ಮೀರತ್ (ಉತ್ತರ ಪ್ರದೇಶ) : ಇಲ್ಲಿನ ಲಿಸಾಡಿ ಗೇಟ್ನ ಸುಹೇಲ್ ಗಾರ್ಡನ್ ಕಾಲೋನಿಯಲ್ಲಿ ಸಾಮೂಹಿಕ ಹತ್ಯೆಗೊಳಗಾದ ಐವರ ಮೃತದೇಹಗಳಿಗೆ ಇಂದು ಅಂತ್ಯಕ್ರಿಯೆ ನಡೆಯಿತು. ದಂಪತಿ ಹಾಗೂ ಮೂವರು ಪುತ್ರಿಯರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಮೋಯಿನ್ ಸಹೋದರನನ್ನ ಹಿಡಿದುಕೊಟ್ಟವರಿಗೆ ಪೊಲೀಸರು 25 ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ಹತ್ಯಾಕಾಂಡದ ಬಗ್ಗೆ ಎಲ್ಲರ ಬಾಯಲ್ಲೂ ಚರ್ಚೆ : ಶುಕ್ರವಾರ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳೆಲ್ಲ ಆಂಬ್ಯುಲೆನ್ಸ್ನಲ್ಲಿ ಕಾಲೋನಿಗೆ ತಲುಪಿದವು. ಕುಟುಂಬ ಸದಸ್ಯರ ಅಂತಿಮ ದರ್ಶನಕ್ಕಾಗಿ ಎಲ್ಲ ಮೃತ ದೇಹಗಳನ್ನು ಸಮೀಪದ ಮದುವೆ ಮಂಟಪದಲ್ಲಿ ಕೆಲಕಾಲ ಇರಿಸಲಾಗಿತ್ತು. ನಂತರ ಅಂತ್ಯಕ್ರಿಯೆಗಾಗಿ ಸ್ಮಶಾನಕ್ಕೆ ಕೊಂಡೊಯ್ಯಲಾಯಿತು. ಈ ವೇಳೆ, ಅಲ್ಲಿ ಜನಸಾಗರವೇ ನೆರೆದಿತ್ತು.

ಈ ಬಗ್ಗೆ ಸ್ಥಳೀಯರೊಬ್ಬರು ಮಾತನಾಡಿ, ಮೋಯಿನ್ ಒಳ್ಳೆಯ ವ್ಯಕ್ತಿ. ಅವನು ಯಾರೊಂದಿಗೂ ಜಗಳವಾಡುತ್ತಿರಲಿಲ್ಲ. ಇಲ್ಲಿಗೆ ಬಂದು 2 ತಿಂಗಳ ಹಿಂದೆಯಷ್ಟೇ ಸೊಹೈಲ್ ಗಾರ್ಡನ್ನಲ್ಲಿ ವಾಸ ಆರಂಭಿಸಿದ್ದರು. ಮನೆ ಕಟ್ಟಲು ಸಿದ್ಧತೆ ನಡೆಸಿದ್ದರು. ಮನೆಯ ಹಬ್ಬದ ನಿಮಿತ್ತ ಎಲ್ಲರಿಗೂ ಸಿಹಿ ಬಡಿಸಿದ್ದರು. ಕೊಂದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಎಸ್ಎಸ್ಪಿ ಡಾ. ವಿಪಿನ್ ತಾಡಾ ಮಾತನಾಡಿ, ಮೋಯಿನ್ ಅವರ ಇತರ ಸಂಬಂಧಿಕರು ಸ್ಥಳಕ್ಕೆ ತಲುಪಿದ್ದಾರೆ. ಆದರೆ, ಅವರ ಸಹೋದರ ನಯೀಮ್ ತಲೆಮರೆಸಿಕೊಂಡಿದ್ದಾನೆ. ಅಸ್ಮಾ ಅವರ ಸಹೋದರ ಶಮೀಮ್ ಅವರು ತಮ್ಮ ಸೋದರ ಮಾವನ ಸಹೋದರ ನಯೀಮ್, ತಸ್ಲೀಮ್ ಮತ್ತು ಸೊಸೆ ನಜ್ರಾನಾ ವಿರುದ್ಧ ಕ್ರಮ ಜರುಗಿಸುವಂತೆ ದೂರು ದಾಖಲಿಸಿದ್ದರು ಎಂದರು.
ಘಟನೆಗೆ ಸಂಬಂಧಿಸಿದಂತೆ ತಸ್ಲೀಂ ಮತ್ತು ನಜ್ರಾನಾ ಅವರನ್ನು ಬಂಧಿಸಿದ್ದೇವೆ. ಪ್ರಮುಖ ಆರೋಪಿ ನಯೀಮ್ ತಲೆಮರೆಸಿಕೊಂಡಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ 4 ಲಕ್ಷ ರೂಪಾಯಿ ವ್ಯವಹಾರ ಮತ್ತು ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎಂಬುದು ತಿಳಿದು ಬಂದಿದೆ ಎಂದಿದ್ದಾರೆ. ನಯೀಮ್ ಬಂಧನಕ್ಕೆ 25,000 ರೂಪಾಯಿ ಬಹುಮಾನ ಘೋಷಿಸಲಾಗಿದೆ.
ಬಂಧನಕ್ಕೆ 4 ತಂಡಗಳ ರಚನೆ : ಮೋಯಿನ್ಗೆ ಸಲೀಂ, ಅಮ್ಜದ್, ಕಲೀಂ, ಮೊಮಿನ್ ಎಂಬ 4 ಜನ ಸಹೋದರರಿದ್ದು, ಇಬ್ಬರು ಮಲ ಸಹೋದರರಿದ್ದಾರೆ. ಅವರಲ್ಲಿ ಒಬ್ಬನ ಹೆಸರು ನಯೀಮ್ ಆಗಿದ್ದರೆ ಇನ್ನೊಬ್ಬನ ಹೆಸರು ತಸ್ಲೀಮ್. ಇದುವರೆಗಿನ ಪೊಲೀಸ್ ತನಿಖೆಯಲ್ಲಿ ನಯೀಮ್ ಪ್ರಮುಖ ಆರೋಪಿಯಾಗಿದ್ದಾನೆ. ಆತನ ಬಂಧನಕ್ಕೆ ನಾಲ್ಕು ತಂಡಗಳನ್ನು ರಚಿಸಲಾಗಿದೆ. ದೆಹಲಿ, ಉತ್ತರಾಖಂಡ ಸೇರಿದಂತೆ ಇತರೆಡೆ ಶೋಧ ನಡೆಸಲಾಗುತ್ತಿದೆ. ಆರೋಪಿಯ ಫೋನ್ ಸ್ವಿಚ್ಡ್ ಆಫ್ ಆಗಿದೆ.
ಏನಿದು ಘಟನೆ ?: ಲಿಸಾಡಿ ಗೇಟ್ನ ಸುಹೇಲ್ ಗಾರ್ಡನ್ ಕಾಲೋನಿಯಲ್ಲಿ ಮೋಯಿನ್, ಅವರ ಪತ್ನಿ ಅಸ್ಮಾ ಮತ್ತು 3 ಮಕ್ಕಳಾದ ಅಫ್ಸಾ (8), ಅಜೀಜಾ (4) ಮತ್ತು ಅದೀಬಾ (1) ಗುರುವಾರ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಮಕ್ಕಳ ಮೃತ ದೇಹಗಳನ್ನು ಬೆಡ್ ಬಾಕ್ಸ್ನಲ್ಲಿ ಬಚ್ಚಿಟ್ಟಿದ್ದರು. ಘಟನೆಯ ನಂತರ ಎಸ್ಎಸ್ಪಿ ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದರು. ಫೋರೆನ್ಸಿಕ್ ಮತ್ತು ಶ್ವಾನ ದಳದ ತಂಡಗಳು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದವು.
ಇದನ್ನೂ ಓದಿ : ಭೀಕರ ಕೊಲೆ! ನೆಲದ ಮೇಲೆ ದಂಪತಿ, ಬೆಡ್ಬಾಕ್ಸ್ನಲ್ಲಿ 1 ವರ್ಷದ ಮಗು ಸೇರಿ ಮೂವರು ಬಾಲಕಿಯರ ಶವ ಪತ್ತೆ - MEERUT HORRIFIC MURDER