ನವದೆಹಲಿ: ಸೆಪ್ಟೆಂಬರ್ 11ರವರೆಗೆ ಇದ್ದಂತೆ ಈ ವರ್ಷ ಭಾರತದಲ್ಲಿ ವಾಡಿಕೆಗಿಂತ ಶೇ 8ರಷ್ಟು ಹೆಚ್ಚು ಮುಂಗಾರು ಮಳೆಯಾಗಿದೆ ಎಂದು ವರದಿಯೊಂದು ಸೋಮವಾರ ತಿಳಿಸಿದೆ. ಉತ್ತಮ ಮಳೆಯ ಕಾರಣದಿಂದ ತರಕಾರಿಗಳು ಮತ್ತು ಹಾಲಿನ ಸರಾಸರಿ ಚಿಲ್ಲರೆ ಬೆಲೆಗಳು ಕೂಡ ಕಡಿಮೆಯಾಗಿವೆ ಎಂದು ವರದಿ ಹೇಳಿದೆ. ದೇಶಾದ್ಯಂತ ಬಿತ್ತನೆ ಬಹುತೇಕ ಪೂರ್ಣಗೊಂಡಿದ್ದು, ಈಗ ಕೊಯ್ಲಿನತ್ತ ಎಲ್ಲರ ಗಮನ ನೆಟ್ಟಿದೆ ಎಂದು ಎಂಕೆ ಗ್ಲೋಬಲ್ ಫೈನಾನ್ಷಿಯಲ್ ಸರ್ವೀಸಸ್ನ 'ಇಂಡಿಯನ್ ರೈನ್ ಫಾಲ್ ಟ್ರ್ಯಾಕರ್' (Indian Rainfall Tracker) ವರದಿ ತಿಳಿಸಿದೆ.
ಒಟ್ಟು 109.2 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಇದು ಕಳೆದ ವರ್ಷಕ್ಕಿಂತ (ಸೆಪ್ಟೆಂಬರ್ 6 ರಂತೆ) ಶೇಕಡಾ 2 ರಷ್ಟು ಹೆಚ್ಚಾಗಿದೆ. 41.0 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಅಕ್ಕಿ, 12.6 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯಗಳು, 18.9 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ, ಒರಟು ಧಾನ್ಯಗಳು ಮತ್ತು 19.2 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳುಗಳ ಬಿತ್ತನೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಒಟ್ಟಾರೆ ಬಿತ್ತನೆ ಪ್ರದೇಶವು ಸಾಮಾನ್ಯ ಬಿತ್ತನೆ ಪ್ರದೇಶದ ಶೇಕಡಾ 99 ರಷ್ಟಿದೆ, ಇದು 2023 ರಲ್ಲಿ ಇದೇ ಸಮಯದಲ್ಲಿ ಶೇಕಡಾ 98 ರಷ್ಟಿತ್ತು.
ವರದಿಯ ಪ್ರಕಾರ, ಆಹಾರ ಧಾನ್ಯಗಳು ಮತ್ತು ತರಕಾರಿಗಳ ಹೆಚ್ಚಿನ ಪೂರೈಕೆಯಿಂದಾಗಿ ಇತ್ತೀಚಿನ ವಾರಗಳಲ್ಲಿ ಅವುಗಳ ಬೆಲೆ ಕಡಿಮೆಯಾಗಿದೆ. ಆದರೆ ಸುಗ್ಗಿಯ ನಂತರ ಮಾರುಕಟ್ಟೆಗಳಿಗೆ ಇನ್ನೂ ಹೆಚ್ಚಿನ ಸರಕು ಪೂರೈಕೆ ಆಗುವವರೆಗೆ ಬೆಲೆಗಳು ಇದೇ ಮಟ್ಟದಲ್ಲಿ ಉಳಿಯುವ ನಿರೀಕ್ಷೆಯಿದೆ.
ಒಟ್ಟಾರೆ ಜಲಾನಯನ ಪ್ರದೇಶವಾರು ಜಲಾಶಯಗಳಲ್ಲಿನ ನೀರಿನ ಮಟ್ಟವು ಉತ್ತಮವಾಗಿದೆ ಮತ್ತು ದೀರ್ಘಕಾಲೀನ ಸರಾಸರಿ ಮತ್ತು ಕಳೆದ ವರ್ಷದ ಮಟ್ಟಕ್ಕಿಂತ ಹೆಚ್ಚಾಗಿದೆ. ಒಟ್ಟಾರೆಯಾಗಿ, ಕಳೆದ ವರ್ಷ ಆಗಿದ್ದ 684.6 ಮಿ.ಮೀ. ಮಳೆಗೆ ಹೋಲಿಸಿದರೆ ಈ ವರ್ಷ ಒಟ್ಟು 817.9 ಮಿ.ಮೀ. ಮಳೆಯಾಗಿದೆ.
ಖಾರಿಫ್ ಬಿತ್ತನೆಯಲ್ಲಿ ಕೂಡ ಉತ್ತಮ ಸುಧಾರಣೆಯಾಗಿದ್ದು, ಎಕರೆವಾರು ಬಿತ್ತನೆ ಕಳೆದ ವರ್ಷಕ್ಕಿಂತ ಶೇಕಡಾ 2.2ರಷ್ಟು ಹೆಚ್ಚಾಗಿದೆ. ದ್ವಿದಳ ಧಾನ್ಯಗಳು ಮತ್ತು ಭತ್ತವನ್ನು ಗರಿಷ್ಠ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ.
"ದೇಶದ ಹೆಚ್ಚಿನ ಪ್ರದೇಶಗಳಲ್ಲಿ ಸಾಮಾನ್ಯದಿಂದ ಹೆಚ್ಚಿನ ಮಳೆಯಾಗಿರುವುದರಿಂದ ಜಲಾಶಯಗಳಲ್ಲಿ ನೀರಿನ ಮಟ್ಟ ಉತ್ತಮವಾಗಿದೆ. ಐಎಂಡಿಯ ಅಂದಾಜಿಗೆ ಅನುಗುಣವಾಗಿ ಮಾನ್ಸೂನ್ ದೇಶಾದ್ಯಂತ ವ್ಯಾಪಿಸಿದೆ. ಹಣದುಬ್ಬರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇದು ಆಶಾದಾಯಕ ಬೆಳವಣಿಗೆಯಾಗಿದೆ" ಎಂದು ಬ್ಯಾಂಕ್ ಆಫ್ ಬರೋಡಾ (ಬಿಒಬಿ)ನ ಅರ್ಥಶಾಸ್ತ್ರಜ್ಞೆ ಅದಿತಿ ಗುಪ್ತಾ ಹೇಳಿದರು.