್ದರು.
ತಹೀರ್ ಹುಸೇನ್ ಮತ್ತು ಶಿಫ-ಉರ್-ರೆಹಮಾನ್ ಕಳೆದ ಐದು ವರ್ಷದಿಂದ ಇಲ್ಲಿಯವರೆಗೂ ಜೈಲಿನಲ್ಲೇ ಇದ್ದಾರೆ. ಆದರೆ, ಮದ್ಯ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್, ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರಿಗೆ ಹೇಗೆ ಜಾಮೀನು ದೊರಕಿತು ಎಂದು ಪ್ರಶ್ನಿಸಿದರು. ಇನ್ನು ಜೈಲಿನಲ್ಲೇ ಇರುವ ಅವರ ತಪ್ಪಾದರೂ ಏನು ಎಂದರು.
ಓಕ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೊರತೆ ವಿರುದ್ಧ ಟೀಕಿಸಿದ ಅವರು, ಇತರೆ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದ್ದು, ಓಕ್ಲಾವನ್ನು ಕಸದ ರಾಶಿಯಾಗಿ ಎಎಪಿ ಸರ್ಕಾರ ಮಾಡಿದೆ ಎಂದು ವಾಗ್ದಾಳಿ ನಡೆಸಿರು. ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಅಸಾಧ್ಯ ಎಂದರು. (ಪಿಟಿಐ)
ಇದನ್ನೂ ಓದಿ: ಶಹಜಹಾನ್ ಉರುಸ್: ಪ್ರವಾಸಿಗರಿಗೆ ಉಚಿತ ಪ್ರವೇಶ, ಬಿಗಿ ಭದ್ರತೆ